ಬೆಳೆಗೆ ಕಾನೂನಾತ್ಮಕ ದರ ನಿಗದಿಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ

| Published : Jul 23 2024, 01:52 AM IST / Updated: Jul 23 2024, 11:46 AM IST

ಸಾರಾಂಶ

ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿ ಹಾಗೂ ಪಂಪ್‌ಸೆಟ್‌ ಅನ್ನು ವಿದ್ಯುತ್‌ ಪರಿವರ್ತಕಕ್ಕೆ ಸಂಪರ್ಕಿಸುವ ಶುಲ್ಕ ಹೆಚ್ಚಳ ಮಾಡಿರುವುದನ್ನು ಹಿಂಪಡೆವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

 ಬೆಂಗಳೂರು :  ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿ ಹಾಗೂ ಪಂಪ್‌ಸೆಟ್‌ ಅನ್ನು ವಿದ್ಯುತ್‌ ಪರಿವರ್ತಕಕ್ಕೆ ಸಂಪರ್ಕಿಸುವ ಶುಲ್ಕ ಹೆಚ್ಚಳ ಮಾಡಿರುವುದನ್ನು ಹಿಂಪಡೆವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಸೋಮವಾರ ಪ್ರತಿಭಟನೆ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಂದಾದಾಗ ಪೊಲೀಸರು ತಡೆದರು. ಈ ಹಂತದಲ್ಲಿ ವಾಗ್ವಾದಗಳು ನಡೆದವು. ಹಲವರನ್ನು ವಶಕ್ಕೆ ಪಡೆದ ಪೊಲೀಸರು ನಗರ ಸಶಸ್ತ್ರ ಮೀಸಲು ಪಡೆ (ಕೇಂದ್ರ) ಮೈದಾನಕ್ಕೆ ಕರೆದೊಯ್ದರು. ಮೈದಾನಕ್ಕೆ ಆಗಮಿಸಿದ ಕೃಷಿ ಸಚಿವ ಚಲವರಾಯಸ್ವಾಮಿ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಗಮಿಸಿ ರೈತರಿಂದ ಅಹವಾಲು ಆಲಿಸಿ ಕ್ರಮದ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಅನಾವೃಷ್ಟಿ, ಅತಿವೃಷ್ಟಿ ನಡುವೆ ರಾಜ್ಯದ ರೈತಲು ಸಿಲುಕಿದ್ದು, ಇಂತ ಹೊತ್ತಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾನೂನುಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಈ ಹಿಂದೆ ಪಂಪ್‌ಸೆಟ್‌ನ್ನು ಟಿಸಿಗೆ ಸಂಪರ್ಕಿಸಲು ₹ 25ಸಾವಿರ ಶುಲ್ಕವಿತ್ತು. ಇದನ್ನೀಗ ₹2.50 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ರೈತರಿಗೆ ಹೊರೆಯಾಗಿದೆ. ತಕ್ಷಣ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಿಎಂ ಜೊತೆ ಸಭೆ:

ಸಿಎಆರ್‌ ಮೈದಾನಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರ ನಿಯೋಗದ ಸಭೆ ನಡೆಸಲಾಗುವುದು. ಈ ವೇಳೆ ಆದ್ಯತೆ ಮೇರೆಗೆ ರೈತರ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಬಳಿಕ ರೈತರನ್ನು ಬಿಡುಗಡೆ ಮಾಡಲಾಯಿತು.