ಸಾರಾಂಶ
ಬರ ನಿರ್ವಹಿಸಲು ರಾಜ್ಯ ಸರ್ಕಾರ ವಿಫಲ । ಕ್ರಮದ ರೂಪುರೇಷೆ ಕುರಿತ ಚರ್ಚೆಕನ್ನಡಪ್ರಭ ವಾರ್ತೆ ಹಾಸನ
ಟೀಕೆ ಮಾಡುವ ಭಾರಟೆಯಲ್ಲಿ ರೈತರ ಬಗ್ಗೆ ಕೇವಲವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗು ಹಸಿರು ಸೇನೆ ವತಿಯಿಂದ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಾಜ್ಯದಲ್ಲಿ ಭೀಕರ ಬರಗಾಲವನ್ನು ನಿಭಾಯಿಸಲು ವಿಫಲರಾಗಿರುವ ಸರ್ಕಾರದ ವಿರುದ್ಧ ಹೋರಾಟದ ಮುಂದಿನ ರೂಪುರೇಷೆಯನ್ನು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ರೈತರು ಹಿಂದಿನಿಂದಲೂ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದು, ಕೇವಲ ೫ ಲಕ್ಷ ರು. ಪರಿಹಾರಕ್ಕಾಗಿ ಇಂತಹ ನಿರ್ದಾರ ಕೈಗೊಳ್ಳುತ್ತಿರುವುದಾಗಿ ಶಿವಾನಂದ ಪಾಟೀಲ್ ಟೀಕಿಸಿದ್ದಾರೆ. ಮಾತಾಡುವಾಗ ಎಚ್ಚರದಿಂದ ಇರಬೇಕು. ಒಂದೊಂದು ರುಪಾಯಿ ಸೇರಿಸಿ ೧೦ ಲಕ್ಷ ರು. ಕೊಡುತ್ತೇವೆ ನಿಮ್ಮ ಕುಟುಂಬದವರು ಸಾಯುತ್ತಾರಾ! ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳನ್ನು ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ರೈತರು ಸಾಲ ಮನ್ನಾಕ್ಕಾಗಿ ಬರಗಾಲ ಬಯಸುತ್ತಾರೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ. ರೈತರಿಗೆ ಆತ್ಮಸ್ಥೈರ್ಯ ತುಂಬಬೇಕು. ಬರಗಾಲದಲ್ಲಿ ಎಷ್ಟೇ ನಷ್ಟವಾದರೂ ಭರಿಸುತ್ತೇವೆ ಎನ್ನಬೇಕು. ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ಮನುಷ್ಯ ಬರಗಾಲ ಬಯಸುತ್ತಾರೆ ಅಂತಾರೆ. ನಿಮಗೆ ಮಾನ, ಮರ್ಯಾದೆ ಇದೆಯಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾದರೂ ಮಾನ ಮರ್ಯಾದೆ ಇದೆಯಾ, ರಾಜ್ಯದಲ್ಲಿ ಬರಗಾಲ ಬಂದಿದೆ. ಮರ್ಯಾದೆಯಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಬರಗಾಲ ಎದುರಿಸುವ ಮಂತ್ರಿಯ ನಡವಳಿಕೆ ಇದೆನಾ. ಹೈದರಾಬಾದ್ಗೆ ಹೋಗಿ ತುಲಾಭಾರ ಮಾಡಿಸಿಕೊಂಡು ಬಂದ ವ್ಯಕ್ತಿ ಇವರು. ಇಂತಹ ವ್ಯಕ್ತಿಯನ್ನು ಸಂಪುಟದಲ್ಲಿ ಇಟ್ಟುಕೊಳ್ಳದೆ ತಕ್ಷಣ ಹೊರಗಾಕಿ’ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಭೀಕರ ಬರಗಾಲವನ್ನು ನಿಭಾಯಿಸಲು ವಿಫಲರಾಗಿದ್ದೀರಿ, ಬರಗಾಲದಲ್ಲಿ ರೈತರ ಸಾಲ ಮನ್ನಾ ಮಾಡಲೇಬೇಕು. ಕಬ್ಬು ಬೆಳೆಗಾರರಿಗೆ ಯಥನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು. ಎಂಎಸ್ಪಿ ಜಾರಿ ಮೂಲಕ ರೈತರ ಬೆಲೆ ನಷ್ಟ ಸರಿದೂಗಿಸಬಹುದು. ತೆಂಗು ಬೆಳೆಗಾರರಿಗೆ ಕ್ವಿಂಟಾಲ್ ಕೊಬ್ಬರಿಗೆ ೧೫ ಸಾವಿರ ರು. ಸಾಲದು, ೫ ಸಾವಿರ ರು. ಸಹಾಯ ಧನ ನೀಡಲೇಬೇಕು. ಕೃಷಿ ಕಾಯ್ದೆಗಳ ವಾಪಸಾತಿಗೆ ಈ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದನಕರುಗಳಿಗೆ ಮೇವಿನ ಕೊರತೆಯಾಗಿದ್ದು ಸಿಗುವ ಅಲ್ಪಸ್ವಲ್ಪ ಮೇವಿನ ಬೆಲೆಯೂ ದುಬಾರಿಯಾಗಿದೆ. ಬರಗಾಲದಿಂದ ಬೆಳೆ ನಷ್ಟ, ವಿದ್ಯುತ್ ಕೊರತೆ, ದನಕರುಗಳ ರೋಗ, ಜೀವನ ನಿರ್ವಹಣೆಯ ವಸ್ತುಗಳ ಬೆಲೆ ದುಬಾರಿ ಹೀಗೆ ಹತ್ತು ಸಮಸ್ಯೆಗಳಿಂದ ರೈತರು ಹೈನು ಉದ್ಯಮದಿಂದ ಹಿಂದೆ ಸರಿಯುವಂತಾಗಿದೆ. ಈ ಸಂದರ್ಭದಲ್ಲಿ ಒಕ್ಕೂಟ ಏಕಾಏಕಿ ಹಾಲಿನ ಬೆಲೆ ಕಡಿತ ಹಾಗೂ ಬೂಸ ಬೆಲೆಯನ್ನು ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಾಡಿರುವ ಹಾಲಿನ ಬೆಲೆಯನ್ನು ವಾಪಸ್ ಪಡೆದು ಹೆಚ್ಚಾಗಿರುವ ಬೂಸದ ಬೆಲೆಯನ್ನು ವಾಪಸ್ ಪಡೆಯಬೇಕು. ಒಂದು ಲೀಟರ್ ಹಾಲಿಗೆ ೫೦ ರು. ನೀಡಬೇಕು. ಇಲ್ಲವಾದಲ್ಲಿ ಸಂಘವು ಮುಂದಿನ ಹೋರಾಟದ ತೀರ್ಮಾನವನ್ನು ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಮೊದಲು ಹಾಸನ ಕಸಬಾ ಮಹಿಳಾ ಅಧ್ಯಕ್ಷರಾದ ಚಿಟ್ಟಕ್ಕ ಮತ್ತು ಪಾಳ್ಯ ಹೋಬಳಿ ಅಧ್ಯಕ್ಷರಾದ ಚಿಗಳೂರು ರಾಜೇಗೌಡ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಆನೆಕೆರೆ ರವಿ, ಬೋರನಕೊಪ್ಪಲು ಜಯರಾಮ್, ಜಿಲ್ಲಾಧ್ಯಕ್ಷ ಬಾಬು, ತಿಮ್ಮಣ್ಣ, ರಾಚೇಗೌಡ, ಕಾಳಕ್ಕ, ಪವಿತ್ರ ಉಪಸ್ಥಿತರಿದ್ದರು.ಸರ್ಕಾರದ ವಿರುದ್ಧ ಹೋರಾಟದ ಮುಂದಿನ ರೂಪುರೇಷೆಯನ್ನು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.