ಕಬ್ಬಿನ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

| Published : Aug 10 2024, 01:32 AM IST

ಸಾರಾಂಶ

ಕಬ್ಬಿನ ಬಾಕಿ ಹಣ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರದರ್ಶನ ಮಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಬ್ಬಿನ ಬಾಕಿ ಹಣ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರದರ್ಶನ ಮಾಡಿದರು.

ಮಧ್ಯಾಹ್ನದ ಊಟವನ್ನು ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿನ ಪ್ರತಿಭಟನಾ ಸ್ಥಳದಲ್ಲಿಯೇ ಮಾಡಿ ಗಮನ ಸೆಳೆದ ರೈತರನ್ನು ಭೇಟಿ ಮಾಡಿದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿಯವರು ಕಬ್ಬು ಬಾಕಿ ಹಣವನ್ನು ಆ.25ರ ಒಳಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ಗೂಳುರು ಮತ್ತು ಜೇವರ್ಗಿ ಮೊನಟಗಿ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ ರೈತರಿಗೆ ಪರಿಹಾರ ಕೊಟ್ಟು ಗಟ್ ಕೂಡಿಸಿ ನೀರಾವರಿ ಪ್ರದೇಶ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಭೂಸನೂರು ಸಕ್ಕರೆ ಕಾರ್ಖಾನೆ ಈಗಾಗಲೇ ಪ್ರತಿ ಟನ್ ಕಬ್ಬಿಗೆ ಎಫ್‍ಆರ್‍ಪಿ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 2450 ರು.ಗಳನ್ನು ಕೊಟ್ಟಿದ್ದಾರೆ. ಉಗಾರ್ ಶುಗರ್ಸ್ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನ ನಾಗರಹಳ್ಳಿ ಸಕ್ಕರೆ ಕಾರ್ಖಾನೆ ಎಫ್‍ಆರ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಗೆ 3150 ರು.ಗಳನ್ನು ಕೊಡಬೇಕು. ಸಕ್ಕರೆ ಇಳುವರಿ ಆದರದಲ್ಲಿ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನಲ್ಲಿ ಕೊಡಬೇಕು. ಈಗಾಗಲೇ ಪ್ರತಿ ಟನ್ನ ಕಬ್ಬಿಗೆ 2500 ರು.ಗಳು ಮಾತ್ರ ಕೊಟ್ಟು ಕೈ ತೊಳಕೊಂಡಿದ್ದಾರೆ ಎಂದು ಮುಖಂಡರಾದ ಮಮಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

2022-2023ನೇ ಸಾಲಿನಲ್ಲಿ ಪ್ರತಿ ಟೆನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಎಸ್‍ಎಪಿ ಪ್ರತಿ ಟನ್‍ಗೆ ನೂರು ರೂ.ಗಳು ಮತ್ತು ಡಿಸ್ಟೀಲರಿ ಇರುವ ಕಾರ್ಖಾನೆಗಳು ನೂರ ಐವತ್ತು ರೂ.ಗಳ ಬಾಕಿ ಹಣ ನೀಡಬೇಕೆಂಬ ತೀರ್ಮಾನವನ್ನು ಜಾರಿಗೊಳಿಸುವ ಸಂಬಂಧ. ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ರೈತರಿಗೆ ಪಾಲು ನೀಡಬೇಕೆಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ಧರಾಮ್ ದಣ್ಣೂರ್, ಅಶೋಕ್ ಹೂಗಾರ್, ಶರಣು ಕಾವುಲಗಿ, ಸಿದ್ದಪ್ಪಾ ಗುಡ್ಡೆದ್ ಘತ್ತರ್ಗಾ, ಶ್ರೀಶೈಲ್ ಅಮಣಿ, ಶ್ರೀಕಾಂತ್ ಸಿಂಗೆ, ಅರ್ಜುನ್ ಕುಂಬಾರ್ ಕೊಳುರು, ಗೌಡಪ್ಪಗೌಡ ಪಾಟೀಲ್, ರುಕ್ಕುಮ್‍ಸಾಬ್ ಮುಲ್ಲಾ, ಮಹಾಲಿಂಗ ಮಾಲಿಂಗಪೂರ್, ಶೆಂಕ್ರಪ್ಪಾ ಮ್ಯಾಕೇರಿ ದೇಸಾಯಿ ಕಲ್ಲೂರು, ರಾಯ್ಯಪ್ಪಾ ಮ್ಯಾಕೇರಿ, ಜೆಟ್ಟೆಪ್ಪಾ ಉಕಲಿ, ಶರಣಪ್ಪಾ ಮ್ಯಾಕೇರಿ ಗುಡ್ಡೆವಾಡಿ, ಜಗು ತೆಲ್ಕೂರು, ಈರಪ್ಪಾ ನೆಲೋಗಿ, ಭಿಮಣ್ಣಾ ಕೊಳ್ಳುರು ಪ್ರತಿಭಟನೆಯಲ್ಲಿದ್ದರು.

ರೈತರ ಬೇಡಿಕೆಗಳು

1) ಪ್ರತಿ ಟನ್ ಕಬ್ಬಿಗೆ ಐದು ಸಾವಿರ ನೀಡಬೇಕು. ಎಫ್‍ಅರ್‍ಪಿಯನ್ನು ಶೇಕಡಾ 8.5ರಷ್ಟು ಇಳುವರಿ ಆಧಾರದ ಮೇಲೆ ನಿಗದಿ ಮಾಡಬೇಕು.

2) ಕಟಾವು, ಸಾಗಾಣಿಕೆ ವೆಚ್ಚ 2023-2024ನೇ ಸಾಲಿನ ಆಯುಕ್ತರು ನಿಗದಿಪಡಿಸಿದ ದರದಂತೆ ಸಕ್ಕರೆ ಕಾರ್ಖಾನೆಗಳು ನಡೆದುಕೊಳ್ಳಬೇಕು

3) ಕಾರ್ಖಾನೆಗಳು ಕಬ್ಬು ಕಟವಾದ 14 ದಿನದೊಳಗೆ ಹಣಪಾವತಿ ಮಾಡಬೇಕು

4) ರೇಣುಕ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಒಟ್ಟು 23000 ಜನ ರೈತರ ಒಟ್ಟು 10 ಲಕ್ಷ ಟನ್ ಎಫ್‍ಆರ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 112 ರು. ಗಳಂತೆ ಒಟ್ಟು ಹಣ 112000000 ರು. ಕಬ್ಬಿನ ಬಾಕಿ ಹಣ ಕೊಡಬೇಕು.

5) ಚಿಣಮಗೆರಾ ಸಕ್ಕರೆ ಕಾರ್ಖಾನೆಯಲ್ಲಿ ಎಫ್‍ಆರ್‍ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 162 ರು. ಗಳಂತೆ ಒಟ್ಟು 25000 ಜನ ರೈತರು ಮತ್ತು ಒಟ್ಟು 11 ಲಕ್ಷ ಟನ್ ಕಬ್ಬಿನ ಬಾಕಿ ಹಣ ಒಟ್ಟು ಹಣ 178200000 ರು. ಬಾಕಿ ಹಣ ಕೊಡಬೇಕು.

6) ಭೂಸನೂರು ಸಕ್ಕರೆ ಕಾರ್ಖಾನೆ ಎಫ್‍ಆರ್‍ಪಿ ಪ್ರಕಾರ 3018 ಪ್ರತಿ ಟನ್ ಕಬ್ಬಿಗೆ ಹಣ ಕೊಡಬೇಕು

7) ಸಕ್ಕರೆ ಇಳುವರಿಯನ್ನ ಪರೀಕ್ಷಿಸಲು ರೈತರ ಒಳಗೊಂಡಂತಹ ಸಮಿತಿ ರಚಿಸಬೇಕು