ಸಾರಾಂಶ
ಕಳಸಾ- ಬಂಡೂರಿ ಮಹತ್ವಕಾಂಕ್ಷಿ ಯೋಜನೆಯ ಜಾರಿಗಾಗಿ ಒತ್ತಾಯಿಸಿ ನಡೆಯುವ ಈ ಹೋರಾಟದಲ್ಲಿ ಸುಮಾರು 9 ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಮಠಾಧೀಶರು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ.
ಧಾರವಾಡ: ಮಹದಾಯಿ ಮಹಾವೇದಿಕೆ ನೇತೃತ್ವದಲ್ಲಿ ಹಾಗೂ ಇನ್ನಿತರ ಪ್ರಗತಿಪರ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಅನುಷ್ಠಾನಕ್ಕೆ ಒತ್ತಾಯಿಸಿ ಜೂ. 10ರಂದು ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಹೋರಾಟದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಶಂಕ್ರಣ್ಣ ಅಂಬಲಿ, ಮಂಗಳವಾರ ನಡೆಯುವ ಬೃಹತ್ ಪ್ರತಿಭಟನಾ ಹೋರಾಟವು ಕಲಾಭವದಿಂದ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಮಾಪ್ತಿಗೊಳ್ಳಲಿದೆ. ಆನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ಕಳಸಾ- ಬಂಡೂರಿ ಮಹತ್ವಕಾಂಕ್ಷಿ ಯೋಜನೆಯ ಜಾರಿಗಾಗಿ ಒತ್ತಾಯಿಸಿ ನಡೆಯುವ ಈ ಹೋರಾಟದಲ್ಲಿ ಸುಮಾರು 9 ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಮಠಾಧೀಶರು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ. ಆದಕಾರಣ ಜಿಲ್ಲೆಯ ಎಲ್ಲ ಕನ್ನಡಪರ ಹಾಗೂ ಇನ್ನಿತರ ರೈತ ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅಂಬಲಿ ಮನವಿ ಮಾಡಿದರು.
ಸಭೆಯಲ್ಲಿ ರೈತ ಮುಖಂಡರಾದ ಬಿ.ಎಂ. ಹನಸಿ, ರಾಜಶೇಖರ್ ಮೆಣಸಿನಕಾಯಿ, ಗಂಗನಗೌಡ ಮುದಿಗೌಡರ, ಮಡಿವಾಳಪ್ಪ ದಿಂಡಲಕೊಪ್ಪ, ಶಿವಣ್ಣ ಬಳಿಗಾರ, ಸಂಗನ ಮುಲ್ಲಾ, ಶ್ರೀಶೈಲ ಗೌಡ ಕಮತರ, ಲಕ್ಷ್ಮಣ ಬಕ್ಕಾಯಿ, ಅಶೋಕ ದೊಡ್ಡಮನಿ ಇದ್ದರು.