ಹಗಲಿನಲ್ಲಿ ವಿದ್ಯುತ್‌ ಪೂರೈಸುವಂತೆ ರೈತರಿಂದ ಪ್ರತಿಭಟನೆ

| Published : Jun 27 2025, 12:48 AM IST

ಹಗಲಿನಲ್ಲಿ ವಿದ್ಯುತ್‌ ಪೂರೈಸುವಂತೆ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜಕಲ್ ಹಾಗೂ ಬೋದೂರು ವ್ಯಾಪ್ತಿಯ ನೂರಾರು ರೈತರು ತೋಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಪಂಪ್‌ಸೆಟ್‌ ಹೊಂದಿದ್ದು ಅದಕ್ಕೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ತೋಟಗಳು ಒಣಗುತ್ತಿವೆ.

ಕುಷ್ಟಗಿ:

ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ರೈತರಿಗೆ ಸ್ಪಂದಿಸದ ಲೈನ್‌ಮ್ಯಾನ್ ಬದಲಾವಣೆಗೆ ಒತ್ತಾಯಿಸಿ ತಾಲೂಕಿನ ದೋಟಿಹಾಳ ಗ್ರಾಮದ ಜೆಸ್ಕಾಂ ಕಚೇರಿ ಎದುರು ಬಿಜಕಲ್ ಹಾಗೂ ಬೋದೂರು ಗ್ರಾಮದ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಮಾನಪ್ಪ, ಬಿಜಕಲ್ ಹಾಗೂ ಬೋದೂರು ವ್ಯಾಪ್ತಿಯ ನೂರಾರು ರೈತರು ತೋಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಪಂಪ್‌ಸೆಟ್‌ ಹೊಂದಿದ್ದು ಅದಕ್ಕೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ತೋಟಗಳು ಒಣಗುತ್ತಿವೆ. ಈ ಕುರಿತು ಹಲವು ಬಾರಿ ಲೈನ್‌ಮಾನ್‌ ಗಮನಕ್ಕೆ ತಂದರೂ ಅವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಒಂದು ವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಮತ್ತೊಂದು ವಾರ ಮಧ್ಯಾಹ್ನ 1ರಿಂದ ರಾತ್ರಿ 8ರ ವರೆಗೆ ಎರಡು ಹಂತದಲ್ಲಿ ವಿದ್ಯುತ್‌ ಸರಬರಾಜು ಮಾಡಬೇಕು. ಈ ಮೂಲಕ ರೈತರ ಬದುಕು ಹಸನ ಮಾಡಬೇಕೆಂದು ಒತ್ತಾಯಿಸಿದರು.

ರೈತ ಸಂಗಮೇಶ ಮಾತನಾಡಿ, ಇದೀಗ ಸಂಜೆ 5ರಿಂದ ರಾತ್ರಿ 12ರ ವರೆಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದು ರಾತ್ರಿ ಜಮೀನಿಗೆ ತೆರಳಲು ರೈತರಿಗೆ ತೊಂದರೆಯಾಗುತ್ತಿದೆ. ಈ ವೇಳೆ ವಿಷಜಂತುಗಳ ಹಾವಳಿಯಿಂದ ಹೆಚ್ಚಿನ ಅನಾಹುತ ಸಂಭವಿಸಿವೆ. ಆದರಿಂದ ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆ ವಿದ್ಯುತ್‌ ಸರಬರಾಜು ಮಾಡಬೇಕು. ಇಲ್ಲದಿದ್ದರೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಕುಷ್ಟಗಿ ಜೆಸ್ಕಾಂ ಉಪವಿಭಾಗದ ಅಧಿಕಾರಿಗಳು, ನಿಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ರೈತರಾದ ದೇವಪ್ಪ, ದೊಡ್ಡಪ್ಪ, ರಮೇಶ, ಆನಂದಪ್ಪ, ಶರಣಯ್ಯ, ಗೋವಿಂದಪ್ಪ, ಯಲ್ಲನಗೌಡ, ಶರಣಪ್ಪ, ಶಂಕರಪ್ಪ, ಸುನೀಲ ಸೇರಿದಂತೆ ಅನೇಕರು ಇದ್ದರು. ಕುಷ್ಟಗಿಯ ಪೋಲಿಸರು ಬಂದೋಬಸ್ತ್ ಒದಗಿಸಿಕೊಟ್ಟಿದ್ದರು.