ಬೆಳೆ ಹಾನಿ ಸಾಬೀತಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ

------

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ ವರ್ಷದ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆಹಾನಿಯಾಗಿದ್ದರೂ, ಎರಡನೇ ಕಂತಿನ ಬೆಳೆ ವಿಮೆ ಬಾರದಿರುವುದು ಖಂಡಿಸಿ ಹಾಗೂ ಹಾನಿಗೆ ಸಂಬಂಧಿಸಿ ತಪ್ಪು ಸಿಸಿಎ ವರದಿ ದಾಖಲಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಅಫಜಲಪುರ ತಾಲೂಕಿನ ಭೈರಾಮಡಗಿ, ಗುಡೂರ, ಕೋನಗೂರ, ಹಾಗೂ ಮದರಾ ಬಿ. ಗ್ರಾಮದ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಬೆಳೆವಿಮೆ ಪರಿಹಾರಕ್ಕೆ ಕ್ರಾಪ್ ಕಟಿಂಗ್ ಎಕ್ಸಪಿರಮೆಂಟ್ ( ಸಿಸಿಎ) ವರದಿಯೇ ಮಾನದಂಡ. ಆದರೆ ಅಧಿಕಾರಿಗಳು ಹಾನಿ ಕುರಿತಾಗಿ ವರದಿಯೇ ದಾಖಲಿಸಿಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವುದು ದಾಖಲೆ ಸಹಿತ ಸಾಬೀತಾಗಿದ್ದರೂ ಅಧಿಕಾರಿಗಳು ಅದನ್ನು ಪರಿಗಣಿಸಲು ಮೀನಾಮೇಷ ಎಣಿಸಿದ್ದು, ಕಂತನ್ನು ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಯಲ್ಲನಗೌಡ ಬಸನಗೌಡ ದಣ್ಣೂರ, ಶರಣಬಸಪ್ಪ ಪಡಶೆಟ್ಟಿ, ಯಲ್ಲಣ್ಣಗೌಡ ಪಾಟೀಲ್ ದಣ್ಣೂರ, ಉಗ್ರಮೂರ್ತಿ ಗರೂರ ಗುಡೂರ, ಹಣಮಂತರಾವ ಪಾಟೀಲ್ ನೀಲೂರ, ಜೆ.ಡಿ. ಪಾಟೀಲ್ ಭೈರಾಮಡಗಿ, ಸಾತಲಿಂಗಪ್ಪ ಲೋಣಿ ನೀಲೂರ, ಆನಂದರಾವ ನರಬೋಳಿ, ಚಂದ್ರಕಾಂತ ಪಾಟೀಲ್, ಬಸವಣ್ಣೆಪ್ಪ ಅಂಕಲಗಿ, ವಿಶ್ವನಾಥ ಪಾಟೀಲ್, ನಿಜಗುಣಿ ಚಕ್ರವರ್ತಿ ಇದ್ದರುಬೆಳೆ ಇಳುವರಿ ಪ್ರಮಾಣ ನಿಗದಿ ಸಿಸಿಎ ಸರಿಯಾಗಿಲ್ಲ. ಅಧಿಕಾರಿಗಳ ತಪ್ಪಿನಿಂದ ರೈತರು ಬವಣೆ ಎದುರಿಸುತ್ತಿದ್ದಾರೆ. ವಿಮಾ ಕಂಪನಿಗಳ ಏಜೆಂಟ್ ರಂತೆ ವರ್ತಿಸಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ಡಿಸಿಗೆ ಮನವಿ ಸಲ್ಲಿಸಿದರು.