ರೈತರು ಆರ್ಥಿಕವಾಗಿ ಸದೃಢರಾಗಬೇಕು: ತರಳಬಾಳು ಶ್ರೀ

| Published : Mar 22 2024, 01:00 AM IST

ಸಾರಾಂಶ

ರೈತರಿಗೆ ಈ ವರ್ಷ ಮಳೆ ಕೊಟ್ಟ ಪರಿಣಾಮ ಅಂತರ್ಜಲ ಕುಸಿತಗೊಂಡು ರೈತರು ತೊಂದರೆಗೆ ಸಿಲುಕಿದ್ದಾರೆ. ಭರಮಸಾಗರ ಕೆರೆಯ ಏರಿ ದುರಸ್ತಿ ಇದ್ದ ಕಾರಣ ಭರಮಾಸಾಗರದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಸಾಧ್ಯವಾಗಲಿಲ್ಲ. ಆದರೆ ರೈತರು ದೇಶದ ಬೆನ್ನೆಲುಬು, ರೈತರು ಆರ್ಥಿಕವಾಗಿ ಸದೃಢರಾಗಬೇಕು.

ಸಿರಿಗೆರೆ: ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಸಿರಿಗೆರೆ ಸಮೀಪದ ಬಸವನ ಶಿವನಕೆರೆ ಗ್ರಾಮದ ಬಸವೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಸ್ವಾಮಿ ಉಚ್ಛಯಕ್ಕೆ ಪುಪ್ಪಾಂಜಲಿ ಸಲ್ಲಿಸಿ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ರೈತರಿಗೆ ಈ ವರ್ಷ ಮಳೆ ಕೊಟ್ಟ ಪರಿಣಾಮ ಅಂತರ್ಜಲ ಕುಸಿತಗೊಂಡು ರೈತರು ತೊಂದರೆಗೆ ಸಿಲುಕಿದ್ದಾರೆ. ಭರಮಸಾಗರ ಕೆರೆಯ ಏರಿ ದುರಸ್ತಿ ಇದ್ದ ಕಾರಣ ಭರಮಾಸಾಗರದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಸಾಧ್ಯವಾಗಲಿಲ್ಲ. ಈ ವರ್ಷ ಉತ್ತಮ ಮಳೆಯಾದರೆ ಮೊದಲು ಏತ ನೀರಾವರಿ ಯೋಜನೆ ಭರಮಸಾಗರ ಕೆರೆ ಭರ್ತಿ ಮಾಡುತ್ತೇವೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿವೆ. ರೈತರು ಧೃತಿಗೆದಡೆ ಜೀವನ ನಡೆಸಿ. ಮಳೆ ಎಷ್ಟೇ ಕಮ್ಮಿಯಾದರೂ ದೇವರ ಮೇಲಿರುವ ಭಕ್ತಿ ಕಮ್ಮಿಯಾಗುವುದಿಲ್ಲ. ಜಾತ್ರೆ ಹಾಗೂ ರಥೋತ್ಸವಗಳಿಂದ ಗ್ರಾಮಗಳು ಕಳೆಗಟ್ಟುತ್ತವೆ ಎಂದರು.

ಜಾತ್ರೆ ಅಂಗವಾಗಿ ವಿಶೇಷ ಪೂಜೆಗಳು ನಡೆದು, ಸಂಜೆ ಗೋಧೂಳಿ ಸಮಯದಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅಲಂಕೃತ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವರ ಧ್ವಜ ಹೂವಿನ ಹಾರಗಳನ್ನು ಹರಾಜು ನಡೆಸಲಾಗಿತ್ತು. ಭಕ್ತರು ರಥದ ಕಳಶಕ್ಕೆ ಬಾಳೆಹಣ್ಣುಗಳನ್ನು ಎಸೆದು ಹರಕೆ ಸಲ್ಲಿಸಿದರು. ಪಾದಕಟ್ಟೆಯವರಿಗೆ ತೇರನ್ನು ಎಳೆದು ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದ ಬಳಿ ತರಲಾಯಿತು. ಸಾವಿರಾರು ಭಕ್ತರು ತೆಂಗಿನಕಾಯಿ ಸಮರ್ಪಿಸಿ ರಥದ ಸುತ್ತ ಉರುಳು ಸೇವೆ ಸಲ್ಲಿಸಿದರು. ನಂದಿ ಕೋಲು, ಡೊಳ್ಳು ಕುಣಿತ, ಸಮಾಳ ಮುಂತಾದ ಜನಪದ ಕಲಾತಂಡಗಳು ಮೆರೆಗು ತಂದವು.

ದೇವಸ್ಥಾನ ಸಮಿತಿ ಖಜಾಂಚಿ ಸಾಮಿಲ್ ಶಿವಣ್ಣ, ಬ್ಯಾಲಹಾಳ್ ಗ್ರಾಮ ಪಂಚಾಯಿತಿಯವರು, ಬಸವನ ಶಿವನಕೆರೆ, ಬೇಡರ ಶಿವನಕೆರೆ ಗ್ರಾಮಸ್ಥರು ಇದ್ದರು.