ಸಾರಾಂಶ
ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ರೈತರು ಆತ್ಮಹತ್ಯೆಗೆ ಮುಂದಾಗಬಾರದು. ರೈತ ಸಂಘಟನೆಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು.
ಹುಬ್ಬಳ್ಳಿ: ಇಲ್ಲಿನ ಸವಾಯಿ ಗಂಧರ್ವ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಹಾಗೂ ಸೇನೆಯಿಂದ ರೈತ ಹುತಾತ್ಮ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ರೈತರು ಆತ್ಮಹತ್ಯೆಗೆ ಮುಂದಾಗಬಾರದು. ರೈತ ಸಂಘಟನೆಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ನಮ್ಮಿಂದ ಮತ ಪಡೆದು ನಮ್ಮ ಮೇಲೆ ದರ್ಪ ತೋರುವ ರಾಜಕಾರಿಣಿಗಳಿಗೆ ರೈತರು ಪಾಠ ಕಲಿಸಬೇಕು. ದಶಕಗಳ ಬೇಡಿಕೆಯಾದ ಮಹದಾಯಿ, ಕಳಸಾ ಬಂಡೂರಿ ಜಾರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.ಈ ವೇಳೆ ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು, ಪ್ರಗತಿಪರ ರೈತರು, ಸೈನಿಕರು, ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನಗರದ ಚೆನ್ನಮ್ಮ ವೃತ್ತದಿಂದ ನಡೆದ ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಗಮನಸೆಳೆಯಿತು. ಮಂಟೂರಿನ ರಾಮಲಿಂಗೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಸಂಘಟನೆಯ ಡಾ. ವಾಸುದೇವಿ ಮೇಟಿ, ಫಕ್ಕೀರ ಪೂಜಾರ, ಉಮೇಶ ಹಿರೇಮಠ, ಬಸವರಾಜ ಸಂಭೋಜಿ, ಶಿವಾನಂದ ನಾಯ್ಕರ್, ಸಿದ್ದಯ್ಯ ಕಟ್ನೂರಮಠ, ಅನ್ನಪೂರ್ಣಾ ಹೊಸಮನಿ, ಪುಷ್ಪಾ ಹಿರೇಮಠ, ಚಂದ್ರಹಾಸ ಜಾಯನಗೌಡ್ರ ಸೇರಿದಂತೆ ಸಂಘಟನೆಯ ವಿವಿಧ ಜಿಲ್ಲಾ ಅಧ್ಯಕ್ಷರು, ರೈತ ಮುಖಂಡರು ಉಪಸ್ಥಿತರಿದ್ದರು.