ಸಾರಾಂಶ
ಲಾಭದಾಯಕ ಕೃಷಿಗಾಗಿ ಹಾಗೂ ಅಂತರ ಬೇಸಾಯ ವಾಣಿಜ್ಯ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ಪಡೆದು ರೈತರು ಆಧುನಿಕ ಕೃಷಿಗೆ ಮುಂದಾಗಬೇಕು ಎಂದು ಕೃಷಿ ವಿಜ್ಞಾನಿ ಡಾ.ಸಿದ್ದಪ್ಪ ಅಂಗಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲಾಭದಾಯಕ ಕೃಷಿಗಾಗಿ ಹಾಗೂ ಅಂತರ ಬೇಸಾಯ ವಾಣಿಜ್ಯ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ಪಡೆದು ರೈತರು ಆಧುನಿಕ ಕೃಷಿಗೆ ಮುಂದಾಗಬೇಕು ಎಂದು ಕೃಷಿ ವಿಜ್ಞಾನಿ ಡಾ.ಸಿದ್ದಪ್ಪ ಅಂಗಡಿ ಹೇಳಿದರು.ತಾಲೂಕಿನ ಬೇವಿನಮಟ್ಟಿ, ಕಿರಸೂರ, ನೀರಲಕೇರಿ ರೈತರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ, ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಕೃಷಿ ತೋಟಗಾರಿಕೆ ಮತ್ತು ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ವಿಜ್ಞಾನಿಗಳ ನಡೆ ರೈತರ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣು ಮಾದರಿ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಭವ್ಯ, ಪೂರ್ವ ಮುಂಗಾರು ಬೆಳೆಗಳಾದ ತೊಗರಿ, ಹೆಸರು ಮೆಣಸಿನಕಾಯಿ, ಈರುಳ್ಳಿ ಬೆಳೆಗಳ ಹೊಸ ತಳಿಗಳ ಮಾಹಿತಿ ನೀಡಿದರು. ಹವಾಮಾನ ತಜ್ಞರಾದ ಬಸವರಾಜ, ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಮತ್ತು ಮುಂದಿನ ಹದಿನೈದು ದಿನಗಳಲ್ಲಿಯ ಹವಾಮಾನ ಮಾಹಿತಿಯನ್ನು ರೈತರಿಗೆ ತಿಳಿಸಿದರು. ಕೃಷಿ ಇಲಾಖೆಯ ಸ್ನೇಹಾ ಕರಣಿ, ಸರಕಾರ ಕೃಷಿ ಅಭಿವೃದ್ಧಿಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರಗಳ ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದ್ದು, ರೈತರು ಅಗತ್ಯ ದಾಖಲೆಗಳೊಂದಿಗೆ ಈ ಯೋಜನೆ ಸವಲತ್ತು ಪಡೆದುಕೊಳ್ಳಬೇಕು ಎಂದರು. ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಆಹಾರ ಭದ್ರತೆ ಯೋಜನೆ ಅಡಿಯಲ್ಲಿ ಸಿಗುವ ಪೂರ್ವ ತಳಿಗಳ ಬೀಜಗಳ ವಿವರಗಳನ್ನು ರೈತರಿಗೆ ತಿಳಿಸಿದರು. ಮುಂಗಾರು ಬೆಳೆಗಳನ್ನು ಹಾಗೂ ಪರ್ಯಾಯ ಬೆಳೆಗಳ ಮಾದರಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದ ವಿಜ್ಞಾನಿಗಳು ರೈತರಲ್ಲಿರುವ ಗೊಂದಲ ನಿವಾರಿಸಿದರು. ಆತ್ಮ ಉಪಯೋಜನಾ ನಿರ್ದೇಶಕರು ಮಾತನಾಡಿ, ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳಾದ ಜಾನುವಾರ ಹೈನುಗಾರಿಕೆ ಕೋಳಿ, ಕುರಿ ಸಾಕಾಣಿಕೆಗೆ ಪ್ರಸಿದ್ಧಿಯಾದ ದೇಶಿಯ ತಳಿಗಳನ್ನು ಸಂರಕ್ಷಿಸಿ ಅಲ್ಪಾಧಿಯಲ್ಲಿಯೇ ಅಪಾರ ಲಾಭ ಪಡೆಯುವಂತಹ ಕೌಶಲ್ಯಗಳ ಬಗ್ಗೆ ವಿವರಿಸಿದರು. ಈಗಾಗಲೇ ರೈತರು ತಮ್ಮ ಹಳೆಯ ತಳಿ ಬಳುಸುತ್ತಿದ್ದರೆ ಅವುಗಳನ್ನು ನೋಂದಣಿ ಮಾಡಲು ತಿಳಿಸಿದರು.ಪ್ರಗತಿಪರ ರೈತರಾದ ಷನ್ನಮುಖ ಅಂಗಡಿ, ಹನುಮಂತ ಮಳಗಾವಿ, ರಂಗಪ್ಪ ಇಂಗಳಗಿ, ರಂಗಪ್ಪ ಪೂಜಾರಿ, ತಿಪ್ಪಣ ಮಜ್ಜಗಿ, ವಿಠ್ಠಲ ವಾಲಿಕಾರ,ಗದಿಗೆಪ್ಪ ಕರಡಿ ಇತರರು ಇದ್ದರು.