6ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

| Published : May 22 2024, 12:53 AM IST

ಸಾರಾಂಶ

ಜಂಬಗಿ (ಆ), ಮಾದಾಳ, ಹುಣಶ್ಯಾಳ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಂಬಗಿ (ಆ), ಮಾದಾಳ, ಹುಣಶ್ಯಾಳ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಕೆರೆ ನೀರು ತುಂಬದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರೊಂದಿಗೆ ಹೋರಾಟ ನಡೆಸುತ್ತಿದೆ. ಅಲ್ಲದೇ, ಈ ಕೂಡಲೇ ನೀರು ಹರಿಸಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತ ಸಂಘದ ತಾಲೂಕು ಉಪಾಧ್ಯಕ್ಷ ಪ್ರಕಾಶ ತೇಲಿ ಮಾತನಾಡಿದ ಅವರು, ಜಂಬಗಿ ಕೆರೆಗೆ ನೀರು ತುಂಬಿಸಬೇಕು. ಇಲ್ಲವಾದಲ್ಲಿ ಬುಧವಾರ ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ಜಂಬಗಿ ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು. ನೀರು ಹರಿಸುವವರೆಗೂ ಅಲ್ಲಿಯೇ ಕುಳಿತು ಮಕ್ಕಳು, ಮಹಿಳೆಯರು ಹಾಗೂ ಧನಕರುಗಳೊಂದಿಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದರು.

ಆಹೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಾಣಗೇರ ಮಾತನಾಡಿ, ಕೆರೆಗೆ ನೀರು ಹರಿಸಬೇಕೆಂದು ಈಗಾಗಲೇ ಸಾಕಷ್ಟು ಬಾರಿ ಮನವಿ ನೀಡಲಾಗಿದ್ದು, ಅಧಿಕಾರಿಗಳು ಅಲ್ಲಲ್ಲಿ ನೀರು ಸಾಕಷ್ಟು ಪೋಲಾಗುತ್ತಿದ್ದು, ಅವುಗಳನ್ನು ಬಂದ್ ಮಾಡಿದರೆ ನೇರವಾಗಿ ಜಂಬಗಿ ಕೆರೆಗೆ ನೀರು ಬರುವುದರಲ್ಲಿ ಸಂಶಯವಿಲ್ಲ. ಆದರೆ ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಮಧ್ಯದಲ್ಲಿ ನೀರು ಪೋಲಾಗುತ್ತಿದೆ. ಕೂಡಲೇ ಅಧಿಕಾರಿಗಳು ಅದನ್ನು ಬಂದ್ ಮಾಡಿಸಬೇಕು. ಆದರೆ ಪ್ರಭಾವಿಗಳು ತಮಗೆ ಬೇಕಾದಲ್ಲಿ ನೀರು ಬಿಡಿಸಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದ ಅಧಿಕಾರಿಗಳು ಸಬೂಬು ಹೇಳುತ್ತಾ ಹಾಳು ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ರೈತ ಹೋರಾಟಗಾರ ಗುರಪ್ಪ ಸೋಂಪುರ ಮಾತನಾಡಿ, ಜಂಬಗಿ ಸಮೀಪದ ಹುಣಶ್ಯಾಳ (ಮಾದಾಳ) ಕೆರೆ ಒಮ್ಮಿಯೂ ತುಂಬಿಲ್ಲ. ಈ ಕೆರೆಯನ್ನು ಅಧಿಕೃತವಾಗಿ ಕೆರೆ ನೀರು ತುಂಬುವ ಯೋಜನೆಯಡಿ ಸೇರಿಸಿ, ನೀರು ತುಂಬಿಸಿದರೆ ಈ ಭಾಗದ ಸಾಕಷ್ಟು ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಎಂದರು.

ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಿಬೂಬ ಬಾಷಾ ಮನಗೂಳಿ, ಚನ್ನಪ್ಪ ತೇಲಿ, ಭೀಮಶಂಕರ ರಜಪೂರ, ಚನ್ನಪ್ಪ ವಾಡೇದ, ಸಿದ್ದು ತೇಲಿ, ಬಸವರಾಜ ಗುದಳೆ, ಸದಾಶಿವ ಕೊಣಸಿರಸಗಿ, ಸಂಗಮೇಶ ತೇಲಿ, ಪ್ರಭು ಕಾರಜೋಳ, ಸಾಯಬಣ್ಣ ಸಮಗೊಂಡ, ಕರೆಪ್ಪ ಸೋಲಾಪುರ, ಬಸವರಾಜ ಮಸಳಿ, ಸುಭಾಸ ಪೂಜಾರಿ, ಚನ್ನಪ್ಪ ಜಮಖಂಡಿ, ಸಂಗಮೇಶ ಜಮಖಂಡಿ, ಶ್ರೀಶೈಲ ದಿನ್ನಿ, ಪಾಂಡು ಗೊರನಾಳ, ಸಿದ್ದು ಕಾಪಸೆ, ಶ್ರೀಶೈಲ ಸಾಲಿ, ಅಮಿತ ಡಿಗ್ಗಾವಿ, ರಾಕೇಶ ಡೊಣೂರ, ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ಮಲ್ಲಿಕಾರ್ಜುನ ಬಳವಲ, ಬಸವರಾಜ ಹಡಪದ, ಮುತ್ತು ಕಂಬಾರ, ಯಲ್ಲಪ್ಪ ನಿವಳಖೇಡ, ಆದಮಸಾಬ ಡೋಣೂರ, ಶಿವಪದ್ಮಾ ತೋರವಿ ಸೇರಿದಂತೆ ಮುಂತಾದವರು ಇದ್ದರು.