ಹಾನಗಲ್ಲ: ಲಾಭದ ಉದ್ದೇಶಕ್ಕೆ ಕೆಲಸ ಮಾಡುತ್ತಿರುವ ಖಾಸಗಿ ಸ್ವಾಮ್ಯದ ಬೆಳೆವಿಮಾ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ರೈತ ಸಮೂಹದ ನೆರವಿಗೆ ನಿಲ್ಲುವ ಬದಲಿಗೆ ಲಾಭ ಗಳಿಕೆ ಕಡೆಗೆ ಕಂಪನಿಗಳು ಗಮನ ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಮಾಸನಕಟ್ಟಿ ಗ್ರಾಮದ ರಾಜಶೇಖರ ಹಲಸೂರ ಅವರ ಹೊಲದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಪಿಎಂ ಕುಸುಮ್ ಯೋಜನೆಯಡಿ ಅಳವಡಿಸಲಾದ ಸೋಲಾರ್ ಚಾಲಿತ ಕೃಷಿ ಪಂಪ್ಸೆಟ್ ಉದ್ಘಾಟಿಸಿ ಅವರು ಮಾತನಾಡಿದರು. ೨೦೧೬ರ ವರೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಕಂಪನಿಗಳಿಗೆ ಬೆಳೆವಿಮೆ ಭರಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕಂಪನಿಗಳು ಲಾಭನಷ್ಟದ ಲೆಕ್ಕಾಚಾರ ಮಾಡದೇ ರೈತರ ನೆರವಿಗೆ ನಿಲ್ಲುತ್ತಿದ್ದವು. ಆದರೀಗ ಕೇಂದ್ರ ಸರ್ಕಾರದ ಅಧೀನದ ಕಂಪನಿಗಳ ಬದಲಿಗೆ ಖಾಸಗಿ ಸ್ವಾಮ್ಯದ ಕಂಪನಿಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇವು ರೈತರ ಹಿತ ಸಂಪೂರ್ಣವಾಗಿ ಕಡೆಗಣಿಸಿ ಬೆಳೆವಿಮಾ ಪರಿಹಾರ ಬಿಡುಗಡೆಯಲ್ಲಿ ಅನ್ಯಾಯ ಮಾಡುತ್ತಿವೆ. ಸೃಷ್ಟಿ ನಂಬಿ, ಬೆವರು ಹರಿಸಿ ದುಡಿಯುತ್ತಿರುವ ರೈತ ಸಮೂಹ ಬೆಳೆವಿಮಾ ಪರಿಹಾರದ ವಿಚಾರದಲ್ಲಿ ಸಂಕಷ್ಟಕ್ಕೊಳಗಾಗಿದೆ ಎಂದರು.ಹಿಂದೆ ಡಿ.ಕೆ. ಶಿವಕುಮಾರ್ ಅವರು ಇಂಧನ ಸಚಿವರಿದ್ದಾಗ ಸೋಲಾರ್ ನೀತಿ ಜಾರಿಗೆ ತರಲಾಯಿತು. ಅದೇ ಮುಂದೆ ದೇಶವ್ಯಾಪಿ ವಿಸ್ತಾರಗೊಂಡಿತು. ನಮ್ಮಲ್ಲಿಂದು ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಮಾರ್ಗಗಳಿವೆ. ಆದರೆ ವಿತರಣಾ ಜಾಲದ ವ್ಯವಸ್ಥೆ ಇಲ್ಲದೇ ಸಮಸ್ಯೆ ತಲೆದೋರುತ್ತಿದೆ. ರೈತರಿಗೆ ಅನುಕೂಲ ಕಲ್ಪಿಸಲು ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿತು. ಅದು ಇಂದಿಗೂ ಮುಂದುವರೆದಿದ್ದು, ವಾರ್ಷಿಕ ₹೨೦ ಸಾವಿರ ಕೋಟಿ ವ್ಯಯ ಮಾಡಲಾಗುತ್ತಿದೆ ಎಂದು ಹೇಳಿದ ಅವರು ವಿದ್ಯುತ್, ನೀರು ಉಳಿತಾಯ ಮಾಡಿ ಸುಧಾರಿತ ಪದ್ಧತಿಗಳ ಮೂಲಕ ರೈತರು ಹೆಚ್ಚು ಲಾಭ ಗಳಿಸಲು ಮುಂದಾಗಬೇಕಿದೆ. ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಲ್ಲರೂ ಕುಳಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಎಂದರು.
ರೈತ ರಾಜಶೇಖರ ಹಲಸೂರ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರ ಪ್ರಯತ್ನದಿಂದ ಇಡೀ ಜಿಲ್ಲೆಯಲ್ಲಿ ಪಿಎಂ ಕುಸುಮ್ ಯೋಜನೆಯ ಅನುಷ್ಠಾನದಲ್ಲಿ ಹಾನಗಲ್ ತಾಲೂಕು ಮೊದಲ ಸ್ಥಾನದಲ್ಲಿದೆ. ಯೋಜನೆಯಡಿ ಒಟ್ಟು ೨೨೫ ರೈತರು ಹೆಸರು ನೋಂದಾಯಿಸಿದ್ದಾರೆ. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿತಗೊಳಿಸಿ ಸೌರಶಕ್ತಿ ಬಳಕೆಗೆ ಮುಂದಾಗಬೇಕಿದೆ ಎಂದರು.ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಹೆಸ್ಕಾಂ ಎಇಇ ಸಂತೋಷ ಮರಿಗೌಡ್ರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ, ಮುಖಂಡರಾದ ಈರಣ್ಣ ಬೈಲವಾಳ, ಮಲ್ಲೇಶಪ್ಪ ಬಿಜಾಪುರ, ಕರಿಯಪ್ಪ ಗುಡ್ಡದ, ರುದ್ರಪ್ಪ ಹಲಸೂರ, ಮಂಜಪ್ಪ ತಿಮ್ಮಾಪುರ, ಬೀರಪ್ಪ ಹಾದಿಮನಿ, ರುದ್ರಗೌಡ ಪಾಟೀಲ, ಬಾಪುಗೌಡ ಪಾಟೀಲ, ಚನ್ನಬಸನಗೌಡ ಪಾಟೀಲ, ಜಂಬಯ್ಯ ಚಿಕ್ಕಮಠ, ಸುಲೇಮಾನ್, ರವಿ ಬಾರ್ಕಿ, ಶಾಂತನಗೌಡ ಪಾಟೀಲ, ಮಲಕಪ್ಪ ಸಣ್ಣಪ್ಪನವರ, ಗಂಗಮ್ಮ ತಿಮ್ಮಾಪುರ, ಪರಸಪ್ಪ ಕೌಡಕಿ, ಬಸನಗೌಡ ಪಾಟೀಲ, ಶಿವರಾಜ ಸಂಕಣ್ಣನವರ, ಬಾನಪ್ಪ ಸಂಕಣ್ಣನವರ, ಮಲ್ಲಿಕಾರ್ಜುನ ಸಂಕಣ್ಣನವರ, ಈರಪ್ಪ ಕಮ್ಮಾರ ಇದ್ದರು.