“ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು” ಬಗ್ಗೆ ಒಂದು ದಿನದ MIDH-ರೈತರ ತರಬೇತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐ.ಸಿ.ಎ.ಆರ್-ಐ.ಐ.ಎಸ್.ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ರೈತರ ತರಬೇತಿ ಕಾರ್ಯಕ್ರಮ ಐ.ಸಿ.ಎ.ಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಲದಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡು ಪ್ರಾಯೋಜಿತ “ಸುಸ್ಥಿರ ಕಾಳುಮೆಣಸು ಮತ್ತು ಶುಂಠಿ ಉತ್ಪಾದನೆಗೆ ಸುಧಾರಿತ ಕೃಷಿ-ತಂತ್ರಜ್ಞಾನಗಳು” ಬಗ್ಗೆ ಒಂದು ದಿನದ MIDH-ರೈತರ ತರಬೇತಿ ಕಾರ್ಯಕ್ರಮ ನಡೆಯಿತು.

ಈ ತರಬೇತಿ ಕಾರ್ಯಕ್ರಮವನ್ನು ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಹೋಮಿ ಚೇರಿಯನ್ ಉದ್ಘಾಟಿಸಿದರು. ಈ ಸಂದರ್ಭ ಐಸಿಎಆರ್–ಐಐಎಸ್‌ಆರ್, ನಿರ್ದೇಶಕರಾದ ಡಾ. ಆರ್. ದಿನೇಶ್; ಬೆಳೆ ಉತ್ಪಾದನೆ ವಿಭಾಗದ ಮುಖ್ಯಸ್ಥರಾದ ಡಾ. ವಿ. ಶ್ರೀನಿವಾಸನ್; ಐಸಿಎಆರ್–ಐಐಎಸ್‌ಆರ್, ಪ್ರಾದೇಶಿಕ ಕೇಂದ್ರ, ಅಪ್ಪಂಗಲದ ಪ್ರಧಾನ ವಿಜ್ಞಾನಿ ಡಾ. ಎಸ್. ಜೆ. ಅಂಕೇಗೌಡ ಮತ್ತು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಜಿ. ಎ. ರಾಜಣ್ಣ ಉಪಸ್ಥಿತರಿದ್ದರು.

ಡಾ. ಜಿ. ಎ. ರಾಜಣ್ಣ ಅವರು ಎಲ್ಲರನ್ನೂ ಸ್ವಾಗತಿಸಿದರು. ಉದ್ಘಾಟನಾ ಭಾಷಣದಲ್ಲಿ ಡಾ. ಹೋಮಿ ಚೇರಿಯನ್ ಅವರು DASD ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪರಿಚಯ ನೀಡಿದರು ಮತ್ತು ಸಂಬಾರ ಬೆಳೆಗಳ ಮೌಲ್ಯವರ್ಧನೆಯ ಮಹತ್ವವನ್ನು ಒತ್ತಿಹೇಳಿದರು. ಡಾ. ಆರ್. ದಿನೇಶ್ ಅವರು ಹವಾಮಾನ ಬದಲಾವಣೆಯ ಹಿನ್ನೆಲೆಗಳಲ್ಲಿ ಸುಧಾರಿತ ತಳಿಗಳು ಹಾಗೂ ಸುಸ್ಥಿರ ಉತ್ಪಾದನಾ ಪದ್ಧತಿಗಳ ಮಹತ್ವವನ್ನು ವಿವರಿಸಿದರು.

ತಾಂತ್ರಿಕ ಅಧಿವೇಶನದಲ್ಲಿ, ಐಸಿಎಆರ್–ಐಐಎಸ್‌ಆರ್, ಅಪ್ಪಂಗಲದ ಹಿರಿಯ ವಿಜ್ಞಾನಿ ಡಾ. ಎಂ. ಎಸ್. ಶಿವಕುಮಾರ್ ಅವರು ಕಾಳುಮೆಣಸು ಮತ್ತು ಶುಂಠಿಯ ಸುಧಾರಿತ ತಳಿಗಳ ಕುರಿತು ಉಪನ್ಯಾಸ ನೀಡಿದರು. ಕಾಳುಮೆಣಸಿನ ನರ್ಸರಿ ತಂತ್ರಜ್ಞಾನಗಳ ಕುರಿತು ಡಾ. ಎಚ್. ಜೆ. ಅಕ್ಷಿತ ಅವರು ವಿವರಿಸಿದರು. ಡಾ. ಎಸ್. ಜೆ. ಅಂಕೇಗೌಡ ಅವರು ಕಾಳುಮೆಣಸಿನ ವೈಜ್ಞಾನಿಕ ಕೃಷಿ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಡಾ. ವಿ. ಶ್ರೀನಿವಾಸನ್ ಅವರು ಶುಂಠಿಯ ಉತ್ಪಾದನಾ ತಂತ್ರಜ್ಞಾನಗಳ ಕುರಿತು ಮಾತನಾಡಿದರು. ಕರಿ ಮೆಣಸು ಮತ್ತು ಶುಂಠಿಯ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಡಾ. ಆರ್. ಪ್ರವೀಣ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಡಾ. ಎಚ್. ಜೆ. ಅಕ್ಷಿತಾ ಅವರು ವಂದನಾರ್ಪಣೆ ಸಲ್ಲಿಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 150 ರೈತರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರೈತರ ಪ್ರಯೋಜನಕ್ಕಾಗಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು.