ಎನ್‌.ಆರ್.ಪುರ, ಕೊಪ್ಪದ ಕಚೇರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಎನ್.ಆರ್.ಪುರ ಹಾಗೂ ಕೊಪ್ಪ ಕಚೇರಿಗಳು ಫೆ.21 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫೆ.21 ರಂದು ಕಚೇರಿ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಿಟ್ಲ್ ಫ್ಲವರ್ ಚರ್ಚ್ ಸಮುದಾಯ ಭವನದಲ್ಲಿ ನಡೆಯಲಿದೆ. ಈಗಾಗಲೇ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನೆ ಟ್ರಸ್ಟ್ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್‌, ಗೌರವಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಕಾರ್ಯಾಧ್ಯಕ್ಷರಾಗಿ ತಾವು ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳನ್ನು ಶನಿವಾರ ಅಧಿಕೃತವಾಗಿ ಘೋಷಿಸಲಾಗುವುದು ಎಂದರು.

ಕೊಪ್ಪ ಹಾಗೂ ಎನ್.ಆರ್.ಪುರದ ರೈತ ಒಕ್ಕೂಟದ ಕಚೇರಿಗಳನ್ನು ಒಂದೇ ಸಮಾರಂಭದಲ್ಲಿ ಉದ್ಘಾಟಿಸಲಾಗುವುದು. ರೈತರ ಆನ್‌ಲೈನ್ ಅರ್ಜಿಸಲ್ಲಿಕೆ, ಮೊಬೈಲ್ ಆಪ್ ಹಾಗೂ ವೆಬ್‌ಸೈಟ್‌ ಅಂದು ಅನಾವರಣ. ಬಾಳೆ ಹೊನ್ನೂರು ಹಾಗೂ ಶೃಂಗೇರಿಯಲ್ಲಿ ಕಚೇರಿ ಸ್ಥಳ ನಿರ್ಧರಿಸಿ ಅಲ್ಲೂ ಕಚೇರಿ ತೆರೆಯಲಾಗುವುದು. ಭಾನುವಾರ ಹೊರತುಪಡಿಸಿ ಪ್ರತಿ ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರೈತರ ಸಮಸ್ಯೆ ಆಲಿಸಲಾಗುವುದು. ಕೆಲವು ಇಲಾಖೆಗಳ ಕುಂದುಕೊರತೆ ಆಲಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.


ಅನಾವಶ್ಯಕ ಪ್ರಕರಣ ದಾಖಲಿಸಿದ ಪ್ರಕರಣಗಳಲ್ಲಿ ರೈತರ ಬಳಿ ಸೂಕ್ತ ದಾಖಲಾತಿ ಇದ್ದರೆ ಒಕ್ಕೂಟದಿಂದಲೇ ವಕೀಲರನ್ನು ನೇಮಕ ಮಾಡಿ ನ್ಯಾಯಾಲಯದಲ್ಲಿ ಉಚಿತವಾಗಿ ನ್ಯಾಯ ದೊರಕಿಸಿ ಕೊಡಲಾಗುವುದು. ನ್ಯಾಯಾಲಯ ಹಾಗೂ ವಕೀಲರ ಶುಲ್ಕವನ್ನೂ ಒಕ್ಕೂಟವೇ ಭರಿಸಲಿದೆ. ಕೆಲ ಬಡ ರೈತರು ಆರ್ಥಿಕ ಸಂಕಷ್ಟದಿಂದ ಕಾನೂನು ಹೋರಾಟ ಮಾಡಲಾಗದೆ ಅಸಹಾಯಕ ರಾಗಿದ್ದಾರೆ.ಇದರಿಂದ ನೊಂದ ಅಂತಹ ರೈತರಿಗೆ ಬಹಳ ಅನುಕೂಲ.

ರೈತರು ಸಮೃದ್ಧಿಯಾಗಿದ್ದರೆ ಪಟ್ಟಣ, ತಾಲೂಕು ಸಮೃದ್ಧಿಯಾಗಿರುತ್ತದೆ. ಆದ್ದರಿಂದ ರೈತರ ಪರವಾಗಿ ನಮ್ಮ ಒಕ್ಕೂಟ ಹಗಲಿರುಳು ಶ್ರಮಿಸಲಿದೆ. ಡೀಮ್ಡ್ ಫಾರೆಸ್ಟ್, ಹುಲಿ ಯೋಜನೆಯಂತಹ ಯೋಜನೆಗಳ ವಿರುದ್ಧ ಸಮರ ಸಾರಲಿದೆ ಎಂದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಹಂಚಿನಮನೆ ರಾಘವೇಂದ್ರ, ಗದ್ದೇಮನೆ ಸತೀಶ್, ಮೂಡಬಾಗಿಲು ಸಚಿನ್,ಹಂಚಿನಮನೆ ರಾಘವೇಂದ್ರ, ಮಾವಿನಮನೆ ವಿಕಾಸ್ ಇದ್ದರು.