ಸಾರಾಂಶ
ಲಕ್ಷ್ಮೇಶ್ವರ: ರೈತರು ಯೂರಿಯಾ ಗೊಬ್ಬರಕ್ಕಾಗಿ ಪಟ್ಟಣದ ಕೃಷಿ ಹುಟ್ಟುವಳಿ ಮಾರಾಟ ಕೇಂದ್ರ ಎದುರು ಬೆಳಗ್ಗೆಯಿಂದಲೇ ಚಹಾ, ಉಪಾಹಾರ ಸೇವಿಸದೆ ಸರತಿ ಸಾಲಿನಲ್ಲಿ ಕಾಯುತ್ತಾ ಕುಳಿತಿರುವುದು ದೃಶ್ಯ ಬುಧವಾರ ಪಟ್ಟಣದಲ್ಲಿ ಕಂಡು ಬಂದಿತು.
ಪಟ್ಟಣದಲ್ಲಿ ಈಗಾಗಲೆ ಯೂರಿಯಾ ಗೊಬ್ಬರದ ಕೊರತೆ ಕಂಡು ಬಂದಿರುವುದರಿಂದ ಅತಿಯಾದ ತೇವಾಂಶದಿಂದ ಗೋವಿನ ಜೋಳದ ಬೆಳೆಯು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುವ ದೃಷ್ಟಿಯಿಂದ ರೈತರು ಯೂರಿಯಾ ಗೊಬ್ಬರದ ಮೊರೆ ಹೋಗಿದ್ದಾರೆ ಎನ್ನಬಹುದು.ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಂಗಡಿಗಳಿಗೆ ಎಡತಾಕುವ ದೃಶ್ಯ ಕಂಡು ಬರುತ್ತಿವೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗೋವಿನ ಜೋಳ ಬಿತ್ತನೆ ಪ್ರಮಾಣ ಹೆಚ್ಚಾಗಿರುವುದು ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.ತಾಲೂಕಿನ ಗ್ರಾಮೀಣ ಪ್ರದೇಶದ ರೈತರು ಬೆಳಗ್ಗೆಯಿಂದೆಲೆ ಗೊಬ್ಬರ ಮಾರಾಟದ ಕೇಂದ್ರಗಳಿಗೆ ಬಂದು ಗೊಬ್ಬರಕ್ಕಾಗಿ ಕಾಯುತ್ತ ಕುಳಿತುಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳ ಸಹಾಯದಿಂದ ಯೂರಿಯಾ ಗೊಬ್ಬರ ವಿತರಣೆ ಮಾಡುತ್ತಿರುವು ದೃಶ್ಯ ಮದ್ಯಾಹ್ನದ ವೇಳೆಗೆ ಕಂಡು ಬಂದಿತು.
ತಾಲೂಕಿನಲ್ಲಿ ಬಹುತೇಕ ಗೊಬ್ಬರ ಮಾರಾಟ ಮಾಡುವ ಅಂಗಡಿಗಳು ಮುಂದೆ ನೋ ಸ್ಟಾಕ್ ಎಂಬ ಬೋರ್ಡ್ ನೇತು ಹಾಕಿರುವುದು ಕಂಡು ಬರುತ್ತಿವೆ.ಗೋವಿನ ಜೋಳ ಬಿತ್ತನೆ ಮಾಡಿರುವ ರೈತರು ಯೂರಿಯಾ ಗೊಬ್ಬರ ಪಡೆಯಲು ಹರಸಾಹಸ ಪಡುತ್ತಿರುವುದು ಕಂಡು ಬಂದಿತು. ಆಧಾರ ಕಾರ್ಡ್ ಹಿಡಿದು ಬೆಳಗ್ಗೆಯಿಂದಲೇ ಕಾಯುತ್ತಿದ್ದರೂ ಒಬ್ಬರಿಗೆ ಒಂದೇ ಚೀಲ ಯೂರಿಯಾ ನೀಡುತ್ತಿರುವುದು ಯಾತಕ್ಕೂ ಸಾಲದು. ಇದರಿಂದ ರೈತರು ಸರತಿ ಸಾಲಿನಲ್ಲಿ ನಿಂತು ಕಾಯುವುದು ತಪ್ಪುತ್ತಿಲ್ಲ. ಸರ್ಕಾರ ಕೂಡಲೆ ಹೆಚ್ಚಿನ ಪ್ರಮಾಣದ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು ಎಂದು ಹೇಳಿದರು.ನರಗುಂದ ತಾಲೂಕಿನಲ್ಲಿಯೂ ಹೆಚ್ಚಿನ ಗೊಬ್ಬರ ಪೂರೈಕೆ ಆಗದ ಕಾರಣ ರೈತರು ಪ್ರತಿ ದಿನ ಕೆಲಸ ಕಾರ್ಯ ಬಿಟ್ಟು ಗೊಬ್ಬರಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.