ಮುಸ್ಲಿಂ, ದಲಿತರಿಗೆ ಅಕ್ಷರದ ಬೆಳಕು ನೀಡಿದ ಫಾತಿಮಾ

| Published : Jan 12 2025, 01:15 AM IST

ಸಾರಾಂಶ

ನಗರದ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಅಲ್ಪ ಸಂಖ್ಯಾತರ ಘಟಕದಿಂದ ಮುಸ್ಲಿಂ ಬಾಂಧವರ ಅಕ್ಷರದ ಅವ್ವ ಎಂದೇ ಖ್ಯಾತಿ ಗಳಿಸಿರುವ ಫಾತಿಮಾ ಶೇಕ್‌ರವರ ಜನ್ಮದಿನಾಚರಣೆಯನ್ನು ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಕಚೇರಿಯಲ್ಲಿ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಅಲ್ಪ ಸಂಖ್ಯಾತರ ಘಟಕದಿಂದ ಮುಸ್ಲಿಂ ಬಾಂಧವರ ಅಕ್ಷರದ ಅವ್ವ ಎಂದೇ ಖ್ಯಾತಿ ಗಳಿಸಿರುವ ಫಾತಿಮಾ ಶೇಕ್‌ರವರ ಜನ್ಮದಿನಾಚರಣೆಯನ್ನು ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಪುಷ್ಪನಮನ ಸಲ್ಲಿಸಿ ಮಾತನಾಡಿದ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್‌, ಮಹಾರಾಷ್ಟ್ರದ ಪುಣೆಯಲ್ಲಿ 1831ರ ಜನವರಿ 19ರಂದು ಜನಿಸಿದ ಫಾತಿಮಾ ಶೇಕ್‌ರವರು ಸಂಪ್ರದಾಯ ಶರಣ ಮುಸ್ಲಿಮರಿಂದ ಎದುರಾದ ವಿರೋಧಗಳನ್ನು ದಿಟ್ಟತನದಿಂದ ಎದುರಿಸಿ, ತನ್ನ ಅಣ್ಣನಾದ ಉಸ್ಮಾನ್ ಶೇಕ್ ಅವರ ನೆರವಿನಿಂದ ಅಕ್ಷರ ಕಲಿತು, ಭಾರತದ ಮುಸ್ಲಿಂ ಸಮುದಾಯದ ಮೊದಲ ಮಹಿಳಾ ಶಿಕ್ಷಕಿಯಾಗಿ ಗುರುತಿಸಿಕೊಂಡಂಥ ಧೀಮಂತ ಮಹಿಳೆ ಎಂದರು.

ಫಾತಿಮಾ ಶೇಕ್ ಅವರು ಜ್ಯೋತಿಬಾ ಫುಲೆಯವರಿಗೆ ಗೆಳೆಯನಾಗಿದ್ದ ಉಸ್ಮಾನ್ ಶೇಕ್ ಅವರ ತಂಗಿಯಾಗಿದ್ದು, ಫುಲೆ ದಂಪತಿ 1848ರಲ್ಲಿ ಇದೇ ಉಸ್ಮಾನ್ ಶೇಕ್ ಅವರ ಮನೆಯಲ್ಲಿ ಶಾಲೆಯೊಂದನ್ನು ಆರಂಭಿಸಿ ಅಲ್ಲಿಯೇ ಮೊದಲ ಪಾಠಶಾಲೆಯನ್ನು ಪ್ರಾರಂಭಿಸುತ್ತಾರೆ. ಅಂದಿನ ಕಾಲದಲ್ಲಿ ಮನುವಾದಿ ಮೇಲ್ಜಾತಿಗಳು, ಹಿಂದೂಗಳು, ಅತ್ತ ಮತೀಯವಾದಿ ಸಂಪ್ರದಾಯಸ್ಥ ಮುಸ್ಲಿಮರ ವಿರೋಧಗಳ ನಡುವೆಯೂ, ಮುಸ್ಲಿಮರ ಮತ್ತು ದಲಿತರಿಗೆ ಅಕ್ಷರದ ಬೆಳಕು ನೀಡಲು ಮುಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸಲು ಪಾತಿಮಾ ಮುಂದಾಗಿದ್ದರು ಎಂದರು.

ಜೊತೆಗೆ ತನ್ನದೇ ಮನೆಯಲ್ಲಿ ಫುಲೆ ದಂಪತಿಗೆ ಆಶ್ರಯ ನೀಡಿ ಶಾಲೆ ಪ್ರಾರಂಭಿಸಲು ನೆರವಾದ ಉಸ್ಮಾನ್ ಶೇಕ್ ತನ್ನ ತಂಗಿಯಾದ ಫಾತಿಮಾ ಶೇಕ್ ಅವರನ್ನು ಸಾವಿತ್ರಿಬಾಯಿ ಫುಲೆಯವರಿಗೆ ಪರಿಚಯ ಮಾಡಿಕೊಟ್ಟರು. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಶಿಕ್ಷಕಿಯಾಗಿ ನೂರಾರು ಜನರಿಗೆ ವಿದ್ಯಾರ್ಜನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು, ಇವರ ಹೆಸರು ಎಲ್ಲಿಯೂ ಅಷ್ಟಾಗಿ ಪ್ರಚಲಿತದಲ್ಲಿ ಕಂಡು ಬರದಿದ್ದರೂ, ಅವರು ಮಾಡಿದ ಈ ಪುಣ್ಯ ಕಾರ್ಯದಿಂದ ಜನಮನ್ನಣೆ ಪಡೆದು, ಇಂದಿಗೂ ಅಜರಾಮರರಾಗಿದ್ದಾರೆ ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಬ್ಬೀರ್ ಅಹಮ್ಮದ್‌ ಮಾತನಾಡಿ, ಫಾತಿಮಾ ಶೇಕ್ ಮತ್ತು ಸಾವಿತ್ರಿಬಾಯಿ ಫುಲೆ ಜೊತೆಗೂಡಿ ದುಡಿದು ಮುಸ್ಲಿಮರ ಹೆಣ್ಣುಮಕ್ಕಳಿಗೆ ಹಾಗೂ ದಲಿತರಿಗೆ ಅಕ್ಷರದ ಬೆಳಕು ನೀಡುವ ಮೂಲಕ ಇಂದು ಖ್ಯಾತಿ ಗಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಾಮಚಂದ್ರ ಎಸ್., ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ರಫೀಕ್ ಅಹಮ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದರ್ಶನ್, ಗಂಗಾಧರ್ ಜಿ.ಆರ್., ಲಕ್ಷ್ಮೀನಾರಾಯಣ ಎಸ್., ಗೂಳೂರು ರಾಜಣ್ಣ, ರಾಮಚಂದ್ರಯ್ಯ, ಶ್ರೀನಿವಾಸ್ ದಿಬ್ಬೂರು, ಅಂಜಮ್, ಹನುಮನರಸಯ್ಯ, ನರಸಿಂಹಮೂರ್ತಿ ಕೆ. (ಕೆಸ್ತೂರು), ಗೋವಿಂದರಾಜು ಕೆ., ರಂಗಸ್ವಾಮಯ್ಯ ಕೆ., ಶಿವಣ್ಣ ಹಾಗೂ ಇತರರು ಉಪಸ್ಥಿತರಿದ್ದರು.