ಕಣಪಾದೆಯ ಸತ್ಯದೇವತಾ ಸಭಾಂಗಣದಲ್ಲಿ ನಡೆದ ಮಾತೃಭೂಮಿ ಸೇವಾ ಸಂಘ ನಾವೂರು ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ಪೌರ ಕಾರ್ಮಿಕರನ್ನು ಗೌರವಿಸುವ

ಬಂಟ್ವಾಳ: ನಗರಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಸೇವೆ ರಾಷ್ಟ್ರ ಸೇವೆಗೂ, ದೇವತಾ ಕಾರ್ಯಕ್ಕೂ ಸಮಾನವಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಯಶಸ್ವಿಯಾಗಲು ಪೌರ ಕಾರ್ಮಿಕರ ಸೇವೆಯೇ ಸಾಕ್ಷಿಯಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಕಣಪಾದೆಯ ಸತ್ಯದೇವತಾ ಸಭಾಂಗಣದಲ್ಲಿ ನಡೆದ ಮಾತೃಭೂಮಿ ಸೇವಾ ಸಂಘ ನಾವೂರು ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಮಾಜ ಸೇವಕ ರವಿ ಕಟಪಾಡಿ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್ ಉದ್ಘಾಟಿಸಿದರು. ಸಾಮಾಜಿಕ ಮುಖಂಡ ಖಾಲಿದ್ ನಂದಾವರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಅಶ್ವಥ್ ಬರಿಮಾರು ವೀರ ಸಾವರ್ಕರ್ ಹಾಗೂ ರಾಷ್ಟ್ರೀಯತೆ ವಿಷಯವಾಗಿ ವಿಚಾರ ಮಂಡನೆ ಮಾಡಿದರು. ಯುವ ಶಕ್ತಿ ಸೇವಾ ಪಥದ ಗಣೇಶ್ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಾವೂರು ಗ್ರಾ. ಪಂ. ಅಧ್ಯಕ್ಷೆ ಇಂದಿರಾ, ಸತ್ಯ ದೇವತೆ ಗೆಳೆಯರ ಬಳಗ ಕಣಪಾದೆಯ ಅಧ್ಯಕ್ಷ ಸದಾನಂದ ಹಳೆಗೇಟು, ಮಾತೃಭೂಮಿ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಎಕ್ಕುಡೇಲು ಹಾಗೂ ಗ್ರಾಪಂ ಸದಸ್ಯರಾದ ವಿಜಯ್ ಉಪಸ್ಥಿತರಿದ್ದರು.

ಈ ಸಂದರ್ಭ ಪೌರ ಕಾರ್ಮಿಕರ ಜತೆಗೆ ಮಾಜಿ ಸೈನಿಕರು, ಸಮಾಜ ಸೇವಕರು, ವೈದ್ಯರು ಹಾಗೂ ದಾದಿಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸತ್ಯ ದೇವತೆ ನೃತ್ಯ ಕಲಾ ತಂಡದ ವತಿಯಿಂದ ‘ಮಾತೃಭೂಮಿಗೆ ನಮನ’ ಕಾರ್ಯಕ್ರಮ ಪ್ರದರ್ಶನಗೊಂಡು, ಸ್ಪಂದನ ಕಲಾವಿದರ್ ಬಂಟ್ವಾಳ ಇವರಿಂದ ಜಾಗೃತಿಯ ಸಂದೇಶ ಸಾರುವ ‘ಸಾದಿ ತಿಕ್ಕುಜಿ’ ನಾಟಕ ಪ್ರದರ್ಶನಗೊಂಡಿತು.

ಜಗದೀಶ್ ಕಕ್ಕಿಂಜಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಸುರೇಶ್ ಎಸ್. ನಾವೂರು ಸ್ವಾಗತಿಸಿದರು. ಕಾರ್ಯದರ್ಶಿ ಲೋಹಿತ್ ಕೆ. ವಂದಿಸಿದರು. ಎಂ.ಕೆ. ಕನ್ಯಾಡಿ ನಿರೂಪಿಸಿದರು.