ಸಾರಾಂಶ
ಕನ್ನಡಪ್ರಭವಾರ್ತೆ ಸಾಗರ
ಕಾಂಗ್ರೆಸ್ ಅವಧಿಯ ಒಂದು ವರ್ಷದ ದುರಾಡಳಿತಕ್ಕೆ ಲೋಕಸಭಾ ಚುನಾವಣೆಯ ಕ್ಷೇತ್ರವ್ಯಾಪ್ತಿಯಲ್ಲಿ ಜನರು ಬಿಜೆಪಿಗೆ ೨೬೫೧೯ ಮತಗಳ ಲೀಡ್ ನೀಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಕೇಸ್ ಹಾಕುವುದು ಜಾಸ್ತಿಯಾಗುತ್ತಿದೆ. ಅಮಾಯಕರ ವಿರುದ್ಧ ಸುಳ್ಳು ಕೇಸ್ ಹಾಕಿ ತೊಂದರೆ ಕೊಡುತ್ತಿದ್ದಾರೆ. ಜನರಿಗೆ ರಕ್ಷಣೆ ಇಲ್ಲವಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟದೆ ಎಂದರು.
ಸಿರಿವಂತೆಯಲ್ಲಿ ಗುರುಪ್ರಸಾದ್ ಎಂಬುವವರ ವಿರುದ್ಧ ಗಾಂಜಾ ಕೇಸ್ ಹಾಕುವ ಪ್ರಯತ್ನ ನಡೆಸಲಾಗಿದೆ. ಗೌತಮಪುರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೆನಗೆರೆ ರವಿ ಹೆಗಡೆ ಮೇಲೆ ಹಲ್ಲೆಯಾಗಿದೆ. ಇರುವಕ್ಕಿಯಲ್ಲಿ ಇಬ್ಬರು ಬ್ರಾಹ್ಮಣರ ಜಮೀನಿಗೆ ಬೇಲಿ ಹಾಕಲಾಗಿದೆ. ಮೆಳವರಿಗೆಯಲ್ಲಿ ೭ ಮಂದಿ ರೈತರನ್ನು ಜೈಲಿಗೆ ಕಳಿಸಲಾಗಿದೆ. ಕೋಟೆಕೊಪ್ಪದಲ್ಲಿ ಕಾಂಗ್ರೆಸ್ ಪುಡಾರಿಯೊಬ್ಬರು ಸ್ವಾಧೀನದಲ್ಲಿರುವ ಜಮೀನು ಸ್ವಾಧೀನಪಡಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಂತಹ ಹಲವು ಘಟನೆಗಳು ನಡೆದಿದೆ. ನಮ್ಮ ಪಕ್ಷದ ವಿನೋದ್ ರಾಜ್ ಮತ್ತು ಅರುಣ ಕುಗ್ವೆ ಅವರನ್ನು ಗಡಿಪಾರು ಮಾಡಲು ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕಿ ಯಶಸ್ವಿಯಾದರು. ಇಂತಹ ಅನೇಕ ಪ್ರಕರಣಗಳು ಕ್ಷೇತ್ರವ್ಯಾಪ್ತಿಯಲ್ಲಿ ನಡೆದಿದ್ದು ಜನರು ದುರಾಡಳಿತದಿಂದ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಕಳೆದ ಒಂದು ವರ್ಷದಿಂದ ಸಾಗರ ಕ್ಷೇತ್ರದ ಅಭಿವೃದ್ಧಿಗೆ ನಯಾಪೈಸೆ ಬಂದಿಲ್ಲ. ಹೊಸನಗರ, ಸಾಗರ, ಕಾರ್ಗಲ್ ಜೋಗ್ ಸ್ಥಳೀಯ ಸಂಸ್ಥೆಗಳಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ, ಗ್ರಾಮಾಂತರ ಪ್ರದೇಶಗಳಿಗೆ ಎಷ್ಟು ಹಣ ಮಂಜೂರಾಗಿದೆ ಎಂದು ಶಾಸಕರು ದಾಖಲೆ ಬಿಡುಗಡೆ ಮಾಡಲಿ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಂದ ಅನುದಾನದ ಕಾಮಗಾರಿ ಪುನಃ ಶಂಕುಸ್ಥಾಪನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರಕ್ಕೂ ಸರ್ಕಾರ ಅನುದಾನ ನೀಡಿಲ್ಲ. ಒಂದೊಮ್ಮೆ ಹೊಸ ಅನುದಾನ ತಂದಿದ್ದರೆ ಶಾಸಕರು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ೧೭ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಒಂದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ. ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪರ ಹೆಸರು, ಬಿ.ವೈ.ರಾಘವೇಂದ್ರ ಅವರ ಜನಸ್ನೇಹಿ ವ್ಯಕ್ತಿತ್ವ, ಅಭಿವೃದ್ಧಿಗೆ ಜನರು ಮತ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಎಲ್ಲ ಸ್ತರದ ಘಟಕಗಳು ರಾಘವೇಂದ್ರ ಗೆಲುವಿಗೆ ಅಹೋರಾತ್ರಿ ಕೆಲಸ ಮಾಡಿದ್ದಾರೆ. ಪಕ್ಷದ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ, ಶ್ರಮಿಸಿದ ಪ್ರಮುಖರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಡಾ.ರಾಜನಂದಿನಿ ಕಾಗೋಡು, ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ, ಪ್ರಶಾಂತ್, ದೇವೇಂದ್ರಪ್ಪ, ಕೆ.ಆರ್.ಗಣೇಶಪ್ರಸಾದ್, ರಾಜಶೇಖರ ಗಾಳಿಪುರ, ಗೌತಮ್ ಕೆ.ಎಸ್., ಮಧುರಾ ಶಿವಾನಂದ್, ವಿ.ಮಹೇಶ್, ರಮೇಶ್ ಎಚ್.ಎಸ್., ಕೊಟ್ರಪ್ಪ ನೇದರವಳ್ಳಿ, ರವೀಂದ್ರ ಬಿ.ಟಿ., ಶಿವಪ್ಪ ಹೊಸಂತೆ, ಕೃಷ್ಣಮೂರ್ತಿ, ಅರುಣ ಕುಗ್ವೆ, ಸತೀಶ್ ಕೆ., ಸಂತೋಷ್ ಇನ್ನಿತರರು ಹಾಜರಿದ್ದರು.