ಸಾರಾಂಶ
ಕಾರಟಗಿ: ಕೊಪ್ಪಳದ ಗವಿಮಠದ ಜಾತ್ರೆಯ ರಥಕ್ಕೆ ೪೫ ಅಡಿ ಉದ್ದದ ಬೃಹತ್ ಹೂವಿನ ಹಾರವನ್ನು ತಾಲೂಕಿನ ಸಿದ್ದಾಪುರದಿಂದ ಶನಿವಾರ ರವಾನಿಸಲಾಯಿತು.ಬೆಳಗ್ಗೆ ಗ್ರಾಮದಲ್ಲಿ ಅಲಂಕೃತ ಟ್ರ್ಯಾಕ್ಟರ್ನಲ್ಲಿ ಬೃಹತ್ ಹೂವಿನಹಾರ ಮೆರವಣಿಗೆ ಮಾಡಲಾಯಿತು. ಹಣೆ ಮೇಲೆ ವಿಭೂತಿ, ಗವಿಸಿದ್ದೇಶ್ವರರ ನಾಮಮಂತ್ರ ಜಪಿಸುತ್ತಾ, ಸಕಲ ವಾದ್ಯಮೇಳ, ಭಜನೆಗಳೊಂದಿಗೆ ೪೫ ಅಡಿ ಉದ್ದದ ಬೃಹತ ಹೂವಿನ ಹಾರದ ಮೆರವಣಿಗೆ ನಡೆಸಲಾಯಿತು.ಇದಕ್ಕೂ ಮುಂಚೆ ಗ್ರಾಮದ ಮಲ್ಲಿಕಾರ್ಜುನ ನಗರದ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯ ಮೂರ್ತಿಗೆ ಮತ್ತು ಕೊಪ್ಪಳ ಗವಿಸಿದ್ಧೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಆಂಜನೇಯ ದೇವಸ್ಥಾನದಿಂದ ಭಾಜಾ ಭಜಂತ್ರಿಯೊಂದಿಗೆ ಅಲಂಕೃತ ಟ್ರ್ಯಾಕ್ಟರ್ಯಲ್ಲಿ ಬೃಹತ್ ಹಾರದ ಮೆರವಣಿಗೆ ಆರಂಭವಾಗಿ, ಟಾಕೀಜ್ ರಸ್ತೆ, ಗೂಳಿಬಸವೇಶ್ವರ ಸರ್ಕಲ್, ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಿತು.ಬಳಿಕ ಗಂಗಾವತಿ-ರಾಯಚೂರು ರಸ್ತೆ ಮೂಲಕ ಕೊಪ್ಪಳಕ್ಕೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಕರು, ಗ್ರಾಮಸ್ಥರು ಸೇರಿದಂತೆ ಇನ್ನಿತರರಿದ್ದರು.