ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪದಗಳ ತರ್ಜುಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ ಎಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅಭಿಪ್ರಾಯಪಟ್ಟಿದ್ದಾರೆ.ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ಆಯೋಜಿತ ಪತ್ರಕರ್ತೆ ದೀಪಾಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪಾಭಾಸ್ತಿ ಮಾತನಾಡಿದರು.ಬಾನುಮುಷ್ತಾಕ್ ಅವರ ಎದೆಯ ಹಣತೆ ಕೃತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ವಿಷ್ನಲ್ಲಿ ಬರೆದ ಹಾರ್ಟ್ ಲ್ಯಾಂಪ್ ಕೃತಿ ಸಂಬಂಧಿತ ಮಾಹಿತಿ ನೀಡಿದ ದೀಪಾಭಾಸ್ತಿ, ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತರ್ಜುಮೆ ಮಾಡಬಾರದು. ಇದರ ಬದಲಿಗೆ ಮೂಲಕೃತಿಯಲ್ಲಿನ ಪದಗಳ ಭಾವವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.
ಓದುಗರನ್ನು ತಲುಪಬೇಕಾದ ಅಗತ್ಯವಿದೆ:ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಸಾಹಿತಿಗಳ ಅತ್ಯಂತ ಶ್ರೇಷ್ಠ ಕೃತಿಗಳು ಇನ್ನಾದರೂ ಇಂಗ್ಲಿಷ್ ಗೆ ಅನುವಾದಗೊಂಡು ಜಾಗತಿಕವಾಗಿ ಓದುಗರನ್ನು ತಲುಪಬೇಕಾದ ಅಗತ್ಯವಿದೆ. 1,500 ವರ್ಷಗಳ ಇತಿಹಾಸವಿರುವ ಕನ್ನಡದ ಕೃತಿಗಳು ವಿಶ್ವವ್ಯಾಪಿ ಕನ್ನಡ ನೆಲದ ಸಾಹಿತ್ಯ ಕಂಪು ಬೀರಬೇಕಾಗಿದೆ ಎಂದೂ ಅವರು ಹೇಳಿದರು. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಇತರ ಭಾಷೆಗಳ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕಾದ ಅಗತ್ಯತೆಯಿದೆ. ಪಕ್ಕದ ಕೇರಳದಲ್ಲಿನ ಮಲಯಾಳದಲ್ಲಿ ಅನುವಾದಕ್ಕೆ ಪ್ರಾಧಾನ್ಯತೆ ಇದೆ ಎಂದೂ ದೀಪಾ ಬಾಸ್ತಿ ಅಭಿಪ್ರಾಯಪಟ್ಟರು.ಡಾ. ಶಿವರಾಮ ಕಾರಂತರ ಅದೇ ಊರು - ಅದೇ ಮರ ಕೃತಿ ಮತ್ತು ಕೊಡಗಿನ ಗೌರಮ್ಮ ಅವರ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ಅದು ಖ್ಯಾತಿ ಪಡೆಯುತ್ತಿದ್ದ ಸಂದರ್ಭವೇ ಭಾನುಮುಷ್ತಾಕ್ ತನ್ನ ಸ್ನೇಹಿತೆಯ ಮೂಲಕ ನನ್ನನ್ನು ಸಂಪರ್ಕಿಸಿ ತನ್ನ ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಕೋರಿದ್ದರು. ಹೀಗಾಗಿಯೇ ಅವರ ಎಲ್ಲಾ ಕಥಾಸಂಕಲನ ಓದಿ ತನಗೆ ಇಷ್ಟವಾದ 12 ಕಥೆಗಳನ್ನು ಆಯ್ದೆಕೊಂಡು ಹಾಟ್೯ ಲ್ಯಾಂಪ್ ಕೃತಿಯಾಗಿಸಿದೆ ಎಂದು ದೀಪಾಭಾಸ್ತಿ ಹೇಳಿದರು. ಅನುವಾದಕಳಾಗಿ ತನ್ನ ಮನಸ್ಸಿಗೆ ಇಷ್ಟವಾದ ಕಥೆಗಳನ್ನು ಮಾತ್ರ ಆಯ್ದುಕೊಂಡಿದ್ದೆ ಹಲವು ಕಥೆಗಳು ಸುಂದವಾಗಿದ್ದರೂ ಇಂಗ್ಲೀಷ್ ಓದುಗನಿಗೆ ಜಾನಪದ ಘಟನಾವಳಿಗಳ ಕಥಾ ಹಂದರವನ್ನು ತಲುಪಿಸುವುದು ಕಷ್ಟ ಎಂದನ್ನಿಸಿದ ಕಾರಣದಿಂದ ಅಂಥ ಕಥೆಗಳನ್ನು ಅನುವಾದದಿಂದ ಕೈಬಿಟ್ಟಿದ್ದೆ ಆ ಸಂದರ್ಭ ಮಾರುಕಟ್ಟೆಗೆ ಇಂಥ ಕಥೆಗಳು ಸಲ್ಲುತ್ತವೆಯೇ ಎಂದು ಯೋಚಿಸುವ ಗೊಡವೆಗೆ ಹೋಗಲಿಲ್ಲ ಎಂದೂ ದೀಪಾ ಭಾಸ್ತಿ ಹೇಳಿದರು.
ಬೂಕರ್ ಪ್ರಶಸ್ತಿಯ ಅಂತಿಮ ಹಂತದಲ್ಲಿ ಇಟಾಲಿಯನ್, ಡ್ಯಾನಿಷ್, ಫ್ರೆಂಚ್ ಭಾಷೆಗಳ ಕೃತಿಗಳೂ ಇದ್ದವು. ವಿಶ್ವದ ಪ್ರಸಿದ್ಧ ಅನುವಾದಕರಾದ ಸೋಫಿ ಹಗ್ಗೀಸ್ ಅವರ ಕೃತಿಯೂ ಅಲ್ಲಿತ್ತು. ಹೀಗಿದ್ದರೂ ತೀರ್ಪುಗಾರರು ಸರಳ , ಮನಸ್ಸಿಗೆ ಮುಟ್ಟುವ ಭಾಷಾ ಮತ್ತು ಭಾವಾನುವಾದ ಮೆಚ್ಚಿಕೊಂಡು ಹಾರ್ಟ್ ಲ್ಯಾಂಪ್ ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು ಎಂದೂ ದೀಪಾ ಭಾಸ್ತಿ ಹೇಳಿದರು.ಬೂಕರ್ ಪ್ರಶಸ್ತಿಗೆ ಮಹತ್ವವಿದೆ:
ಚಿತ್ರರಂಗದಲ್ಲಿ ಆಸ್ಕರ್ ನಂತೆಯೇ ಸಾಹಿತ್ಯಲೋಕದಲ್ಲಿ ಬೂಕರ್ ಪ್ರಶಸ್ತಿಗೆ ಮಹತ್ವವಿದೆ ಎಂದು ಹೇಳಿದ ದೀಪಾಭಾಸ್ತಿ, ಬೂಕರ್ ಪ್ರಶಸ್ತಿ ಲಭಿಸಿದ ಬಳಿಕ ಅನೇಕರು ತಮ್ಮ ಕೃತಿಗಳ ಅನುದಾದಕ್ಕಾಗಿ ಸಂಪರ್ಕ ಮಾಡುತ್ತಿದ್ದಾರೆ. ಆದರೆ ಇನ್ನೊಂದು ವರ್ಷ ಹಾರ್ಟ್ ಲ್ಯಾಂಪ್ ಕೃತಿಯ ಪ್ರಚಾರಕ್ಕಾಗಿ ಭಾರತದ ವಿವಿಧೆಡೆ ಸೇರಿದಂತೆ ಜಗತ್ತಿನ ಹಲವಾರು ಕಡೆ ಸಾಹಿತ್ಯ ಉತ್ಸವಗಳಿಗೆ ತೆರಳಬೇಕಾಗಿದೆ. ಯಾವುದೇ ಕೃತಿ ರಚನೆಗೂ ಸಮಯದ ಕೊರತೆಯಿದೆ ಭಾವಾನುವಾದಕ್ಕೆ ಕನಿಷ್ಠ 2-3 ವರ್ಷಗಳಾದರೂ ಸಮಯಾವಕಾಶ ಅಗತ್ಯವಾಗಿದೆ ಎಂದು ದೀಪಾ ಹೇಳಿದರು.ಹೆಗ್ಗೋಡು ಗ್ರಾಮದ ಸಮುದ್ಯತಾ ವೆಂಕಟರಾಮು ಅವರು ರಚಿಸಿರುವ ಇದೇ ಅಂದರೆ ಇದೆ, ಇಲ್ಲ ಎಂದರೆ ಇಲ್ಲ ಕೃತಿಯ ಇಂಗ್ಲೀಷ್ ಅನುವಾದ ಸಾಗಿದ್ದು, ಇದು ಕೂಡ ಬಹಳ ಸೊಗಸಾದ ಕೃತಿಯಾಗಲಿದೆ ಎಂದು ಹೇಳಿದ ದೀಪಾ, ಅನುವಾದ ಸಾಹಿತ್ಯ ತಾನು ಮೆಚ್ಚಿಕೊಂಡು ಬರೆದ್ದದ್ದಲ್ಲ. ಸ್ವಂತ ಕೃತಿಯ ರಚನೆ ಕಾರ್ಯವೂ ಬಾಕಿಯಿದೆ. ಪ್ರಬಂಧ, ಸಣ್ಣ ಕಥೆಗಳು ತನ್ನ ಮೆಚ್ಚಿನ ಸಾಹಿತ್ಯವಾಗಿದೆ ಎಂದು ಅವರು ಹೇಳಿದರು.ಬೂಕರ್ ಪ್ರಶಸ್ತಿ ದೊರಕುವ ನಿರೀಕ್ಷೆ ಖಂಡಿತಾ ಇರಲಿಲ್ಲ. ಪ್ರಕಾಶಕರ ಆಹ್ವಾನದ ಮೇರೆಗೆ ಲಂಡನ್ ನಲ್ಲಿ ಆಯೋಜಿತ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ತೆರಳಿದ್ದೆ. ಪ್ರಶಸ್ತಿ ಘೋಷಣೆಯಾದ ಕ್ಷಣ ಅಲ್ಲಿನ ಸಂಭ್ರಮದ ವಾತಾವರಣದಲ್ಲಿ ಗಲಿಬಿಲಿಗೊಳಗಾದೆ. ನಂತರ ಭಾಷಣದಲ್ಲಿ ಡಾ. ರಾಜ್ ಕುಮಾರ್ ಅವರ ಜೇನಿನ ಹೊಳೆಯೋ ಹಾಡನ್ನು ಆ ಕ್ಷಣದಲ್ಲಿ ಮನಸ್ಸಿಗೆ ತೋಚಿದಂತೆ ಸಾಂದರ್ಭಿಕವಾಗಿ ಉಲ್ಲೇಖಿಸಿದೆ. ಆ ಹಾಡು ಮತ್ತು ಡಾ.ರಾಜ್ ಕನ್ನಡದ ಪ್ರತಿನಿಧಿತ್ವ ಎಂದೆನ್ನಿಸಿತ್ತು. ಹೀಗಾಗಿ ಅಲ್ಲಿ ಹೇಳಿದ ಹಾಡು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವ ಮೂಲಕ ನನ್ನ ಉದ್ದೇಶ ಸಾರ್ಥಕವಾದಂತಾಯಿತು ಎಂದೂ ದೀಪಾ ಭಾಸ್ತಿ ಹೇಳಿದರು.
ಅಜ್ಜನ ಗ್ರಂಥಾಲಯ ನೀಡಿದ ಪ್ರೇರಣೆ!ಅಪ್ಪ ಪ್ರಕಾಶ್ ತಾಯಿ ಸುಧಾ ಭಾಸ್ತಿ, ಮತ್ತು ಪತಿ ಚೆಟ್ಟೀರ ನಾಣಯ್ಯ ನೀಡುತ್ತಿರುವ ಪ್ರೋತ್ಸಾಹ, ಬೆಂಬಲ ಮರೆಯಲಸಾಧ್ಯ. ಪತಿಯ ಮನೆಯ ವಹಿವಾಟು ನಿರ್ವಹಿಸುತ್ತಿರುವುದರಿಂದಾಗಿ ತನ್ನ ಸಾಹಿತ್ಯಿಕ ಕಾರ್ಯ ಸುಲಿತವಾಗಲು ಸಾಧ್ಯವಾಗಿದೆ ಎಂದೂ ದೀಪಾ ಹೇಳಿಕೊಂಡರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಹಸಿರ ಸಿರಿ ನಡುವೆ ತನ್ನ ಪಾಡಿಗೆ ತಾನು ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ದೀಪಾ ಅವರ ಶ್ರಮಕ್ಕೆ ಶ್ಲಾಘನೀಯ ಪ್ರತಿಫಲ ಬೂಕರ್ ಪ್ರಶಸ್ತಿ ಮೂಲಕ ದೊರಕಿದೆ. ಈ ಮೂಲಕ ಕೊಡಗು ಜಿಲ್ಲೆಯೂ ವಿಶ್ವದ ಸಾಹಿತ್ಯಲೋಕದ ಬಾನಂಗಣದಲ್ಲಿ ರಾರಾಜಿಸುವಂತಾಗಿದೆ ಎಂದು ಹೇಳಿದರು.ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಪರವಾಗಿ ದೀಪಾಭಾಸ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು, ಸಂಘದ ಸಲಹೆಗಾರರಾದ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ನಿರ್ದೇಶಕರು, ಸದಸ್ಯರು ಹಾಜರಿದ್ದರು.
70 ಸಾವಿರ ಪ್ರತಿ ಮಾರಾಟದ ದಾಖಲೆ ನಿರ್ಮಿಸಿದ ಹಾರ್ಟ್ ಲ್ಯಾಂಪ್!ಬೂಕರ್ ಪ್ರಶಸ್ತಿ ಪಡೆದ ಹಾರ್ಟ್ ಲ್ಯಾಂಪ್ ಕೃತಿಯು ಕೇವಲ 3 ವಾರದಲ್ಲಿಯೇ 70 ಸಾವಿರ ಪ್ರತಿಗಳ ಮುದ್ರಣ ಕಂಡಿದ್ದು 1 ತಿಂಗಳಲ್ಲಿ 1.50 ಲಕ್ಷ ಕೃತಿ ಮಾರಾಟದ ದಾಖಲೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಹಲವಾರು ಭಾಷೆಗಳಿಂದ ಹಾರ್ಟ್ ಲ್ಯಾಂಪ್ ಕೃತಿಯ ಅನುವಾದ ಮುದ್ರಣಕ್ಕಾಗಿ ಬೇಡಿಕೆ ಬರುತ್ತಿದೆ. ಸದ್ಯಕ್ಕೆ ಮಲಯಾಳಂ, ಅಸ್ಸಾಮಿ, ಓಡಿಯಾ ಭಾಷೆಗಳ ತರ್ಜುಮೆಗೆ ಅನುಮತಿ ನೀಡಿದ್ದೇನೆ. ಪ್ರಮುಖ ಪುಸ್ತಕ ಮಾರಾಟ ತಾಣಗಳಲ್ಲಿ ಸತತ 3 ವಾರಗಳಿಂದ ಹಾರ್ಟ್ ಲ್ಯಾಂಪ್ ಕೃತಿಯುವ ಮಾರಾಟದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
- ದೀಪಾ ಭಾಸ್ತಿ, ಲೇಖಕಿ.