ಸಾರಾಂಶ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ತಾಲೂಕಿನ ಚಿಕ್ಕ ಸೊಬಟಿ ಗ್ರಾಮದ ಹೊರವಲಯದ ಸಜ್ಜೆ ಹೊಲವೊಂದರ ಕರಿ ಜಾಲಿ ಮರವೇರಿದ್ದ ಹೆಣ್ಣು ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅತ್ಯಂತ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಬರೋಬ್ಬರಿ ೩ ತಾಸುಗಳಷ್ಟು ಮರದಲ್ಲಿದ್ದ ೫೮ ಕೆ.ಜಿ. ತೂಕದ ಕರಡಿಗೆ ಹಂಪಿ ಪ್ರಾಣಿ ಸಂಗ್ರಹಾಲಯದ ಪಶುವೈದ್ಯೆ ಡಾ.ವಾಣಿ ಟಪ್ಟಿಂಗ್ ಗನ್ ಬಳಸಿ ಅರವಳಿಕೆ ಚುಚ್ಚುಮದ್ದು ನೀಡಿದರು. ಆರಂಭದಲ್ಲಿ ಗ್ರಾಮದ ಹೊರವಲಯದಲ್ಲಿನ ಸಜ್ಜೆ ಹೊಲದ ಬೇವಿನ ಮರವೇರಿದ್ದ ಕರಡಿ ಗ್ರಾಮಸ್ಥರ ಸದ್ದುಗದ್ದಲ ಹೆಚ್ಚುತ್ತಿದ್ದಂತೆ ಮುಂದೆ ಸಾಗಿ ಕರಿಜಾಲಿ ಮರವೇರಿತು. ಬಳಿಕ ಮರದಿಂದ ಕೆಳಗೆ ಬೀಳದಂತೆ ಕಟ್ಟಲಾಗಿದ್ದ ಬಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕೆಳಗಿಳಿಸಿದರು. ಗ್ರಾಮಸ್ಥರು ಸಮಾಧಾನದಿಂದ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿದ್ದು ವಿಶೇಷವಾಗಿತ್ತು. ಕರಡಿ ಮೇಲೇರಿದ್ದ ಮರದ ಸುತ್ತಲಿನ ಗಿಡಮರಗಳನ್ನು ಕತ್ತರಿಸುವಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೆರವಾದರು. ತಾಲೂಕಿನಲ್ಲಿ ಗದ್ದಿಕೇರಿ ಗ್ರಾಮದಲ್ಲಿ ಇತ್ತೀಚೆಗೆ ಮರವೇರಿ ಕುಳಿತಿದ್ದ ಕರಡಿಯೊಂದನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆರ್ಎಫ್ ರೇಣುಕಾ, ಡಿಆರ್ಎಫ್ಒ ಕರಿಬಸಪ್ಪ ಅಡವಿಹಳ್ಳಿ, ತಿರುಮಲೇಶ, ಅರಣ್ಯರಕ್ಷಕರಾದ ಮಂಜುನಾಥ ಮುದ್ದೆಗೌಡರ, ಕೆ.ಜಂಬಣ್ಣ, ರಾಜೇಂದ್ರ ಕುಮಾರ್, ಅರಣ್ಯ ವೀಕ್ಷಕರಾದ ನಾಗರಾಜ, ರಾಜು, ಲವ ಇತರರಿದ್ದರು.