ಕನಕಪುರ: ಕಲುಷಿತ ನೀರು ಸೇವನೆಯಿಂದ ಸೋಂಕು ತಗುಲಿ ಹೆಣ್ಣಾನೆಯೊಂದು ಸಾವನ್ನಪ್ಪಿರುವ ಘಟನೆ ಸಂಗಮ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ ಮುಗ್ಗೂರು ಅರಣ್ಯ ಪ್ರದೇಶದ ಮಡಿವಾಳ ಅರಣ್ಯದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸಂಗಮ ಬಳಿಯ ಮಡಿವಾಳದ ಎಲ್ಲೆ ಮಾರಮ್ಮ ದೇವಾಲಯದ ಬಳಿ 35-40 ವರ್ಷದ ಹೆಣ್ಣಾನೆ ಸಾವನಪ್ಪಿದ್ದು, ಮಡಿವಾಳ ಆನೆ ಕ್ಯಾಂಪ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಆನೆ ಸಾವನಪ್ಪಿರುವುದು ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆ ವನ್ಯಜೀವಿ ವಲಯದ ಎಸಿಎಫ್ ನಾಗೇಂದ್ರ ಪ್ರಸಾದ್, ಆರ್ಎಫ್ಒ ರಾಜೇಂದ್ರ ಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ಆನೆ ಜೊತೆ 3 ವರ್ಷದ ಮರಿ ಆನೆ ಇದ್ದು ಮರಿ ಆನೆ ಸೊಂಡಿಲಿನಿಂದ ಮೃತ ಆನೆಯನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸೋಂಕಿನಿಂದ ಕರುಳು ಮತ್ತು ಮೂತ್ರಪಿಂಡ ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಕಾಡಾನೆ ಆಹಾರ ಸೇವಿಸಲಾಗದೆ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆ ಕೆ ಪಿ ಸುದ್ದಿ 01:ಸಂಗಮ ಅರಣ್ಯ ಪ್ರದೇಶದಲ್ಲಿ ಸಾವಪ್ಪಿರುವ ಹೆಣ್ಣಾನೆ.