ಸಾರಾಂಶ
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಕುರಿತ ವಿಶೇಷ ಕಾರ್ಯಕ್ರಮವನ್ನು ನಾಪೋಕ್ಲು ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲೆ ಡಾ.ಕಾವೇರಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೆಣ್ಣು ಜಾನಪದ ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಿದ್ದು ತನ್ನ ಸಂಸಾರದಲ್ಲಿ ಶಕ್ತಿಯಾಗಿದ್ದವಳು ಎಂದು ನಾಪೋಕ್ಲು ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲೆ ಡಾ.ಕಾವೇರಿ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಸರಿ ಸಮನಾಗಿ ಹೊಲ ಗದ್ದೆಗಳಲ್ಲಿ ದುಡಿದು, ಮನೆಯ ಜವಾಬ್ದಾರಿ ಹೊತ್ತು, ಸಂಸಾರ ಕುಟುಂಬಗಳ ನಿರ್ವಹಿಸುವಲ್ಲಿ ಹೆಣ್ಣು ಮೇಲುಗೈ ಸಾಧಿಸುವಳು, ಧಾರ್ಮಿಕ ಆಚರಣೆಗಳಲ್ಲಿ, ಸಭೆ ಸಮಾರಂಭಗಳು ನಿರ್ವಹಿಸುವಲ್ಲಿ ಹೆಣ್ಣಿನ ಪಾತ್ರ ಮುಖ್ಯವಾಗಿರುತ್ತದೆ. ಅನೇಕ ಜಾನಪದ ಗೀತೆಗಳಲ್ಲಿ ಹೆಣ್ಣಿನ ತ್ಯಾಗ, ನಿಷ್ಠೆ, ಧೈರ್ಯವನ್ನು ಪ್ರಶಂಸಿಸಲಾಯಿತು. ದಾಂಪತ್ಯದಲ್ಲಿ ಹೆಣ್ಣಿನ ಉದಾರತೆಯನ್ನು ಜಾನಪದ ಗೀತೆಗಳು ತಿಳಿಸುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದವು ಸಾಹಿತ್ಯದ ಮೂಲ ಬೇರು ಮತ್ತು ಪ್ರೇರಣೆ ಆಗಿದೆ ಎಂದು ವಿವರಿಸಿದರು
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಸವರಾಜು ಕೆ. ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ರಘುರಾಜ್, ಉಪನ್ಯಾಸಕ ಡಾ. ಪ್ರಭು ಮತ್ತಿತರರಿದ್ದರು.