ಸಾರಾಂಶ
ಯಾದಗಿರಿ ನಗರದ ಎಸ್ಡಿಎನ್ ಹೋಟೆಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸ್ತ್ರೀ ಎಂದರೆ ಒಂದು ಶಕ್ತಿ, ಸ್ತ್ರೀಯು ಸಂಸಾರದಲ್ಲಿ ಅಷ್ಟೆ ಅಲ್ಲದೆ ಹೊರ ಪ್ರಪಂಚದಲ್ಲಿಯೂ ಒಳ್ಳೆಯ ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಅತ್ಯುನ್ನತ ಹುದ್ದೆ ಪಡೆದು ಸಮಾಜದಲ್ಲಿ ಸ್ವಾವಲಂಬಿಯಾಗಿ ಸರ್ವತೋಮುಖವಾಗಿ ಆದರ್ಶ ಹೊಂದಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.ನಗರದ ಎಸ್ಡಿಎನ್ ಹೋಟೆಲ್ನಲ್ಲಿ ಜೆಸ್ಕಾಂ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಮಹಿಳಾ ನೌಕರರ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಯು ಕೇವಲ ಸಂಸಾರದ ಜವಾಬ್ದಾರಿ ಹೊತ್ತರೆ ಸಾಲದು, ಅವರು ಕೂಡ ಸಮಾಜದ ಕಡೆಗೆ ಮುಖ ಮಾಡಬೇಕು ಎಂದರು.
ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಮೆಚ್ಚುವಂತಹದು. ಆದರೆ, ವಿದ್ಯುತ್ ನಿಗಮದಂತಹ ಕಚೇರಿಗಳಲ್ಲಿ ಕಾರ್ಯ ನಿರ್ವಸುವುದು ತುಂಬಾ ಧೈರ್ಯದ ಕಾರ್ಯ ಎಂದು ಶ್ಲಾಘಿಸಿದರು.ಮಹಿಳೆಯೂ ಪ್ರತಿಯೊಂದು ರೂಪದಲ್ಲಿ ಗಂಡಿಗೆ ಬಾಲ್ಯದಲ್ಲಿ ಗೆಳತಿಯಾಗಿ, ಸಹೋದರಿಯಾಗಿ, ಶಾಲಾ ಹಂತದಲ್ಲಿ ಶಿಕ್ಷಣ ನೀಡುವ ಶಿಕ್ಷಕಿಯಾಗಿ, ಬೇಕು-ಬೇಡ ನೋಡುವ ಗೃಹಿಣಿ ರೂಪದ ಧರ್ಮಪತ್ನಿಯಾಗಿ ನಮ್ಮ ಸಾವಿನಲ್ಲೂ ಜಾಗ ನೀಡುವ ಭೂಮಿತಾಯಿಯಾಗಿ ಜೊತೆಯಾಗಿ ನಿಲ್ಲುವಳು ಹೆಣ್ಣು ಎಂದರು.
ಒಟ್ಟಾರೆಯಾಗಿ ಸದಾ ಕ್ರಿಯಾಶೀಲತೆಯಿಂದ ತೊಡಗಿಕೊಂಡು ಹೆಣ್ಣು ಗುಣಮಟ್ಟದ ಶಿಕ್ಷಣ ಪಡೆದು ಉದ್ಯೋದಗಸ್ತೇಯಾಗಿ ಸಮಾಜದ ಕಣ್ಣಿಗೆ ಗೌರವ ಕಾಣುತ್ತಿರುವುದು ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ.ಡಿ ಮಾತನಾಡಿದರು. ಕಾರ್ಯನಿರ್ವಾಹಕ ಅಭಿಯಂತರರು ಮುಮತಾಜ್, ಚಂದ್ರಕಾಂತ ಕಾಂಬ್ಳೆಕರ್, ಶ್ವೇತಾ ದಾಸನಕೇರಿ, ಶೀಲಾ ಸೇರಿ ಸಿಬ್ಬಂದಿ ಇದ್ದರು. ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು.