ಲಕ್ಷ್ಮೇಶ್ವರ: ತಾಲೂಕಿನ ಕೆಲ ಗೊಬ್ಬರ ಮಾರಾಟ ಮಾಡುವ ಅಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಜಿಲ್ಲಾ ಪ್ರ. ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಹಾಗೂ ತಾಲೂಕು ಅಧ್ಯಕ್ಷ ಲೊಕೇಶ ಸುತಾರ ಆಗ್ರಹಿಸಿದರು.

ಬುಧವಾರ ಪಟ್ಟಣದ ಸೋಮೇಶ್ವರ ಪಾದಗಟ್ಟಿ ಹತ್ತಿರ ಕರವೇ ವತಿಯಿಂದ ಬಜಾರ ರಸ್ತೆತಡೆದು ಪ್ರತಿಭಟನೆ ನಡೆಸಿ ಮಾತನಾಡಿದರು. ಪಟ್ಟಣದ ಹಲವು ಗೊಬ್ಬರ ಅಂಗಡಿಗಳಲ್ಲಿ ಡಿಎಪಿ ಗೊಬ್ಬರ ಇದ್ದರೂ ಇಲ್ಲ ಎಂದು ಹೇಳಿ ರೈತರಿಗೆ ವಿತರಣೆ ಮಾಡುತ್ತಿಲ್ಲ. ಗೊಬ್ಬರದ ಅಂಗಡಿಯ ಮಾಲೀಕರು ಡಿಎಪಿ ಗೊಬ್ಬರ ಜತೆಗೆ ಬೇರೆ ಗೊಬ್ಬರಗಳ ಲಿಂಕನ್ನು ಕೊಡುತ್ತಿದ್ದಾರೆ ಎಂದರು.

ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲ ಅಂಗಡಿ ಮಾಲೀಕರು ಬೇರೆ ಬೇರೆ ಜಾಗದಲ್ಲಿ ಗೊಬ್ಬರ ಸಂಗ್ರಹ ಮಾಡಿ ಇಟ್ಟಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಅನುಮತಿ ಪಡೆದ ಅಂಗಡಿಗಳು ಸರ್ಕಾರ ನಿಗದಿಪಡಿಸಿದ ದರಗಳ ಪಟ್ಟಿಯ ನಾಮಫಲಕವನ್ನು ಅಂಗಡಿಯ ಮುಂಭಾಗದಲ್ಲಿ ಹಾಕಬೇಕು. ಕೆಲ ಅಂಗಡಿ ಮಾಲೀಕರು ನಕಲಿ ಬಿಲ್ಲು ಕೊಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅವರ ಮೇಲೆ ಸೂಕ್ತ ಕ್ರಮಗೊಂಡು ಅವರ ಲೈಸೆನ್ಸ್ ರದ್ದು ಪಡಿಸಬೇಕು.7 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಶಿರಹಟ್ಟಿ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರಿಗೆ ಕಾರ್ಯಕರ್ತರು ತರಾಟೆ ತೆಗೆದುಕೊಂಡರು. ಇಷ್ಟು ದಿನ ರಸಗೊಬ್ಬರವನ್ನು ಹೆಚ್ಚಿಗೆ ದರಕ್ಕೆ ಮಾರಾಟ ಮಾಡುತ್ತಿರುವುದು ಗೊತ್ತಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ, ಗೊಬ್ಬರ ಅಂಗಡಿಗಳಿಗೆ ಭೇಟಿ ಯಾಕೆ ನೀಡಿಲ್ಲ, ಇದರಲ್ಲಿ ಅಧಿಕಾರಿಗಳ ಶಾಮೀಲು ಇದ್ದಾರೆ ಎಂದು ಆರೋಪಿಸಿದರು.ಸ್ಥಳಕ್ಕೆ ಆಗಮಿಸಿದ ಗ್ರೇಡ್- 2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರು ಮನವಿ ಸ್ವೀಕರಿಸಿದರು. ಲಕ್ಷ್ಮೇಶ್ವರ ತಾಲೂಕು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ ಅಹಿತಕರ ಘಟನೆ ಆಗದಂತೆ ಬಂದೋಬಸ್ತ್ ವಹಿಸಿದ್ದರು.

ತಾಲೂಕು ಗೌರವಾಧ್ಯಕ್ಷ ಪ್ರವೀಣ ಗಾಣಗೇರ, ಬಸವರಾಜ. ಮಲ್ಲೂರ, ಅರುಣ. ಮೆಕ್ಕಿ, ಗಂಗಾಧರ ಕರ್ಜಕಣ್ಣವರ, ಗಂಗಾಧರ ಕೊಂಚಿಗೇರಿಮಠ, ಮಂಜುನಾಥ ಕೊಡಳ್ಳಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಬಸಯ್ಯ ಗಡ್ಡದೇವರಮಠ, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಸಾವಿತ್ರಿ ಅತ್ತಿಗೇರಿ, ಹುಲಿಗೆಮ್ಮ ಮೇವುಂಡಿ, ಜಯಮ್ಮ ತುಪ್ಪದ, ಲಕ್ಷ್ಮಕ್ಕ ಪಶುಪತಿಹಾಳ, ರೇಷ್ಮಾ ಜಾಧವ, ಸಾವಕ್ಕ ಮುಳ್ಳಳ್ಳಿ ಸೇರಿದಂತೆ ಅನೇಕರು ಇದ್ದರು.