ಸಾರಾಂಶ
ಬ್ಯಾಡಗಿ: ಆಧುನಿಕತೆಯ ಭರಾಟೆಯಲ್ಲಿ ಜನರು ಭಕ್ತಿ ಹಾಗೂ ಸಂಪ್ರದಾಯಗಳಿಂದ ವಿಮುಖವಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಆಚರಣೆಗೊಳ್ಳಬೇಕಾದ ಹಬ್ಬ- ಹರಿದಿನಗಳು ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗುತ್ತಿದ್ದು, ನಮಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗುತ್ತಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ತಾಲೂಕು ಯಾದವ ಗೊಲ್ಲ ಸಮಾಜದ ವತಿಯಿಂದ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಲಿಂಗಾಯತರಿಗೆ ಸೀಮಿತವಾಗುತ್ತಿರುವ ಬಸವೇಶ್ವರ, ಕುರುಬ ಸಮುದಾಯಕ್ಕೆ ಕನಕದಾಸರು, ತಳವಾರ ಜನಾಂಗಕ್ಕೆ ಮಹರ್ಷಿ ವಾಲ್ಮೀಕಿ, ಯಾದವ ಸಮಾಜಕ್ಕೆ ಶ್ರೀಕೃಷ್ಣ, ರಡ್ಡಿ ಸಮುದಾಯಕ್ಕೆ ವೇಮನ ಹೀಗೇ ಬಹುತೇಕ ಶರಣರು ದಾರ್ಶಕನಿಕರನ್ನು ವಿವಿಧ ಸಮುದಾಯಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಕಣ್ಮರೆಯಾಗುತ್ತಿದೆ ಸಹಭಾಗಿತ್ವ: ಧಾರ್ಮಿಕ ಆಚರಣೆಗಳು ಬಹು ಹಿಂದಿನಿಂದಲೂ ಪ್ರತಿಯೊಂದು ಜಾತಿ ಮತ ಧರ್ಮ ಹಾಗೂ ಸಮುದಾಯದಗಳಿಗೆ ಅನ್ವಯಿಸುತ್ತಿದ್ದವು. ಇತ್ತೀಚಿನ ದಶಕಗಳಲ್ಲಿ ಇಂತಹ ವಾತಾವರಣಗಳು ಕಣ್ಮರೆಯಾಗುತ್ತಿದ್ದು, ಒಂದೊಂದು ಸಮುದಾಯಕ್ಕೆ ಒಂದೊಂದು ಹಬ್ಬ ಹರಿದಿನಗಳು ದಾರ್ಶನಿಕರ ಪುಣ್ಯತಿಥಿಗಳು ಮಠಗಳು ಸೀಮಿತಗೊಳಿಸುತ್ತಿದ್ದು, ಇದರಿಂದ ಜನರಲ್ಲಿರುವ ಸಂಕುಚಿತ ಮನೋಭಾವ ಅನಾವರಣಗೊಳ್ಳಿತ್ತಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್ . ಪಾಟೀಲ ಮಾತನಾಡಿ, ಗೋಕುಲಾಷ್ಟಮಿ ಅಥವಾ ಕೃಷ್ಣ ಜಯಂತಿ ಎಂದೂ ಕರೆಯಲ್ಪಡುವ ಕೃಷ್ಣ ಜನ್ಮಾಷ್ಟಮಿ, ಆಧ್ಯಾತ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಂದರ್ಭವಾಗಿದೆ. ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಜನನವನ್ನು ಸ್ಮರಿಸುವ ಪ್ರಮುಖ ಹಿಂದೂಗಳ ಹಬ್ಬವಾಗಿದೆ ಎಂದರು.
ಇದಕ್ಕೂ ಮುನ್ನ ಶ್ರೀಕೃಷ್ಣನ ಭಾವಚಿತ್ರವನ್ನು ವಿವಿಧ ವಾದ್ಯಮೇಳಗಳೊಂದಿಗೆ ಪಟ್ಟಣದೆಲ್ಲೆಡೆ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಚಿಣ್ಣರಿಂದ ಶ್ರೀಕೃಷ್ಣನ ವೇಷಭೂಷಣಗಳ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಮುಖಂಡರಾದ ದುರ್ಗೆಶ ಗೋಣೆಮ್ಮನವರ, ಮಂಜನಗೌಡ ಲಿಂಗನಗೌಡ್ರ, ಸುರೇಶಗೌಡ ಪಾಟೀಲ(ದಿಡಗೂರು) ಯಾದವ ಸಮಾಜದ ರಾಮಣ್ಣ ಅಂಬ್ಲೆಪ್ಪನವರ, ನವೀನ ಗೊಲ್ಲರ, ಪಿ.ಡಿ. ಸಿದ್ದಪ್ಪಳವರ, ಹನುಮಂತಗೌಡ ಗೊಲ್ಲರ, ನಿವೃತ್ತ ಶಿಕ್ಷಕ ಸಿ.ಎಂ. ತಂಗೊಂಡರ, ಹೊನ್ನಪ್ಪ ಹಾಲಗಿ, ಬಸನಗೌಡ ಸಣ್ಣಗೌಡ್ರ ದುರ್ಗಪ್ಪ ಗೊಲ್ಲರ, ಅಜ್ಜಪ್ಪ ಗೊಲ್ಲರ ಇತರರಿದ್ದರು.