ಕಳೆದ ವರ್ಷ ನಾನು ಸೀನಿಯರ್ ಛೇಂಬರ್ನ ರಾಷ್ಟೀಯ ಅಧ್ಯಕ್ಷನಾಗಿದ್ದಾಗ ಹೊಸದಾಗಿ 55 ಘಟಕಗಳನ್ನು ಪ್ರಾರಂಭಿಸಿದ್ದೇನೆ ಎಂದು ಸೀನಿಯರ್ ಛೇಂಬರ್ನ ನಿಕಟ ಪೂರ್ವ ರಾಷ್ಟೀಯ ಅಧ್ಯಕ್ಷ ಎಂ.ಆರ್.ಜಯೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಳೆದ ವರ್ಷ ನಾನು ಸೀನಿಯರ್ ಛೇಂಬರ್ನ ರಾಷ್ಟೀಯ ಅಧ್ಯಕ್ಷನಾಗಿದ್ದಾಗ ಹೊಸದಾಗಿ 55 ಘಟಕಗಳನ್ನು ಪ್ರಾರಂಭಿಸಿದ್ದೇನೆ ಎಂದು ಸೀನಿಯರ್ ಛೇಂಬರ್ನ ನಿಕಟ ಪೂರ್ವ ರಾಷ್ಟೀಯ ಅಧ್ಯಕ್ಷ ಎಂ.ಆರ್.ಜಯೇಶ್ ತಿಳಿಸಿದರು.ಇಲ್ಲಿಯ ಸಿಂಸೆಯ ಕನ್ಯಕುಮಾರಿ ಕಂಪರ್ಟ್ ಹಾಲ್ನಲ್ಲಿ ಶನಿವಾರ ರಾತ್ರಿ ನಡೆದ ಎನ್.ಆರ್.ಪುರ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಘಟಕದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂಗ್ಲೆಂಡ್, ಅಮೆರಿಕಾ ಸೇರಿದಂತೆ ವಿದೇಶಗಳಲ್ಲೂ ನೂತನ ಘಟಕ ಪ್ರಾರಂಭಿಸಿದ್ದೇನೆ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮಾಣಿಕತೆ,ಬದ್ದತೆಯಿಂದ ಕೆಲಸ ಮಾಡುವುವರ ಸಂಖ್ಯೆ ಹೆಚ್ಚಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಮಕ್ಕಳೇ ಐ.ಎ.ಎಸ್, ಐ.ಪಿ.ಎಸ್. ಪರೀಕ್ಷೆ ಪಾಸು ಮಾಡುತ್ತಿದ್ದಾರೆ.ಸರ್ಕಾರಿ ಶಾಲೆಯಲ್ಲೂ ಉತ್ತಮ ಶಿಕ್ಷಕರಿದ್ದಾರೆ.ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೇಡ ಎಂದರು.
ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ನ ರಾಷ್ಟೀಯ ಉಪಾಧ್ಯಕ್ಷೆ ಶಶಿಕಲಾ ಮಾತನಾಡಿ, ನಮ್ಮ ದೇಶದ ಕೇರಳ ರಾಜ್ಯದಲ್ಲಿ ಸೀನಿಯರ್ ಛೇಂಬರ್ 1997ರಲ್ಲಿ ಪ್ರಥಮವಾಗಿ ಪ್ರಾರಂಭವಾಯಿತು.ಸೀನಿಯರ್ ಛೇಂಬರ್ ಸದಸ್ಯರಾದರೆ ಸಮಾಜ ಸೇವೆ ಮಾಡಬಹುದು ಎಂಬ ಉದ್ದೇಶದಿಂದ ಅಲ್ಲಿನ ಅನೇಕ ಹಿರಿಯರು ಸೀನಿಯರ್ ಛೇಂಬರ್ ಪ್ರಾರಂಭಿಸಿದ್ದರು. ಮಳೆ ಕೊಯ್ಲು ಮಾಡುವುದು ಈ ವರ್ಷ ರಾಷ್ಟೀಯ ಸೀನಿಯರ್ ಛೇಂಬರ್ ಮುಖ್ಯ ಕಾರ್ಯಕ್ರಮವಾಗಿದೆ. ಎನ್.ಆರ್.ಪುರ ಸೀನಿಯರ್ ಛೇಂಬರ್ ಹೊಸ ಸದಸ್ಯರ ಸಂಖ್ಯೆ ಹೆಚ್ಚಿಸಿ ಹೊಸ ಘಟಕ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.ರಾಷ್ಟೀಯ ಸೀನಿಯರ್ ಛೇಂಬರ್ ನಿರ್ದೇಶಕ ಸಿದ್ದಲಿಂಗಯ್ಯ ಮಾತನಾಡಿ, ನಮ್ಮ ದೇಶದಲ್ಲಿ 232 ಸೀನಿಯರ್ ಛೇಂಬರ್ ಘಟಕಗಳಿದ್ದು ಇವುಗಳಲ್ಲಿ 22 ಘಟಕ ಮಾತ್ರ ಉತ್ತಮ ಕೆಲಸ ಮಾಡುತ್ತಿದೆ.ಉತ್ತಮ ಕೆಲಸ ಮಾಡಿದ ಘಟಕಗಳಿಗೆ ರಾಷ್ಟೀಯ ಸೀನಿಯರ್ ಛೇಂಬರ್ ನಿಂದ ಬಹುಮಾನ ನೀಡಲಾಗುವುದು.ಪ್ರಥಮವಾಗಿ ಸೀನಿಯರ್ ಛೇಂಬರ್ ಪ್ರಾರಂಭವಾದ ಕೇರಳದಲ್ಲಿ ಈಗ 90 ಘಟಕ ಗಳಿವೆ. ಕರ್ನಾಟಕ ರಾಜ್ಯದಲ್ಲಿ 100 ಘಟಕಗಳಿವೆ. ಉತ್ತರ ಭಾರತ ರಾಜ್ಯಗಳಲ್ಲಿ ಸೀನಿಯರ್ ಛೇಂಬರ್ ಘಟಕ ಕಡಿಮೆ ಇದೆ. ಮಹಾರಾಷ್ಟದಲ್ಲಿ ಸೀನಿಯರ್ ಛೇಂಬರ್ ಘಟಕ ಪ್ರಾರಂಭವಾಗಿದೆ ಎಂದರು.
ಎನ್.ಆರ್.ಪುರ ಸೀನಿಯರ್ ಛೇಂಬರ್ ನ ನೂತನ ಅಧ್ಯಕ್ಷ ಎಂ.ಕೆ.ಕೃಪಾಲ್ ಗೌಡ, ನೂತನ ಕಾರ್ಯದರ್ಶಿ ಸೋಮಶೇಖರ್ ಹಾಗೂ ಇತರ ನಿರ್ದೇಶಕರಿಗೆ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಕಾರ್ಯದರ್ಶಿ ಕೃಷ್ಣಮೂರ್ತಿ ವಾರ್ಷಿಕ ವರದಿ ಓದಿದರು.ಹಿರಿಯ ಪ್ರಗತಿಪರ ಕೃಷಿಕ ಶೆಟ್ಟಿಕೊಪ್ಪ ಬಿ.ಕೆ.ಜಾನಕಿರಾಂ, ಎಸ್ಎಸ್ಎಲ್ಸಿಯಲ್ಲಿ ಸರ್ಕಾರಿ ಶಾಲೆಗಳ ಪೈಕಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಪಟ್ಟಣದ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿ ಭುವನೇಶ್ವರಿ, ದ್ವಿತೀಯ ಪಿಯುಸಿಯಲ್ಲಿ ಸರ್ಕಾರಿ ಶಾಲೆಗಳ ಪೈಕಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಎನ್.ಆರ್.ಪುರ ಜೂನಿಯರ್ ಕಾಲೇಜಿನ ಅವನಿ ಅವರನ್ನು ಸನ್ಮಾನಿಸಲಾಯಿತು.
ಸೀನಿಯರ್ ಛೇಂಬರ್ ಅಧ್ಯಕ್ಷ ಎಸ್.ಎಸ್.ಜಗದೀಶ್, ಮಾಜಿ ಅಧ್ಯಕ್ಷ ನಾಗರಾಜ ಪುರಾಣಿಕ್, ಕಾರ್ಯಕ್ರಮ ನಿರ್ದೇಶಕ ಕುಮಾರ ಜಿ ಶೆಟ್ಟಿ, ಖಜಾಂಚಿ ದಕ್ಷಿಣಮೂರ್ತಿ ಹಾಜರಿದ್ದರು.