ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಹುತಾತ್ಮ ದಿನಾಚರಣೆಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಹಾತ್ಮ ಗಾಂಧೀಜಿ ಹೆಸರನ್ನ ಅಳಿಸುವವರ ವಿರುದ್ದ ಸಂಘಟಿತ ಹೋರಾಟ ಮಾಡುವುದು ಅಗತ್ಯವೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಪ್ರತಿಪಾದಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಹುತಾತ್ಮ ದಿನಾಚರಣೆಯಲ್ಲಿ ಗಾಂಧಿ ಭಾವ ಚಿತ್ರ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳ ಹೊರಟಿದೆ ಎಂದು ಆರೋಪಿಸಿದರು.

ಭಾರತದ ವಿಭಜನೆಗೆ ಗಾಂಧಿ ಕಾರಣ ಎಂದು ಬಿಜೆಪಿ, ಆರ್‌ಎಸ್‍ಎಸ್, ಬಜರಂಗದಳದವರು ಆಪಾದನೆ ಹೊರಿಸುತ್ತಿದ್ದಾರೆ. ನಿಜವಾಗಿಯೂ ಭಾರತವನ್ನು ವಿಭಜನೆ ಮಾಡಿದವರು ಸಾವರ್ಕರ್, ಮುಖರ್ಜಿ, ಜಿನ್ನಾ ಎಂಬ ಸತ್ಯಾಂಶವನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಮನಮೋಹನ್‍ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಹಾತ್ಮತಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿ ಹೆಸರಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಐದರಿಂದ ಹತ್ತು ಕಿಮೀ ಪಾದಯಾತ್ರೆ ನಡೆಸಿ ಗಾಂಧಿ ವಿಚಾರಗಳನ್ನು ಜನರಿಗೆ ತಲುಪಿಸುವಂತೆ ಕೆಪಿಸಿಸಿ ಸೂಚಿಸಿದೆ. ಗಾಂಧಿ ಪ್ರತಿಮೆ 130 ದೇಶಗಳಲ್ಲಿದೆ. ಅಳಿಸಲು ಸಾಧ್ಯವಿಲ್ಲ. ವಿದೇಶಗಳಿಂದ ಬಂದ ಎಲ್ಲರೂ ರಾಜ್‍ಘಾಟ್‍ಗೆ ಹೋಗಿ ಗಾಂಧಿ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಈ ಕಾಲಘಟ್ಟದಲ್ಲಿ ಬಿಜೆಪಿ, ಆರ್‍ಎಸ್‍ಎಸ್, ಬಜರಂಗದಳದವರು ಗಾಂಧಿ ಕೊಂದ ವ್ಯಕ್ತಿಯನ್ನು ಬಿಂಬಿಸುತ್ತಿರುವುದನ್ನು ನಾವುಗಳು ವಿರೋಧಿಸುತ್ತೇವೆಂದರು.

ಕಾಂಗ್ರೆಸ್ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ನ್ಯಾಯವಾದಿ ಡಿ.ಎಸ್.ಸುದರ್ಶನ್ ಮಾತನಾಡಿ, ಮಹಾತ್ಮಗಾಂಧಿರವರ ಸತ್ಯ ಮತ್ತು ಅಹಿಂಸೆಯ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸರ್ವ ಧರ್ಮವನ್ನು ಇಷ್ಟಪಟ್ಟವರು ಗಾಂಧಿಜಿ. ಬಿಜೆಪಿ, ಆರ್‍ಎಸ್‍ಎಸ್ ನಿಂದ ಗಾಂಧಿ ವಿಚಾರಗಳಿಗೆ ಧಕ್ಕೆಯಾಗುತ್ತಿದೆ. ಸತ್ಯವನ್ನು ನಾಶ ಮಾಡಲು ಹೊರಟವರ ಕರಾಳ ಮುಖವನ್ನು ಜನತೆಯ ಮುಂದೆ ಬಿಚ್ಚಿಡುವ ಕೆಲಸವಾಗಬೇಕೆಂದರು.

ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನ ಕಾಲಿಗೆ ಎರಗಿ ಗುಂಡು ಹಾರಿಸಿದ ನಾಥುರಾಮ್‍ಗೋಡ್ಸ್ ಹೇಡಿತವನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ ಎಂದರು.

ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ರಾಮನ ಭಾವುಟ ಹಿಡಿದುಕೊಂಡು ಜನರ ತಲೆ ಕೆಡಿಸುತ್ತಿದೆ. ಎಲ್ಲದರಲ್ಲೂ ಸಾವರ್ಕರ್ ಮುಂದೆ ತಂದು ಯುವ ಜನಾಂಗವನ್ನು ದಿಕ್ಕು ತಪ್ಪಿಸುತ್ತಿರುವುದರ ವಿರುದ್ದ ನಾವುಗಳು ಹೋರಾಡಬೇಕಿದೆ ಎಂದು ಹೇಳಿದರು.

ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇಣುಕ, ಮಹಮದ್ ಉಸ್ಮಾನ್, ಚಾಂದ್‍ಪೀರ್ ಇದ್ದರು.