ಪುನೀತ್‌ ರಾಜಕುಮಾರ್‌ ಪುಣ್ಯಸ್ಮರಣೆ

| Published : Oct 31 2025, 01:15 AM IST

ಸಾರಾಂಶ

ನಾಲ್ಕು ವರ್ಷಗಳು ಕಳೆದಿದ್ದರೂ ಅವರು ಜೀವಿತಾವಧಿಯಲ್ಲಿ ತೋರಿದ ಸ್ನೇಹ ಪರ ವ್ಯಕ್ತಿತ್ವ ಹಾಗೂ ಪರೋಪಕಾರದ ಗುಣಗಳಿಂದ ಜನರ ಮನಸ್ಸಿನಲ್ಲಿ ಇಂದಿಗೂ ನೆಲೆಸಿದ್ದಾರೆ

ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆಯನ್ನು ಅಭಿಮಾನಿಗಳು ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೀತ ಗಾಯನ ಹಾಗೂ ಅನ್ನ ಸಂತರ್ಪಣೆ ಮೂಲಕ ಸ್ಮರಿಸಿದರು.ಯೋಗ ಶಿಕ್ಷಕ ಹಾಗೂ ಈಡಿಗರ ಸಂಘದ ಮುಖಂಡ ಜಿ.ಕೆ. ಮಂಜುನಾಥ್ ಮಾತನಾಡಿ, ಚಲನಚಿತ್ರ ನಟ ಪುನೀತ್ ರಾಜಕುಮಾರ್‌ ದೈಹಿಕವಾಗಿ ನಮ್ಮಿಂದ ಮರೆಯಾಗಿ ನಾಲ್ಕು ವರ್ಷಗಳು ಕಳೆದಿದ್ದರೂ ಅವರು ಜೀವಿತಾವಧಿಯಲ್ಲಿ ತೋರಿದ ಸ್ನೇಹ ಪರ ವ್ಯಕ್ತಿತ್ವ ಹಾಗೂ ಪರೋಪಕಾರದ ಗುಣಗಳಿಂದ ಜನರ ಮನಸ್ಸಿನಲ್ಲಿ ಇಂದಿಗೂ ನೆಲೆಸಿದ್ದಾರೆ. ಮೇರು ವ್ಯಕ್ತಿತ್ವದ ನಟ ಪುನೀತ್ ರಾಜಕುಮಾರ್ ತಮ್ಮ ಶ್ರೇಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು. ಸರ್ಕಾರದ ಹಲವು ಯೋಜನೆಗಳಿಗೆ ಉಚಿತವಾಗಿ ಪ್ರಚಾರ ರಾಯಭಾರಿಯಾಗಿ ಗುರುತಿಸಿಕೊಳ್ಳುವ ಜೊತೆಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದ್ದರು, ಅವರ ಆದರ್ಶಗಳನ್ನು ಯುವ ಜನರು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಸಂಕಲ್ಪ ಹೊಂದಬೇಕು ಎಂದು ಸಲಹೆ ನೀಡಿದರು.ನಟ ಪುನೀತ್ ರಾಜಕುಮಾರ್ ಅಭಿನಯದ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ಗಾಯಕರು ರಂಜಿಸಿದರು, ಜೊತೆಗೆ ಇದೇ ಸಂದರ್ಭ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಜೂನಿಯರ್ ಕುಮಾರಸ್ವಾಮಿ ಖ್ಯಾತಿಯ ನಾರಾಯಣ್, ಭೈರೋಜಿರಾವ್, ಮಂಜುನಾಥ್, ಶಿವಣ್ಣ, ರವಿಕುಮಾರ್, ಚಂದ್ರು, ಪ್ರದೀಪ್, ಚಿನ್ನಸ್ವಾಮಿ, ಶಂಕರ್, ವಿಕ್ಕಿ, ಮಂಜು ಭಾಗವಹಿಸಿದ್ದರು.ಪುಣ್ಯಸ್ಮರಣೆ ಹಿನ್ನೆಲೆ ಪಟ್ಟಣದ ತ್ಯಾಗರಾಜ ಕಾಲೋನಿ, ಚಾಮಲಾಪುರ ಹುಂಡಿ, ವಿಶ್ವೇಶ್ವರಯ್ಯ ವೃತ್ತ, ಅಪೊಲೋ ವೃತ್ತ ಸೇರಿದಂತೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ನಟ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.