ಅರಮನೆಯಲ್ಲಿ ಜಂಬೂಸವಾರಿ ಅಂತಿಮ ಹಂತದ ತಾಲೀಮು ಯಶಸ್ವಿ

| Published : Oct 01 2025, 01:00 AM IST

ಅರಮನೆಯಲ್ಲಿ ಜಂಬೂಸವಾರಿ ಅಂತಿಮ ಹಂತದ ತಾಲೀಮು ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ 2 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ನಡೆಸಿದ ಅಂತಿಮ ಹಂತದ ಜಂಬೂಸವಾರಿ ತಾಲೀಮು ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ 2 ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳ ಹಾಗೂ ವಿವಿಧ ಪೊಲೀಸ್ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ನಡೆಸಿದ ಅಂತಿಮ ಹಂತದ ಜಂಬೂಸವಾರಿ ತಾಲೀಮು ಯಶಸ್ವಿಯಾಗಿ ಜರುಗಿತು.

ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ದಸರಾ ವಿಜಯದಶಮಿ ಮೆರವಣಿಗೆಯ ಅಂತಿಮ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ, ಸಾಲಾನೆಗಳು, ಅಶ್ವರೋಹಿ ದಳದ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು ಹಾಗೂ ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು.

ಅಂಬಾರಿ ಹೊರಲಿರುವ ಅಭಿಮನ್ಯು ಆನೆಯು ವೇದಿಕೆಯ ಮುಂಭಾಗ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ವಲಯ ಸಿಎಫ್ ರವಿಶಂಕರ್, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಅವರು ಪುಷ್ಪಾರ್ಚನೆ ಮಾಡಿ, ಗೌರವ ವಂದನೆ ಸಲ್ಲಿಸಿದರು.

ಈ ವೇಳೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಅರಮನೆಯ ಹೊರಾವರಣದಲ್ಲಿ 7 ಪಿರಂಗಿಗಳನ್ನು ಬಳಸಿ ಒಟ್ಟು 21 ಕುಶಾಲತೋಪುಗಳನ್ನು ಪಿರಂಗಿದಳದ ಸಿಬ್ಬಂದಿ 1 ನಿಮಿಷದಲ್ಲಿ ಯಶಸ್ವಿಯಾಗಿ ಸಿಡಿಸಿದರು.

ಮುನ್ನಡಿಸಿದ ಧನಂಜಯ:

ಮೊದಲಿಗೆ ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಿ ಸಾಗಿದವು. ನಂತರ ಮೊದಲ ಹಂತದ ಸಾಲಾನೆಯಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಎರಡನೇ ಹಂತದಲ್ಲಿ ಕಂಜನ್, ಭೀಮ, ಏಕಲವ್ಯ ಹಾಗೂ ಮೂರನೇ ಹಂತದಲ್ಲಿ ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ ಆನೆಗಳು ಸಾಗಿದವು. ತದನಂತರ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿನ ಜೊತೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಆನೆಗಳು ಹೆಜ್ಜೆ ಹಾಕಿದವು.

ಅ.2 ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್‌ ಗಳು ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾಲೀಮು ಜರುಗಿತು.ಗಜಪಡೆಯ ಎಲ್ಲಾ ತಾಲೀಮು ಅಂತ್ಯ

ಈ ಬಾರಿಯ ದಸರಾಗೆ ಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದು, ವಿಜಯದಶಮಿ ಮೆರವಣಿಗಾಗಿ ವಿವಿಧ ತಾಲೀಮಿನಲ್ಲಿ ಆನೆಗಳು ಭಾಗವಹಿಸಿ ಯಶಸ್ವಿಗೊಳಿಸಿವೆ.

ಈಗಾಗಲೇ ಅರಮನೆ ಆವರಣದ ಆನೆ ಬಿಡಾರದಿಂದ ಬನ್ನಿಮಂಟಪದವರೆಗೆ ನಡಿಗೆ ತಾಲೀಮು, ಮರಳು ಮೂಟೆ ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ಯಶಸ್ವಿಗೊಳಿಸಿ, ಮೂರು ಬಾರಿ ಕುಶಾಲತೋಪು ಸಿಡಿಸುವಾಗ ಉಂಟಾಗುವ ಶಬ್ದದ ಪರಿಚಯಿಸುವ ತಾಲೀಮನ್ನು ಗಜಪಡೆ ಯಶಸ್ವಿಗೊಳಿಸಿವೆ. ಈಗ ಅಂತಿಮ ಹಂತವಾದ ಜಂಬೂಸವಾರಿ ತಾಲೀಮು ಸಹ ಅಂತ್ಯವಾಗಿದೆ. ಈಗ ಏನಿದ್ದರೂ ನೈಜವಾದ ಜಂಬೂಸವಾರಿ ಮಾತ್ರ ಬಾಕಿ ಇದೆ.ವಿಜಯದಶಮಿ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ರಿಹರ್ಸಲ್ ನಡೆಸಿದ್ದು, ಗೌರವ ವಂದನೆ, ಪೋಷಿಶನ್ ಎಲ್ಲದರ ರಿಹರ್ಸಲ್ ಮಾಡಲಾಗಿದೆ. ಇದೇ ಫೈನಲ್. ಇದೇ ರೀತಿ ಜಂಬೂಸವಾರಿ ಪ್ರಕ್ರಿಯೆ ನಡೆಯಲಿದೆ. ದಸರಾಗೆ ಎರಡು ಫೇಸ್ ನಲ್ಲಿ ಸೆಕ್ಯುರಿಟಿ ಇದ್ದು, ಹೆಚ್ಚಿನ ಪೊಲೀಸ್ ಭದ್ರತೆ ಇರಲಿದೆ.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆದಸರಾ ಜಂಬೂಸವಾರಿಗೆ ಎಲ್ಲಾ ಸಿದ್ಧತೆ ಆಗಿದ್ದು, ಆನೆಗಳು ಎಲ್ಲಾ ರೀತಿಯಲ್ಲೂ ಫಿಟ್ ಆಗಿವೆ, ಆರೋಗ್ಯವಾಗಿವೆ. 14 ಆನೆಗಳು ವಿಜಯದಶಮಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಜಂಬೂಸವಾರಿ ವೇಳೆ ಜನ ಶಾಂತ ರೀತಿಯಲ್ಲಿ ಸಹಕರಿಸಬೇಕು.

- ರವಿಶಂಕರ್, ಸಿಎಫ್, ಮೈಸೂರು ವಲಯ