ಜನಸೇವೆಗೆ ಆರ್ಥಿಕ ಸಲಹೆಗಾರ ಹುದ್ದೆ ಸಹಕಾರಿ: ಶಾಸಕ ಬಸವರಾಜ ರಾಯರಡ್ಡಿ

| Published : Jan 07 2024, 01:30 AM IST / Updated: Jan 07 2024, 04:51 PM IST

ಜನಸೇವೆಗೆ ಆರ್ಥಿಕ ಸಲಹೆಗಾರ ಹುದ್ದೆ ಸಹಕಾರಿ: ಶಾಸಕ ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದಾಗ ನನಗಿಂತಲೂ ನೋವು ಪಟ್ಟವರು ಸಿದ್ದರಾಮಯ್ಯ. ಹೀಗಾಗಿ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನವಿಟ್ಟು ಆರ್ಥಿಕತೆಯಲ್ಲಿ ನನ್ನ ನಿಪುಣತೆ ಅರಿತು ಈ ಬಹುದೊಡ್ಡ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ.

ಯಲಬುರ್ಗಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ನನ್ನನ್ನು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಇದರಿಂದ ರಾಜ್ಯದ ಜನರ ಕೆಲಸ ಮಾಡಲು ನನಗೆ ಹೆಚ್ಚು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಕೃಷ್ಣಾಭಾಗ್ಯ ಜಲನಿಗಮದಿಂದ ಆಯೋಜಿಸಿದ್ದ ಚಿಕ್ಕವಂಕಲಕುಂಟಾ-ಕಲ್ಲಭಾವಿ ಕೆರೆಗೆ ಗಂಗಾಪೂಜೆ ಹಾಗೂ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ೧೪ ಬಜೆಟ್‌ಗಳನ್ನು ಮಂಡಿಸಿ ಇದೇ ಫೆಬ್ರುವರಿಯಲ್ಲಿ ೧೫ನೇ ಬಜೆಟ್ ಮಂಡಿಸುವ ಮೂಲಕ ಅತ್ಯಂತ ಅನುಭವಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.

ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದಾಗ ನನಗಿಂತಲೂ ನೋವು ಪಟ್ಟವರು ಸಿದ್ದರಾಮಯ್ಯ. ಹೀಗಾಗಿ ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನವಿಟ್ಟು ಆರ್ಥಿಕತೆಯಲ್ಲಿ ನನ್ನ ನಿಪುಣತೆ ಅರಿತು ಈ ಬಹುದೊಡ್ಡ ಜವಾಬ್ದಾರಿ ನೀಡಿರುವುದು ನನಗೆ ಸಂತಸ ತಂದಿದೆ. ಈ ಹಿಂದೆ ೨೦೧೮ರಲ್ಲಿ ಸಿದ್ದರಾಮಯ್ಯ ಕೃಷ್ಣಾ ನದಿಯಿಂದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರೂ ಆಗ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. 

ನಾನು ಕೂಡ ಚುನಾವಣೆಯಲ್ಲಿ ಸೋತೆ. ಆದರೆ ನಮ್ಮ ಸರ್ಕಾರ ಮಾಡಿದ ಯೋಜನೆಯನ್ನು ಬಿಜೆಪಿಗರು ತಮ್ಮದು ಎಂದು ಹೇಳುತ್ತಿರುವುದು ಸರಿಯಲ್ಲ. ಕ್ಷೇತ್ರದಲ್ಲಿ ೩೮ ಕೆರೆಗಳನ್ನು ತುಂಬಿಸಲು ಪ್ರಯತ್ನ ನಡೆಸಿದ್ದು, ಈಗಾಗಲೇ ಸಿಎಂ ಡಿಪಿಆರ್ ತಯಾರಿಸಲು ಸೂಚಿಸಿದ್ದಾರೆ. ₹೮೦೦ ಕೋಟಿ ಬೇಕಾಗುತ್ತದೆ. ಇನ್ನು ೧೪ ಕಡೆ ಹೊಸ ಕೆರೆಗಳ ನಿರ್ಮಾಣವಾಗಬೇಕಿದೆ. ಯೋಜನೆ ಮುಗಿಯಲು ಮೂರು-ನಾಲ್ಕು ವರ್ಷ ಬೇಕಿದೆ. ನಾನು ನೀರಾವರಿ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಮಹೇಶ ಹಳ್ಳಿ, ಕೆಬಿಜಿಎನ್ ಎಲ್ ಎಇಇ ಚೆನ್ನಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಕೃಷ್ಣಾಭಾಗ್ಯ ಜಲನಿಗಮ ತಂಬಿದೊರೈ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಬಿರಾದರ ಪಾಟೀಲ, ಎಇಇಗಳಾದ ಎಸ್.ಎಂ. ದ್ಯಾಮಣ್ಣನವರ, ಶ್ರೀಧರ ತಳವಾರ, ಮೌನೇಶ ಪಾಟೀಲ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ರಾಘವೇಂದ್ರಚಾರ್ಯ ಜೋಶಿ, ಹನುಂಮತಗೌಡ ಚೆಂಡೂರು, ವೀರನಗೌಡ ಪೋಲಿಸಪಾಟೀಲ, ಕೆರಿಬಸಪ್ಪ ನಿಡಗುಂದಿ, ಅಡಿವೆಪ್ಪ ಭಾವಿಮನಿ, ಅಶೋಕ ತೋಟದ, ಎಂ.ಎಫ್‌. ನದಾಫ, ಶರಣಪ್ಪ ಉಪ್ಪಾರ, ಗಿರಿಜಾ ಸಂಗಟಿ, ಡಾ.ನಂದಿತಾ ದಾನರಡ್ಡಿ, ಅಪ್ಪಣ್ಣ ಜೋಶಿ, ರುದ್ರಪ್ಪ ಮರ್ಕಟ್ಟ, ಬಸವರಾಜ ಹಿರೇಮನಿ,

ಡಾ.ದಾನರೆಡ್ಡಿ, ಹುಲಗಪ್ಪ ಬಂಡಿವಡ್ಡರ ಮತ್ತಿತರರು ಇದ್ದರು.