ಮಾಂಸಾಹಾರದ ಕಾನೂನು ಬೇರೆಯೇ ಇದೆ. ಒಂದೇ ಕಡೆ ಇಟ್ಟು ಮಾರಾಟ ಮಾಡಬೇಕಿದೆ. ಬೇರೆ ಕಡೆ, ಗಾಡಿಗಳಲ್ಲಿ, ಮನೆಗಳಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ.
ಮೀನು ಮಾರಾಟದ ಕುರಿತು ಸಾರ್ವಜನಿಕರ ದೂರು, ಸಭೆಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಾಂಸಾಹಾರದ ಕಾನೂನು ಬೇರೆಯೇ ಇದೆ. ಒಂದೇ ಕಡೆ ಇಟ್ಟು ಮಾರಾಟ ಮಾಡಬೇಕಿದೆ. ಬೇರೆ ಕಡೆ, ಗಾಡಿಗಳಲ್ಲಿ, ಮನೆಗಳಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ. ಅದಕ್ಕಾಗಿಯೇ ಮೀನು, ಮಾಂಸ ಮಾರುಕಟ್ಟೆ ಇದೆ. ಎಲ್ಲೆಂದರಲ್ಲಿ ಮಾರಾಟ ಮಾಡದೇ ಅಲ್ಲಿಯೇ ಮಾರಾಟ ಮಾಡಬೇಕು. ಬೇಕಾಬಿಟ್ಟಿ ವ್ಯಾಪಾರ ಮುಂದುವರೆದರೆ ಅಂತವರ ಮೇಲೆ ಎಫ್ಐಆರ್ ದಾಖಲು ಮಾಡಬೇಕಾಗುತ್ತದೆ ಎಂದು ತಹಶೀಲ್ದಾರ ಎಂ.ಆರ್. ಕುಲಕರ್ಣಿ ಬೇಕಾಬಿಟ್ಟಿ ಮೀನು ಮಾರಾಟ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿದರು.ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮೀನು ಮಾರಾಟದ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆ ತಹಶೀಲ್ದಾರ ಕಚೇರಿಯಲ್ಲಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನು ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಮೀನು ಮಾರುಕಟ್ಟೆ ವ್ಯಾಪಾರಸ್ಥರ ಸಭೆಯನ್ನೂ ಕರೆದು ಅವರಿಗೂ ಮನವರಿಕೆ ಮಾಡಿಕೊಡಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿಯೂ ಮಾರಾಟ ಮಾಡುವಂತಿಲ್ಲ. ಅನಧಿಕೃತ ವ್ಯವಹಾರಕ್ಕೆ ಅವಕಾಶವಿಲ್ಲ. ಹೊರಗಿನಿಂದ ಮೀನು ತಂದ ಆಟೋ ಮೀನು ಮಾರುಕಟ್ಟೆ ಹೊರತುಪಡಿಸಿ ಬೇರೆಡೆ ಹೋಗುವಂತಿಲ್ಲ. ಎಲ್ಲರೂ ಒಂದೇ ಕಡೆ ಕುಳಿತು ಲಾಭವನ್ನು ಹಂಚಿಕೊಳ್ಳಿ. ಎಲ್ಲರೂ ವ್ಯವಸ್ಥೆಯಲ್ಲಿಯೇ ಇರಬೇಕು. ಇವತ್ತಿಂದಲೇ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಎಂದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗುಲೆ ಮಾತನಾಡಿ, ಮೀನು ಮಾರುಕಟ್ಟೆ ಹೊರತುಪಡಿಸಿ ಬೇರೆಡೆ ಸಿಂಗಲ್ ಮೀನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿ ಎನ್ನಲು ಸಾಧ್ಯವಿಲ್ಲ. ಪಟ್ಟಣ ಪಂಚಾಯತಿಯಿಂದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ ಅವರು, ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನು ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಯಲ್ಲಾಪುರದ ಮೀನು ಮಾರಾಟಗಾರರು ಒಪ್ಪಿಗೆ ಸೂಚಿಸಿದರು. ಪಪಂ ಅಧಿಕಾರಿ ಹೇಮಾವತಿ ಭಟ್ಟ, ಆರೋಗ್ಯ ನಿರೀಕ್ಷಕ ಗುರು ಗಡಗಿ, ಕಂದಾಯ ನಿರೀಕ್ಷಕ ಕಿರಣ ಕಮ್ಮಾರ, ಎ.ಎಸ್.ಐ. ರೇಣುಕಾ ಹಾಘೂ ಮಾರುಕಟ್ಟೆ ಹೊರಗಿನ ಮೀನು ವ್ಯಾಪಾರಸ್ಥರು ಉಪಸ್ಥಿತರಿದ್ದರು.