ಸಾರಾಂಶ
ಬಸವಕಲ್ಯಾಣ : ಬಸವಕಲ್ಯಾಣ ನಗರ ಸಭೆಯಲ್ಲಿ ಕಳೆದ 2-3 ವರ್ಷಗಳಿಂದ ಅಲ್ಲಿಯ ಆಡಳಿತ ಸಂಪೂರ್ಣ ಕುಸಿದು ಬಿದ್ದಿದ್ದು, ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಸುಮಗವಾಗಿ ಆಗುತ್ತಿಲ್ಲ. ಹೀಗಾಗಿ ಈಗ ಲೋಕಾಯುಕ್ತರು ಇಲ್ಲಿನ 8 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕಟ್ಟಡ ಪರವಾನಗಿ, ಇ-ಖಾತೆ, ಮುಟೇಷನ್ ಇವುಗಳು ಮಾಡಿಸಿಕೊಡಬೇಕಾದರೆ ವರ್ಷಗಟ್ಟಲೇ ಓಡಾಡಬೇಕು. ಆದರೂ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ ಮತ್ತು ಇಲ್ಲಿ ವ್ಯಾಪಕ ಭೃಷ್ಟಾಚಾರ ನಡೆವುದಕ್ಕೆ ಸಾಕ್ಷಿಯಾಗಿ ಬಸವಕಲ್ಯಾಣ ನಗರಸಭೆಗೆ ಲೋಕಾಯುಕ್ತರಿಗೆ ದೂರಿನ ಹಿನ್ನೆಲೆಯಲ್ಲಿ ಅಲ್ಲಿಯ ಸಿಬ್ಬಂದಿ ಮೇಲೆ ಕೇಸು ದಾಖಲಿಸಿದ್ದು, ಇದು ಇಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾದಂತಾಗಿದೆ.
ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಅಭಿವೃದ್ಧಿಗೆಂದು ಬಂದ ಅನುದಾನ, ವಿವಿಧ ಯೋಜನೆಗಳ ಅಡಿ ಬಡ ಫಲಾನುಭವಿಗಳಿಗಾಗಿ ಬಂದ ಲ್ಯಾಪ್ ಟಾಪ್ಗಳು ಸೇರಿದಂತೆ ಕೋಟ್ಯಾಂತರ ರು. ಹಗರಣ ನಡೆಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರ ತಂಡ, ತನಿಖೆ ಚುರುಕುಗೊಳಿಸಿದೆ.ನಗರ ಸಭೆಯಲ್ಲಿ 2019-20 ಹಾಗೂ 2020-21 ಸಾಲಿನಲ್ಲಿ ಕೋಟ್ಯಾಂತರ ಅನುದಾನ ದುರ್ಬಳಕೆ ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಸೈಯದ್ ನವಾಜ್ ಕಾಜ್ಮಿ 1 ಜೂನ್ 2021ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಿರುವ ಲೋಕಾಯುಕ್ತ ಪೊಲೀಸರ ತಂಡವು, ನಗರಸಭೆ ಮಾಜಿ ಅಧ್ಯಕ್ಷೆ ನಾಹೀದ್ ಸುಲ್ತಾನಾ ಅಪ್ಸರ್ ಮಿಯ್ಯ, ನಗರಸಭೆ ಹಿಂದಿನ ಪ್ರಭಾರಿ ಮೂವರು ಪೌರಾಯುಕ್ತರುಗಳು ಹಾಗೂ ಗುತ್ತಿಗೆ ನೌಕರ ಸುನೀಲ್ (ಲೆಕ್ಕಿಗ), ಸ್ಯಾನಿಟರಿ ಸೂಪರ್ವೈಸರ್ ಅಶ್ವಿನ್ ಕಾಂಬಳೆ (ಗುತ್ತಿಗೆ ನೌಕರ), ವ್ಯವಸ್ಥಾಪಕ ಜಟೆಪ್ಪಾ ಜಮಗೊಂಡ ಹಾಗೂ ದ್ವಿತೀಯ ದರ್ಜೆ ಸಹಾಯಕ ನಿಸಾರ್ ಅಹಮದ್ ವಿರುದ್ಧ ವಾಹನ ಬಾಡಿಗೆ, ಜೆಸಿಬಿ ದುರುಸ್ತಿ, ಲ್ಯಾಪಟಾಪ್ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಫ್ಐಆರ್ ದಾಖಲಾಗಿದೆ.
ಲೋಕಾಯುಕ್ತ ಎಸ್ಪಿ ಟಿ.ಉಮೇಶ ಮಾರ್ಗದರ್ಶನದಲ್ಲಿ ಬೀದರ್ನ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ, ಪಿಐಗಳಾದ ಸಂತೋಷ ರಾಠೋಡ್, ಬಾಬಾಸಾಹೇಬ್ ಪಾಟೀಲ್, ಉದ್ದಂಡೆಪ್ಪ, ಅರ್ಜುನಪ್ಪ ಸೇರಿದಂತೆ ಸಿಬ್ಬಂದಿಗಳ ತಂಡ ಇಲ್ಲಿಯ ನಗರಸಭೆಗೆ ಭೇಟಿ ನೀಡಿ ಸುದೀರ್ಘವಾಗಿ ಕಡತಗಳನ್ನು ಪರಿಶೀಲಿಸಿ, ತನಿಖೆ ಮುಂದುವರೆಸಿದೆ.ಬಸವಕಲ್ಯಾಣ ನಗರ ಸಭೆಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿದ್ದು ಮತ್ತು ಪೌರಾಯುಕ್ತರಾಗಿ ರಾಜು.ಡಿ.ಬಣಕಾರ ಬಂದ ಮೇಲೆ ಕೆಲಸಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಇನ್ನು ಇಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಇಲ್ಲಿಯ ಆಡಳಿತ ಸುಧಾರಿಸುವರೆ ಕಾದು ನೋಡಬೇಕಾಗಿದೆ.