ಮಂಗನ ಕಾಯಿಲೆ ಉಲ್ಬಣ: ಒಂದೇ ದಿನ ಮೂವರು ಬಲಿ!

| Published : Mar 05 2024, 01:31 AM IST / Updated: Mar 05 2024, 08:46 AM IST

KFD Cases

ಸಾರಾಂಶ

ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ ದಿನೇ ದಿನೆ ಹೆಚ್ಚಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸೇರಿ ಇದೀಗ ಮತ್ತೆ ಮೂವರು ವೃದ್ಧರು ಈ ಕಾಯಿಲೆಗೆ ಬಲಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ/ಬಾಳೆಹೊನ್ನೂರು

ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಆತಂಕ ದಿನೇ ದಿನೆ ಹೆಚ್ಚಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಸೇರಿ ಇದೀಗ ಮತ್ತೆ ಮೂವರು ವೃದ್ಧರು ಈ ಕಾಯಿಲೆಗೆ ಬಲಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹೆಗ್ಗೆಕೊಪ್ಪದ 80 ವರ್ಷ ಹಾಗೂ ಕಲ್ಲೂರಿನ 65 ವರ್ಷದ ವೃದ್ಧ ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

ಈ ಮೂಲಕ ಕಳೆದ ಮೂರು ತಿಂಗಳಿಂದ ಮಂಗನ ಕಾಯಿಲೆಗೆ ತಾಲೂಕಿನಲ್ಲಿ ನಾಲ್ವರು ಸೇರಿ ಜಿಲ್ಲೆಯ ಐವರು ಬಲಿಯಾದಂತಾಗಿದೆ.

ಇನ್ನು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ತಾಲೂಕಿನ ಮೇಲ್ಪಾಲ್‌ ಗ್ರಾಮದ ಬಸವ ಪೂಜಾರಿ (71) ಭಾನುವಾರ ಸಂಜೆ ಬಲಿಯಾಗಿದ್ದಾರೆ.

ಹನ್ನೆರಡು ದಿನಗಳ ಹಿಂದೆ ಇವರಿಗೆ ಜ್ವರ ಕಾಣಿಸಿಕೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಬಂದು, ಬಳಿಕ ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 

ಬಳಿಕ ಮಣಿಪಾಲದ ಕೆಎಂಸಿಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಈ ವರ್ಷ ಮಂಗನಕಾಯಿಲೆಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.