ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸೀರೆಗಳಿಗೆ ಬ್ರಾಂಡ್ ಸೃಷ್ಟಿಸುವ ಉದ್ದೇಶದಿಂದ ಫೆ.20ರಿಂದ ಮೂರು ದಿನ “ದೊಡ್ಡಬಳ್ಳಾಪುರ ಸೀರೆ ಸಂತೆ” ಕಾರ್ಯಕ್ರಮವನ್ನು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸೀರೆಗಳಿಗೆ ಬ್ರಾಂಡ್ ಸೃಷ್ಟಿಸುವ ಉದ್ದೇಶದಿಂದ ಫೆ.20ರಿಂದ ಮೂರು ದಿನ “ದೊಡ್ಡಬಳ್ಳಾಪುರ ಸೀರೆ ಸಂತೆ” ಕಾರ್ಯಕ್ರಮವನ್ನು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.

ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ರೈತರು, ನೇಕಾರರು ದೇಶದ ಎರಡು ಕಣ್ಣುಗಳು. ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಹೆಮ್ಮೆಯ ಕುಲಕಸುಬಾಗಿದೆ. ದೊಡ್ಡಬಳ್ಳಾಪುರಕ್ಕೆ ಮ್ಯಾಂಚೆಸ್ಟರ್ ಆಫ್ ಇಂಡಿಯಾ ಎಂಬ ಬಿರುದು ಅನಾದಿ ಕಾಲದಿಂದಲೂ ಇದೆ. ಆಧುನಿಕ ದೊಡ್ಡಬಳ್ಳಾಪುರದ ನಿರ್ಮಾತೃ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಜನ್ಮ ದಿನಾಚರಣೆ ಪ್ರಯುಕ್ತ ಉತ್ಸವ ಆಯೋಜನೆಗೊಳ್ಳಲಿದೆ ಎಂದರು.

ಪ್ರಸ್ತುತ ನೇಕಾರರ ಜೀವನ ಅಸ್ತವ್ಯಸ್ತವಾಗುತ್ತಿದೆ. ಬಂಡವಾಳಶಾಹಿಗಳಿಂದ ನೇಕಾರರಿಗೆ ತೊಂದರೆಯಾಗುತ್ತಿದೆ. ನಮ್ಮಲ್ಲಿ ತಯಾರಾಗುವ ಸೀರೆಗಳನ್ನು ರಾಜ್ಯದ ಅದರಲ್ಲೂ ಬೆಂಗಳೂರಿನ ಜನತಗೆ ಪರಿಚಯ ಮಾಡಿಸಬೇಕು. ಫೆ.22ರಂದು ಕೊಂಗಾಡಿಯಪ್ಪ ಜನ್ಮದಿನದ ಅಂಗವಾಗಿ ದೊಡ್ಡಬಳ್ಳಾಪುರ ಸೀರೆಗಳ ವೈಶಿಷ್ಟ್ಯಗಳ ಬಗ್ಗೆ ಪರಿಚಯ ಮಾಡುವ ಉದ್ದೇಶವಿದೆ. ನಮ್ಮದೇ ಆದ ಬ್ರಾಂಡ್ ಸೃಷ್ಟಿಸಬೇಕಿದೆ. ಮಹಿಳೆಯರಿಗೆ ಸೀರೆ ಕೇವಲ ವಸ್ತುವಲ್ಲ, ಮಹಿಳೆಯರ ಭಾವನಾತ್ಮಕ ಸಂಬಂಧ ಎಂದು ತಿಳಿಸಿದರು.

54 ಮಳಿಗೆ, ಸೆಲೆಬ್ರಿಟಿಗಳು ಭಾಗಿ:

ಕಾರ್ಯಕ್ರಮದಲ್ಲಿ ಒಟ್ಟು 54 ಸೀರೆ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಉತ್ತಮ ಸೀರೆಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ''''''''ಬಿಗ್‌ ಬಾಸ್ ಕನ್ನಡ ಸೀಸನ್ 12'''''''' ರಿಯಾಲಿಟಿ ಶೋ ವಿನ್ನರ್ ಗಿಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸೀರೆ ಸಂತೆಗೆ ಶೂನ್ಯ ಶುಲ್ಕ:

ಮಳಿಗೆಗಳಲ್ಲಿ ದೊಡ್ಡಬಳ್ಳಾಪುರದಲ್ಲೇ ನೇಯ್ದಿರುವ ಸೀರೆಗಳನ್ನು ಮಾತ್ರ ಪ್ರದರ್ಶನಕ್ಕಿಡಲು ಅವಕಾಶ ಕಲ್ಪಿಸಲಾಗಿದೆ. ಮಳಿಗೆಗಳನ್ನು ಇಡಲು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಮೂರು ದಿನ ವಿವಿಧ ಕಲಾ ತಂಡಗಳಿಂದ ಹಾಸ್ಯ, ಸಂಗೀತ, ನೃತ್ಯ, ರಸ ಮಂಜರಿ, ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮಗಳು ಸೇರಿದಂತೆ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವೇದಿಕೆಯಲ್ಲಿ ಗಿಲ್ಲಿ ನಟ, ಗಂಗಾವತಿ ಪ್ರಾಣೇಶ್, ರಘು ದೀಕ್ಷಿತ್, ಕಾಮಿಡಿ ಕಿಲಾಡಿಗಳು ಶೋ ನ ಕಲಾವಿದರು ಸೇರಿದಂತೆ ಇತರರು ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೀರೆ ಸಂತೆ ಸಮಿತಿಯ ಗೌರವಾಧ್ಯಕ್ಷ ಎಂ.ಜಿ.ಶ್ರೀನಿವಾಸ, ಅಧ್ಯಕ್ಷ ಪಿ.ಸಿ.ವೆಂಕಟೇಶ್‌, ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್, ಮುಖಂಡರಾದ ಪುಷ್ಪಶಿವಶಂಕ‌ರ್, ಡಿ.ಎಂ ಚಂದ್ರಶೇಖ‌ರ್, ಬಿ.ಸಿ.ನಾರಾಯಣಸ್ವಾಮಿ, ಬಂತಿ ವೆಂಕಟೇಶ್‌, ಸಿ.ನಾರಾಯಣಸ್ವಾಮಿ, ನಾಗೇಶ್, ಮುದ್ದಪ್ಪ, ಗೋಪಿ, ತಿಮ್ಮರಾಜು, ಜಗದೀಶ್ ಇತರರು ಉಪಸ್ಥಿತರಿದ್ದರು.

13ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಸೀರೆ ಸಂತೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿದರು. ಸಂತೆ ಸಮಿತಿಯ ಗೌರವಾಧ್ಯಕ್ಷ ಎಂ.ಜಿ.ಶ್ರೀನಿವಾಸ, ಅಧ್ಯಕ್ಷ ಪಿ.ಸಿ.ವೆಂಕಟೇಶ್‌ ಇತರರಿದ್ದರು.