ಸಾರಾಂಶ
ಉಳ್ಳಾಲ/ ಮಂಗಳೂರು : ನಿರಂತರ ಸುರಿದ ಧಾರಾಕಾರ ಮಳೆಗೆ ಶುಕ್ರವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ವರು ಬಲಿ ಆಗಿದ್ದಾರೆ. ಎರಡು ಪ್ರತ್ಯೇಕ ಭೂಕುಸಿತದಲ್ಲಿ ಮೂವರು ಮಕ್ಕಳ ಸಹಿತ ನಾಲ್ವರು ಮೃತಪಟ್ಟಿದ್ದಾರೆ. ಅರಬ್ಬಿ ಸಮುದ್ರದಲ್ಲಿ ನಾಡ ದೋಣಿ ಮಗುಚಿ ಇಬ್ಬರು, ಮೂಡುಬಿದಿರೆಯಲ್ಲಿ ಸೇತುವೆ ದಾಟುತ್ತಿದ್ದಾಗ ಒಬ್ಬರು ನೀರು ಪಾಲಾಗಿದ್ದಾರೆ.
ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ (58), ಮೊಮ್ಮಕ್ಕಳಾದ ಆರ್ಯನ್ (2.5) ಮತ್ತು ಆಯುಷ್(1) ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಮುಂಜಾನೆ ಗುಡ್ಡ ಕುಸಿದು ಕಾಂತಪ್ಪ ಪೂಜಾರಿ ಅವರ ಮನೆಗೆ ಅಪ್ಪಳಿಸಿದೆ. ಮನೆ ಸಂಪೂರ್ಣ ಕುಸಿದು ಪ್ರೇಮಾ ಅವರು ಅಲ್ಲೇ ಮೃತಪಟ್ಟಿದ್ದರು.ಎರಡು ಕಾಲು ಮುರಿದಿದ್ದ ಕಾಂತಪ್ಪ ಅವರ ಪುತ್ರ ಸೀತಾರಾಮ ಸಮೀಪದ ಮನೆಗೆ ಓಡಿ ಹೋಗಿ ವಿಷಯ ತಿಳಿಸಿದ್ದರು. ಕಾಂತಪ್ಪ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಮನೆಯಡಿ ಸಿಲುಕಿದ್ದ ಅಶ್ವಿನಿ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಲು ಆಗಲಿಲ್ಲ.
ಎನ್ಡಿಆರ್ಎಫ್, ಎಸ್ಡಿಆರ್ಪಿ, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮಳೆ ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಮನೆಯ ಸ್ಲಾಬ್ ಕುಸಿದು ಮಹಿಳೆ ಮತ್ತು ಇಬ್ಬರು ಮಕ್ಕಳ ಅರ್ಧದೇಹ ಸ್ಲಾಬ್ನೊಳಗೆ ಸಿಲುಕಿತ್ತು.
ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರಗೂ ಕಾರ್ಯಾಚರಣೆ ನಡೆಸಿ ರಕ್ಷಿಸಿದರೂ ಮಗು ಆರ್ಯನ್ ಮೃತಪಟ್ಟಿತ್ತು. ಬಳಿಕ ಆಯುಷ್ ಹಾಗೂ ಅಶ್ವಿನಿ ಅವರನ್ಜು ಹೊರತೆಗೆಯಲಾಗಿತ್ತು. ಆಸ್ಪತ್ರೆಯಲ್ಲಿ ಆಯುಷ್ ಮೃತಪಟ್ಟಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ದೇರಳಕಟ್ಟೆ ಬೆಳ್ಮ ಗ್ರಾಮದ ಕಾನೆಕೆರೆ ಎಂಬಲ್ಲಿ ಮನೆ ಮೇಲೆ ಮಣ್ಣು ಕುಸಿದು ನೌಶಾದ್-ಮಿಸ್ರಿಯಾ ದಂಪತಿಯ ದ್ವಿತೀಯ ಪುತ್ರಿ ಫಾತಿಮಾ ನಈಮಾ (10) ಮೃತಪಟ್ಟಿದ್ದಾಳೆ. ದೇರಳಕಟ್ಟೆ ಬೆಳ್ಮ ಗ್ರಾಮದ ಕಾನೆಕೆರೆಯಲ್ಲಿ ನೌಶಾದ್ ಮೀನಿನ ಕಾಯಕ ನಿರ್ವಹಿಸುತ್ತಿದ್ದು, ನಿತ್ಯ ಬೆಳಗ್ಗೆ 4ರ ಸುಮಾರಿಗೆ ಏಳುತ್ತಿದ್ದರು. ಶುಕ್ರವಾರ ರಜೆ ಮಾಡುತ್ತಿದ್ದ ಕಾರಣಕ್ಕೆ ಬೆಳಗ್ಗೆ ಎದ್ದಿರಲಿಲ್ಲ. ಬೆಳಗ್ಗೆ 4ರ ಆಸುಪಾಸಿಗೆ ಮೇಲಿನ ಗುಡ್ಡ ಮನೆ ಮೇಲೆ ಕುಸಿದ ಸಂದರ್ಭದಲ್ಲೇ ಸಮೀಪದ ನಿರ್ಮಾಣ ಹಂತದ ಮನೆ ಮೇಲೆಯೂ ಗುಡ್ಡ ಕುಸಿದಿತ್ತು.ಆ ಸದ್ದು ಕೇಳಿ ನೆರೆಮನೆಯವರು ನೌಶಾದ್ ಮನೆಗೆ ಎಚ್ಚರಿಸಲಯ ಯತ್ನಿಸಿದಾಗ ಬಾಗಿಲು ತೆರೆದಿಲ್ಲ. ಮನೆ ಹಿಂಬದಿಯಿಂದ ನೋಡಿದಾಗ ಮಲಗುವ ಕೋಣೆಯ ಭಾಗಕ್ಕೆ ಮಣ್ಣು ಕುಸಿದು ಕುಟುಂಬ ಸಿಲುಕಿರುವುದು ಕಂಡಿದೆ. ಮನೆಯೊಳಗೆ ಸ್ಥಳೀಯರು ನುಗ್ಗಿ ನೌಶಾದ್, ಮಿಸ್ರಿಯಾ ಹಾಗೂ ಸಣ್ಣ ಮಗುವನ್ನು ಹೊರತಂದಿದ್ದಾರೆ. ಆದರೆ ನಈಮಾ ಮಾತ್ರ ಮಣ್ಣಿನಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಳು.
ಇನ್ನು ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಕಟ್ಟದಡಿ ಎಂಬಲ್ಲಿರುವ ಕಿಂಡಿ ಅಣೆಕಟ್ಟು ಬಳಿ ಸಾಗುತ್ತಿದ್ದ ಗುರುಪ್ರಸಾದ್ ಭಟ್(38) ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ತೋಟಬೆಂಗ್ರೆಯ ಅಳಿವೆ ಬಾಗಲಿನಲ್ಲಿ ನಾಡದೋಣಿ ಮಗುಚಿ ಯಶವಂತ ಮತ್ತು ಕಮಲಾಕ್ಷ ನೀರು ಪಾಲಾಗಿದ್ದಾರೆ. ಈ ಮೂವರಿಗಾಗಿ ಹುಡುಕಾಟ ನಡೆದಿದೆ.