ಸಾರಾಂಶ
ತುಂಗಭದ್ರಾ ಜಲಾಶಯದ 32 ಕ್ರಸ್ಟ್ಗೇಟ್ಗಳ ಬದಲಾವಣೆ ಕಾಮಗಾರಿಗೆ ಮರು ಟೆಂಡರ್ನಲ್ಲಿ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿದ್ದು, ಈಗ ಈ ಅರ್ಜಿಗಳನ್ನು ತುಂಗಭದ್ರಾ ಮಂಡಳಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಇ-ಟೆಂಡರ್ ಯಾರಿಗೆ ಆಗಿದೆ ಎಂದು ತಿಳಿಯಲಿದೆ.
ಹೊಸಪೇಟೆ: ತುಂಗಭದ್ರಾ ಜಲಾಶಯದ 32 ಕ್ರಸ್ಟ್ಗೇಟ್ಗಳ ಬದಲಾವಣೆ ಕಾಮಗಾರಿಗೆ ಮರು ಟೆಂಡರ್ನಲ್ಲಿ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿದ್ದು, ಈಗ ಈ ಅರ್ಜಿಗಳನ್ನು ತುಂಗಭದ್ರಾ ಮಂಡಳಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇ-ಟೆಂಡರ್ನಲ್ಲಿ ಯಾರಿಗೆ ಟೆಂಡರ್ ಆಗಿದೆ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ.
ತುಂಗಭದ್ರಾ ಜಲಾಶಯದ 32 ಗೇಟ್ಗಳ ಮರು ನಿರ್ಮಾಣಕ್ಕಾಗಿ ಗುಜರಾತ ಮೂಲದ ಅನಾರ್ ಕಂಪನಿ ಮತ್ತು ಹಾರ್ಡ್ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗಳು ಅರ್ಜಿ ಸಲ್ಲಿಸಿವೆ. ಇನ್ನೊಂದೆಡೆ ತೆಲಂಗಾಣ ರಾಜ್ಯದ ಸ್ವಪ್ನಾ ಮತ್ತು ಬೆಕಂ ಕಂಪನಿಗಳು ಅರ್ಜಿ ಸಲ್ಲಿಸಿವೆ. ಈ ನಾಲ್ಕು ಕಂಪನಿಗಳು ಟೆಂಡರ್ನಲ್ಲಿ ಹಲವು ದಾಖಲೆಗಳನ್ನು ಒದಗಿಸಿವೆ. ಹಾಗಾಗಿ ಅವುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಬಳಿಕ ಈ ದಾಖಲೆಗಳನ್ನು ಸಮಿತಿ ಎದುರು ಮಂಡನೆ ಮಾಡಲಾಗುತ್ತದೆ. ಬಳಿಕವಷ್ಟೇ ಯಾರಿಗೆ ಟೆಂಡರ್ ಆಗಿದೆ ಎಂಬುದು ತಿಳಿಯಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.19ನೇ ಗೇಟ್ನ ಕುರಿತ ಮಾಹಿತಿ: ಏತನ್ಮಧ್ಯೆ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಮೇ 29ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, 19ನೇ ಕ್ರಸ್ಟ್ ಗೇಟ್ ಕಾಮಗಾರಿ ಬಗ್ಗೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್ಕೆ ರೆಡ್ಡಿ ಅವರಿಂದ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹಾಗೂ ಜಿಪಂ ಸಿಇಒ ಅಕ್ರಂ ಅಲಿ ಷಾ ಜತೆಗಿದ್ದರು.