ಸಾರಾಂಶ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 23ನೆಯ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಬುಧವಾರ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು
ಹುಬ್ಬಳ್ಳಿ: ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 23ನೆಯ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಬುಧವಾರ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
870 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಅದರಲ್ಲಿ 127 ಪೌರಕಾರ್ಮಿಕರಿಗೆ ಆದೇಶ ಪತ್ರ ತಕ್ಷಣವೇ ನೀಡಬೇಕು. ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ನೀಡಬೇಕು. ಕಾರ್ಮಿಕ ಕಾಯ್ದೆ ಅನ್ವಯ ವಿವಿಧ ವ್ಯತ್ಯಾಸದ ಬಾಕಿ ಮೊತ್ತ ನೀಡಬೇಕು. 868 ಮಹಿಳಾ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್ ತಲಾ 2500 ರಂತೆ ಒಟ್ಟು ₹21.70 ಲಕ್ಷ ಪಾವತಿಸಬೇಕು. ತುಟ್ಟಿ ಭತ್ಯೆ ₹2 ಕೋಟಿ ಪಾವತಿಸಬೇಕು. ಜುಲೈ ತಿಂಗಳಿನ 10 ದಿನಗಳ ಬಾಕಿ ವೇತನ ಪಾವತಿಸಬೇಕು ಹಾಗೂ ಇನ್ನು ಮುಂತಾದ ವಿವಿಧ ಬಾಕಿ ಮೊತ್ತ ಪಾವತಿಸಬೇಕು. ಸಂಕಷ್ಟ ಭತ್ಯೆ ಪ್ರತಿ ತಿಂಗಳು ₹2000 ಮಾಸಿಕ ವೇತನದಲ್ಲಿ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು.ಪಾಲಿಕೆ ಕಚೇರಿ ಎದುರಿನಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ದತ್ತಪ್ಪ, ಗಾಳೆಪ್ಪ ದ್ವಾಸಲಕೇರಿ, ಲಕ್ಷ್ಮೀ ಬೇತಾಪಲ್ಲಿ, ಬಸಪ್ಪ ಮಾದರ, ಗುರುಶಾಂತಪ್ಪ ಚಂದಾಪುರ, ಕನಕಪ್ಪ ಕೋಟಬಾಗಿ, ನಾಗೇಶ ಚುರಮುರಿ ಸೇರಿದಂತೆ ಹಲವರಿದ್ದರು.