ಬಿಳಿಯೂರು ಅಣೆಕಟ್ಟು ಗೇಟು ತೆರವು ಕಾರ್ಯಕ್ಕೆ ಪ್ರವಾಹ ಅಡ್ಡಿ

| Published : May 27 2025, 12:10 AM IST

ಬಿಳಿಯೂರು ಅಣೆಕಟ್ಟು ಗೇಟು ತೆರವು ಕಾರ್ಯಕ್ಕೆ ಪ್ರವಾಹ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಟ್ಟಿರುವ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರವುಗೊಳಿಸುವ ಮುನ್ನಾ ಸುರಿದ ಭಾರಿ ಮಳೆಯಿಂದಾಗಿ ಗೇಟು ತೆರವು ಕಾರ್ಯಕ್ಕೆ ಅಡೆ ತಡೆಯುಂಟಾಗಿದ್ದು, ನದಿಯಲ್ಲಿ ಉಂಟಾಗಿರುವ ನೀರಿನ ಪ್ರವಾಹದೆದುರು ಗೇಟು ತೆಗೆಯಲು ಪ್ರಯತ್ನ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಟ್ಟಿರುವ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರವುಗೊಳಿಸುವ ಮುನ್ನಾ ಸುರಿದ ಭಾರಿ ಮಳೆಯಿಂದಾಗಿ ಗೇಟು ತೆರವು ಕಾರ್ಯಕ್ಕೆ ಅಡೆ ತಡೆಯುಂಟಾಗಿದ್ದು, ನದಿಯಲ್ಲಿ ಉಂಟಾಗಿರುವ ನೀರಿನ ಪ್ರವಾಹದೆದುರು ಗೇಟು ತೆಗೆಯಲು ಪ್ರಯತ್ನ ಮುಂದುವರಿದಿದೆ. ಸಾಮಾನ್ಯವಾಗಿ ಮೇ ತಿಂಗಳಾಂತ್ಯದವರೆಗೆ ಅಣೆಕಟ್ಟಿನಲ್ಲಿ ಹಿನ್ನೀರು ಉಳಿಸಿಕೊಳ್ಳುವುದು ನಿಯಮವಾಗಿದ್ದರೂ, ಈ ಬಾರಿ ಮುಂಗಾರು ಮಾರುತ ಅವಧಿಗಿಂತ ಮೊದಲೇ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂಬ ಹವಾಮಾನ ಇಲಾಖಾ ವರದಿಯ ಆಧಾರದಲ್ಲಿ ಮೇ ೨೧ ರಿಂದಲೇ ಗೇಟು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಆ ವೇಳೆ ಚಂಡಮಾರುತದಿಂದಾಗಿ ಈ ಪರಿಸರದಾದ್ಯಂತ ಭಾರೀ ಮಳೆಯಾಗುತ್ತಿದ್ದು. ನೇತ್ರಾವತಿ ನದಿ ಮೇ ತಿಂಗಳಲ್ಲೇ ಮೈ ತುಂಬಿ ಹರಿಯುವಂತಾಗಿದೆ.

ಇದರಿಂದಾಗಿ ಪೂರ್ಣ ಪ್ರಮಾಣದ ಗೇಟು ತೆರವು ಕಾರ್ಯಾಚರಣೆ ಅಸಾಧ್ಯವಾಗಿದ್ದು, ನದಿಯಲ್ಲಿ ನೀರಿನ ಪ್ರವಾಹದ ಒತ್ತಡ ಎದುರಿಸಿ ಗೇಟು ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಮುಂದುವರೆದಿದೆ. ಗೇಟು ತೆರವು ಕಾರ್ಯಾಚರಣೆ ವಿಳಂಬವಾದಷ್ಟು ಇದೇ ತೆರನಾದ ಮಳೆ ಸುರಿದರೆ ಅಣೆಕಟ್ಟಿನ ಮೇಲ್ಭಾಗದ ಪ್ರದೇಶವಾದ ಉಪ್ಪಿನಂಗಡಿಯಂತಹ ಪ್ರದೇಶ ನೆರೆ ಬಾಧಿತವಾಗುವ ಸಾಧ್ಯತೆ ಅಧಿಕವಾಗಿದೆ. ಪ್ರಸಕ್ತ ನದಿಯಲ್ಲಿ ಬಿರುಸಿನ ಮಳೆಗಾಲದಲ್ಲಿ ನದಿಯ ನೀರಿನ ಹರಿಯುವಿಕೆ ಇದ್ದಂತೆ ನೀರಿನ ಹರಿಯುವಿಕೆ ಇದ್ದು, ನದಿ ನೀರಿನಲ್ಲಿ ಕಾಡಿನಿಂದ ಭಾರೀ ಪ್ರಮಾಣದ ಕಸ ಕಡ್ಡಿಗಳು ಮರದ ದಿಮ್ಮಿಗಳು ನೆರೆ ನೀರಿನಲ್ಲಿ ಕೊಚ್ಚಿ ಬರತೊಡಗಿದೆ. ಇದೆಲ್ಲವೂ ಬಿಳಿಯೂರು ಅಣೆಕಟ್ಟಿನ ಗೇಟುಗಳಲ್ಲಿ ಸಿಲುಕಿಕೊಂಡಿದ್ದು, ಗೇಟು ತೆರವು ಕಾರ್ಯಾಚರಣೆಗೆ ತಡೆಯೊಡ್ದಬಹುದೆಂಬ ಭೀತಿ ಕಾಡುತ್ತಿದೆ.

..............................೪೨ ಗೇಟುಗಳ ಪೈಕಿ ೧೫ ಗೇಟುಗಳನ್ನು ತೆರವು ಪ್ರಕ್ರಿಯೆ ನಡೆದಿದ್ದು, ಇದರ ಪೈಕಿ ೯ ಗೇಟುಗಳನ್ನು ಪೂರ್ಣವಾಗಿ ತೆರವು ಮಾಡಲಾಗಿದೆ. ಉಳಿದ ಆರು ಗೇಟುಗಳ ಪೂರ್ಣ ತೆರವಿಗೆ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರದ ಒಳಗಾಗಿ ಅದು ಪೂರ್ಣಗೊಳ್ಳಬಹುದಾಗಿದೆ. ಮಿಕ್ಕಿ ಉಳಿದ ಗೇಟುಗಳನ್ನು ನದಿಯ ನೀರಿನ ಪ್ರವಾಹದ ವೇಗ ಕಡಿಮೆಯಾದಾಕ್ಷಣ ತೆರವುಗೊಳಿಸಲು ಪ್ರಯತ್ನಿಸಲಾಗುವುದು.

-ಶಿವಪ್ರಸನ್ನ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ.