ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಮೂಲ ಜಾನಪದ ಕಲೆ, ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿವಿಧ ಮಜಲುಗಳಾದ ಕರಡಿ ಮೇಳ, ಹಂತಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹೆಜ್ಜೆ ಮೇಳಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ಸಹಕಾರ ಕುರಿ ಮಹಾಮಂಡಳದ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.ಪಟ್ಟಣದ ಲೋಕೇಶ್ವರ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಸಹಯೋಗದಲ್ಲಿ ಜಾನಪದ ಸಾಂಸ್ಕೃತಿಕ ಕಲಾಮೇಳದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಾಂಸ್ಕೃತಿಗೆ ಮಾರುಹೋಗಿ ದೇಶ ಸಂಸ್ಕೃತಿ ಧಿಕ್ಕರಿಸುತ್ತಿದ್ದಾರೆ. ಅವರಲ್ಲಿ ಜನಪದ ಸಾಂಸ್ಕೃತಿಯ ಮೂಲಕ ಮಾನವೀಯ ಮೌಲ್ಯ ಬೆಳೆಸಬೇಕಿದೆ ಎಂದರು.
ಉದ್ಯಮಿದಾರ ಎಂ.ಎಂ. ವಿರಕ್ತಮಠ ಮಾತನಾಡಿ, ಬೀಸುವ ಕಲ್ಲಿನ ಪದ, ಲಾಲಿ ಹಾಡು, ಜೋಗತಿ ನೃತ್ಯ, ವೀರಗಾಸೆ, ಗೊರವರ ಕುಣಿತದಂತಹ ಜಾನಪದ ಕಲೆಗಳನ್ನು ನಾವು ಉಳಿಸಿ-ಬೆಳಿಸುವ ಮೂಲಕ ಗಟ್ಟಿಗೊಳಿಸಬೇಕು. ಈ ನಿಟ್ಟಿನಲ್ಲಿ ಕೃಷ್ಣಾ ಭಜಂತ್ರಿ ಜಾನಪದ ಕಲಾವಿದರಿಗೆ, ಕಲಾ ರಸಿಕರಿಗೆ ಉತ್ಸವ, ಕಾರ್ಯಾಗಾರ, ಮೇಳಗಳನ್ನು ಹಮ್ಮಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.ವಾಯು ಪುತ್ರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲೋಕಣ್ಣ ಕತ್ತಿ ಮಾತನಾಡಿ, ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾನಪದದ ವಿವಿಧ ಪ್ರಕಾರಗಳು ಜಗತ್ತಿನ ಯಾವುದೇ ದೇಶದಲ್ಲಿ ಕಾಣಸಿಗುವುದಿಲ್ಲ, ಜಾನಪದ ಕಲೆ ಜಾಗತೀಕರಣವಾಗಿದ್ದು ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತೇವೆ ಎಂದು ಹೇಳಿದರು.
ವಿವಿಧ ಕಲಾ ತಂಡಗಳಿಂದ ಸಹನಾಯಿವಾದ, ಭಕ್ತಿಗಾಯನ, ಸೋಬಾನಪದ, ಭಾವಗೀತೆ, ತತ್ವಪದ, ಶಿವಭಜನಾಪದ, ಲಂಬಾಣಿ ನೃತ್ಯ, ಭಜನಾ ಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ, ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ, ಮುಗಳಖೋಡದ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ವೀರಶೈವ ಸಮಾಜದ ಮುಖಂಡ ವಿ.ಎಂ. ತೆಗ್ಗಿ, ಲೋಕೇಶ್ವರ ದೇವಸ್ಥಾನ ಅಧ್ಯಕ್ಷ ಪ್ರಕಾಶ ಚುಳಕಿ, ಗುತ್ತಿಗೆದಾರ ಮಹೇಶ ಹುಗ್ಗಿ, ಕಸಾಪ ವಲಯ ಗೌರವ ಕಾರ್ಯದರ್ಶಿ ಪ್ರವೀಣ ಗಂಗಣ್ಣವರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸಯ್ಯ ಕಡಕೋಳಮಠ, ಗುಣಾಕರ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಹಾಗೂ ಕಲಾವಿದ ಕೃಷ್ಣಾ ಭಜಂತ್ರಿ, ನೂಲಿಚಂದಯ್ಯ ಕೊರಂ ಭಜಂತ್ರಿ ಸಮಾಜದ ಅಧ್ಯಕ್ಷ ಸಾಬಣ್ಣ ಭಜಂತ್ರಿ, ಸೈದುಸಾಬ ನದಾಫ್, ಸುರೇಶ ಬನೋಜಿ, ಕಲಾವಿದ ದುಂಡಪ್ಪ ಪತ್ತಾರ, ಸುರೇಶ ಲಮಾಣಿ, ಡಾ.ಲೋಕಣ್ಣ ಭಜಂತ್ರಿ, ಕೆ.ಪಿ. ಯಾದವಾಡ ಇತರರು ಇದ್ದರು.