ಕನ್ನಡಪ್ರಭ ವಾರ್ತೆ ಸೊರಬ

ಜನಪದ ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದನ್ನು ಬಿಟ್ಟು ಅವರ ಅಭಿಜಾತ ಕಲೆಗೆ ಪ್ರೋತ್ಸಾಹಿಸುವ ಗುಣ ನಮ್ಮದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.

ತಾಲೂಕಿನ ಗುಂಡಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದ ತಾಲೂಕು ಕರ್ನಾಟಕ ಜಾನಪದ ಪರಿಷತ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ವಿಫುಲ ಜನಪದ ಕಲೆಯ ಕಲೋಪಾಸಕರಿದ್ದು ಅಂತಹ ಕಲೆ ಮತ್ತು ಕಲಾವಿದರನ್ನು ವೇದಿಕೆಗೆ ತರುವ ಕೆಲಸ ಇನ್ನಷ್ಟು ಆಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ನಶಿಸಿ ಹೋಗಲಿದ್ದ ಕೆಲವು ಜನಪದ ಪ್ರಕಾರಗಳನ್ನು ಉಳಿಸುವಂತಾಗಿದೆ. ಪ್ರತಿ ವರ್ಷ ಜಿಲ್ಲಾ ಜನಪದ ಉತ್ಸವ ನಡೆಸಿ ಅನೇಕ ಕಲಾವಿದರನ್ನು ನಾಡಿಗೆ ಪರಿಚಯಿಸಲಾಗುತ್ತಿದೆ ಎಂದರು.

ತಾಲೂಕು ಮಟ್ಟದ ಕಜಾಪ ವೇದಿಕೆ ಮೂಲಕ ತಳ ಹಂತದ ಬೆಳಕಿಗೆ ಬಾರದ ಇನ್ನೂ ಅನೇಕ ಜನಪದ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವ ಸದುದ್ದೇಶ, ಮಹದಾಸೆ ನಮ್ಮದು ಎಂದರು.


ಪದಗ್ರಹಣ ಸಮಾರಂಭದ ವೇಳೆ ತಾಲೂಕು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಜ್ವಲ್ ಚಂದ್ರಗುತ್ತಿ ಮಾತನಾಡಿ, ಈ ನೆಲೆಯ ಜನಪದ ಕಲಾ ಸಂಪತ್ತನ್ನು ರಕ್ಷಿಸಿ ಬೆಳೆಸುವ ಕಾರ್ಯ ಎಲ್ಲರದ್ದು, ಈ ಜವಾಬ್ದಾರಿ ಅರಿತು ಹಲವು ಜನಪದ ಪ್ರಕಾರಗಳನ್ನು ಪುನಃಶ್ಚೇತನಗೊಳಿಸುವ ಕಾರ್ಯಕ್ಕೆ ನಾವು ಸರ್ವವಿಧದಿಂದಲೂ ಸನ್ನದ್ಧರಾಗಿದ್ದೇವೆ. ಪ್ರಸಕ್ತ ಕನ್ನಡ ಜಾನಪದ ಪರಿಷತ್ತು ಪದಾಧಿಕಾರಿಗಳೆಲ್ಲರೂ ಜನಪದ ಕಲಾವಿದರಾಗಿದ್ದು, ನಮಗೆ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ ಎಂದರು.

ವೀಳ್ಯ ನೀಡುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು. ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹಾಗೂ ಗುಂಡಶೆಟ್ಟಿ ಗ್ರಾಮಸ್ಥರು, ತಾಲೂಕು ಹಿರಿಯ ಜನಪದ ಕಲಾವಿದರು ವೀಳ್ಯ ನೀಡಿದರು.

ಸರಳ, ಸುಂದರ ಜನಪದ ವೇದಿಕೆಯಲ್ಲಿ ಗ್ರಾಮದ ಹಿರಿಯ ಕಲಾವಿದರಾದ ಕೆ.ರುದ್ರಪ್ಪ, ಬಸವಂತಪ್ಪ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್, ಹಿರಿಯ ಕಲಾವಿದ ಹೆಚ್ಚೆ ಧರ್ಮಪ್ಪ, ಚಿಂತಕ ರಾಜಪ್ಪ ಮಾಸ್ತರ್, ಶಿಕಾರಿಪುರ ಹುಚ್ಚರಾಯಪ್ಪ, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಗ್ರಾಮದ ಪ್ರಮುಖ ಕೆ. ನಿಂಗಪ್ಪ, ಗ್ರಾಮಾಧ್ಯಕ್ಷ ಬಸವರಾಜ್, ಕರವೇ ತಾಲೂಕು ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್, ಯಶವಂತಪ್ಪ ಚಂದ್ರಗುತ್ತಿ ಮೊದಲಾದವರು ಹಾಜರಿದ್ದರು.

ಕಲಾವಿದ ಶಿವರುದ್ರಪ್ಪ ಜೋಗಿ, ಭರತ್ ಚಂದ್ರಗುತ್ತಿ, ಮೋಹನ್ ಮೊದಲಾದವರು ಜನಪದ ಗಾಯನ ನಡೆಸಿಕೊಟ್ಟರು.

ಕಲಾವಿದ ಶಂಕ್ರಪ್ಪ ಕುಮ್ಮೂರು ಗಣಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರೀಶ್ ಗುಂಡಶೆಟ್ಟಿಕೊಪ್ಪ ಸ್ವಾಗತಿಸಿ, ಮೋಹನ ಸುರಭಿ ನಿರೂಪಿಸಿ, ಡಿ.ಮಹೇಶ್ ವಂದಿಸಿದರು.