ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಮ್ಮ ಹಿರಿಯರು ಜಾನಪದ ಸಂಸ್ಕೃತಿಯಲ್ಲಿ ಬದುಕು ಕಟ್ಟಿಕೊಂಡು ನಮಗೆಲ್ಲ ಮೌಲ್ಯಯುತವಾದ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ. ಇಂದು ಜಾನಪದ ಸಂಸ್ಕೃತಿ ಮುರಿದು ಕಟ್ಟಬೇಕಾದ ಅವಶ್ಯಕತೆಯಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಅಭಿಪ್ರಾಯಪಟ್ಟರು.ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದ ನೀಲಕಂಠೇಶ್ವರ ದೇವಾಲಯದಲ್ಲಿ ಕನ್ನಡ ಜಾನಪದ ಪರಿಷತ್ ಹಿರೇಮುರಾಳ ವಲಯ ಘಟಕ ಉದ್ಘಾಟನೆ ಮಾಡಿ ಮಾತನಾಡಿ, ಸರಕಾರ ಜಾನಪದ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಮಾಡಿದೆ. ಆದರೆ ಜಾನಪದ ಸಂಸ್ಕೃತಿ ಉಳಿಯಲು ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ವಿಶ್ವವಿದ್ಯಾಲಯ ಗ್ರಾಮ ಮಟ್ಟಕ್ಕೆ ಇಳಿಯಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಜಿಲ್ಲೆಯಲ್ಲಿ ಕಜಾಪ ಕಲಾವಿದರ , ಸಾಹಿತಿಗಳ ಸೇವೆ ಮಾಡುತ್ತಾ, ಕಲಾವಿದರಿಗೆ ಮಾಶಾಸನ, ಪ್ರಶಸ್ತಿ, ಸನ್ಮಾನ ಮತ್ತು ಇಲಾಖೆಯ ನೆರವು ಒದಗಿಸುವ ಮೂಲಕ ಜಾನಪದ ಸಂಸ್ಕೃತಿ ಜೀವಂತವಾಗಿಡಲಾಗಿದೆ. ಹಿರೇಮುರಾಳ ವಲಯದಲ್ಲಿ ಇಂದಿನಿಂದ ಗಿರೀಶ ಪಾಟೀಲ ಕಲೆ ಕಲಾವಿದರ ಸೇವೆ ಮಾಡಲಿ ಎಂದರು.ವಲಯ ಅಧ್ಯಕ್ಷ ಗಿರೀಶ ಪಾಟೀಲ ಮತ್ತು ಪದಾಧಿಕಾರಿಗಳಿಗೆ ಪದಪತ್ರವನ್ನು ಹಿರಿಯರಾದ ಪ್ರಸನ್ನಕುಮಾರ ಜಹಾಗೀರದಾರ ಪ್ರದಾನ ಮಾಡಿದರು. ರಾಮನಗರ ಜಿಲ್ಲಾ ಕಜಾಪ ಅಧ್ಯಕ್ಷ ಕೆ ಸಿ ಕಾಂತಪ್ಪ, ಬಸವನಬಾಗೇವಾಡಿ ಕ ಜಾ ಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ನಿವೃತ್ತ ಉಪನ್ಯಾಸಕ ಕಾಶಿನಾಥ ನಾಗರಬೆಟ್ಟ, ಶಿಕ್ಷಕ ಎಂ ಬಿ ಗುಡಗುಂಟಿ ಪಿಕೆಪಿಎಸ್ ಅಧ್ಯಕ್ಷ ಬಿ ಬಿ ಭೋವಿ ಮಾತನಾಡಿದರು. ಕ ಜಾ ಪ ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎಂ ಆರ್ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯರಾದ ಅಡಿವೆಪ್ಪಗೌಡ ನಾಡಗೌಡ, ರಮೇಶ ಜೋಷಿ, ಬಸವರಾಜ ಬಾಗೇವಾಡಿ, ಆದಪ್ಪ ರಾಮೋಡಗಿ, ಪರಶುರಾಮ ಚಲವಾದಿ, ಬಸವಂತ್ರಾಯ ನಾಗರತ್ತಿ, ಹೊನ್ನಪ್ಪ ವಾಲಿಕಾರ, ನಾಗಪ್ಪ ಮುಳವಾಡ ಉಪಸ್ಥಿತರಿದ್ದರು.ಕ ಜಾ ಪ ವಲಯ ನೂತನ ಅಧ್ಯಕ್ಷ ಗಿರೀಶ ಪಾಟೀಲ ಸ್ವಾಗತಿಸಿದರು. ಕಜಾಪ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಒಣರೊಟ್ಟಿ ಮತ್ತು ಸರಸ್ವತಿ ವಡವಡಗಿ ನಿರೂಪಿಸಿದರು. ಎಚ್ ಎನ್ ಭೋವಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಜನೆ, ಡೊಳ್ಳಿನಪದ, ಸೋಬಾನಪದ ಸೇರಿದಂತೆ ಕಲಾ ಪ್ರದರ್ಶನ ನಡೆಯಿತು.