ಕನ್ನಡಪ್ರಭ ವಾರ್ತೆ ಹಳೇಬೀಡು
ಜಾನಪದದಿಂದ ಹುಟ್ಟಿಕೊಂಡಂತಹ ಸಾಹಿತ್ಯ ಇಂದು ಎಂಟು ಜ್ಞಾನಪೀಠ ಪ್ರಶಸ್ತಿ ತಂದು ಕೊಡುವಷ್ಟರ ಮಟ್ಟಿಗೆ ಬೆಳೆದಿರುವುದು ಕನ್ನಡಿಗರ ಹೆಮ್ಮೆಯಾಗಿದೆ ಎಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಹೊಸಳ್ಳಿ ಉಮೇಶ್ ತಿಳಿಸಿದ್ದಾರೆ.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸ ಕೋಶ ಹಾಗೂ ಕನ್ನಡ ವಿಭಾಗದಿಂದ ಸಹಯೋಗದೊಂದಿಗೆ ನಡೆದಂತಹ ಸಾಹಿತ್ಯ ಮತ್ತು ಯುವ ಜನತೆ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತ ಅನಕ್ಷರಸ್ಥರಿಂದ ಪ್ರಾರಂಭವಾದಂತ ಸಾಹಿತ್ಯ ಇಂದು ಅಕ್ಷರಸ್ಥ ಜ್ಞಾನವಂತ, ಬುದ್ಧಿವಂತರ, ವಿಚಾರಶೀಲರ, ತತ್ವಜ್ಞಾನಿಗಳ, ಸಾಹಿತಿಗಳ ನಾಡಿಮಿಡಿತವಾಗಿದೆ. ಸಾಹಿತ್ಯಕ್ಕೆ ಅಂತಹ ಶಕ್ತಿಯು ಕೂಡ ಇದೆ ಎಂದು ಹೇಳಿದರು.ಸಾಹಿತ್ಯ ಎಂಬುದು ಕೇವಲ ಪುಸ್ತಕಗಳಲ್ಲಿ ಪದಕೋಶಗಳಲ್ಲಿ ಇಲ್ಲ ಅದು ನಮ್ಮ ಜೀವನದ ಹಾಸು ಹೊಕ್ಕಾದಂತಹ ಭಾಗವಾಗಿದೆ ಜೊತೆಗೆ ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವಂತಹ ಅಸ್ತ್ರವಾಗಿದೆ ಹೀಗಾಗಿ ಸಾಹಿತ್ಯವನ್ನು ಉಳಿಸುವುದು ಬೆಳೆಸುವುದು ನಮ್ಮ ಜವಾಬ್ದಾರಿ ಕೂಡ ಆಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್ ಬಿ.ಕೆ. ಮಾತನಾಡಿ, ಇಂದಿನ ಯುವಜನತೆ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದಂತಹ ಮಹನೀಯರ ಸಾಲಿನಲ್ಲಿ ಈಗಿನ ಯುವ ಸಾಹಿತಿಗಳು ನಿಲ್ಲುವಲ್ಲಿ ವಿಫಲರಾಗಿದ್ದಾರೆ. ಯುವ ಸಾಹಿತಿಗಳು ಹೆಚ್ಚು ಕ್ರಿಯಾಶೀಲರಾಗಿ ಸಾಹಿತ್ಯಗಳ ರಚನೆಗಳಿಗೆ ಮುಂದಾದರೆ ನಮ್ಮ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ತಿಳಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಅಭಿಷೇಕ್ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುವುದರ ಬದಲಾಗಿ ಸಾಹಿತ್ಯದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡರೆ ಜ್ಞಾನಾರ್ಜನೆಯ ಜೊತೆಗೆ ಬದುಕಿನ ಪಾಠ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಂಥಪಾಲಕ ಡಾ. ಮನೋಜ್ ಪ್ರಾಧ್ಯಾಪಕರಾದ ತಿಮ್ಮನಾಯಕ್, ಶಂಕರಪ್ಪ, ರಾಘವೇಂದ್ರ, ಚಂದ್ರಶೇಖರ್, ಡಾ. ಎಂ.ಸಿ ಕುಮಾರ್ ಮುಂತಾದವರು ಹಾಜರಿದ್ದರು.-----
ಫೋಟೋ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಂತಹ ಸಾಹಿತ್ಯ ಮತ್ತು ಯುವಜನತೆ ವಿಚಾರಣ ಸಂಕೀರ್ಣ ಕಾರ್ಯಕ್ರಮವನ್ನು ಸಾಹಿತಿ ಹೊಸಳ್ಳಿ ಉಮೇಶ್, ಪ್ರಾಂಶುಪಾಲ ಡಾ. ಶ್ರೀನಿವಾಸ್ ಬಿ.ಕೆ, ಎಲ್ಲಾ ಪ್ರಾಧ್ಯಾಪಕರು ಉದ್ಘಾಟಿಸಿದರು.