ಜಾನಪದ ಸಾಹಿತ್ಯ ಎಂದೆಂದಗೂ ಬತ್ತಬಾರದು: ನಿರ್ಮಲಾನಂದನಾಥ ಸ್ವಾಮೀಜಿ

| Published : Sep 26 2024, 10:35 AM IST

ಜಾನಪದ ಸಾಹಿತ್ಯ ಎಂದೆಂದಗೂ ಬತ್ತಬಾರದು: ನಿರ್ಮಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭೈರವೈಕ್ಯ ಶ್ರೀಗಳು ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ. ಈ ನೆಲದ ತಾಯಂದಿರು ಜಾನಪದ ಸಾಹಿತ್ಯದ ಬೇರು. ಜಾನಪದ ಕಲಾ ಮೇಳವನ್ನು ನಾಡಿನ ಹಲವು ಭಾಗಗಳಿಂದ ಕಲಾವಿದರು ಬಂದು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ನಮ್ಮ ಮಠ ಎಂದೆಂದಿಗೂ ಜಾನಪದ ಕಲಾವಿದರರಿಗೆ ಪ್ರೋತ್ಸಾಹ ನೀಡಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳು ಜಾನಪದ ಸಾಹಿತ್ಯ ಸಂರಕ್ಷಿಸುವ ಕೆಲಸವನ್ನು ಗಣಕಯಂತ್ರ ಕಣ್ಣು ಬಿಡುವ ಕಾಲದಲ್ಲಿಯೇ ಮಾಡಿದ್ದಾರೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಆಯೋಜಿಸಿದ್ದ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ರಾಜ್ಯ ಮಟ್ಟದ ಜಾನಪದ ಕಲಾ ಮೇಳದ ಸಮಾರೋಪದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಅಮೂಲ್ಯವಾದದ್ದು, ಶಿಷ್ಟ ಸಾಹಿತ್ಯವನ್ನು ಮೀರಿಸುವ ಜಾನಪದ ಸಾಹಿತ್ಯ ಎಂದೆಂದಗೂ ಬತ್ತಬಾರದು ಎಂದರು.

ಭೈರವೈಕ್ಯ ಶ್ರೀಗಳು ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಕೆಲಸ ಮಾಡಿದ್ದಾರೆ. ಈ ನೆಲದ ತಾಯಂದಿರು ಜಾನಪದ ಸಾಹಿತ್ಯದ ಬೇರು. ಜಾನಪದ ಕಲಾ ಮೇಳವನ್ನು ನಾಡಿನ ಹಲವು ಭಾಗಗಳಿಂದ ಕಲಾವಿದರು ಬಂದು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ನಮ್ಮ ಮಠ ಎಂದೆಂದಿಗೂ ಜಾನಪದ ಕಲಾವಿದರರಿಗೆ ಪ್ರೋತ್ಸಾಹ ನೀಡಲಿದೆ ಎಂದರು.

ಭಾರತ ರೈತರ ದೇಶ. ಶೇ.70ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರೈತರ ಬದುಕು ಹಸನಾಗಿಸಲು ಹೆಚ್ಚು ಕೆಲಸ ಮಾಡಲಿ. ಮಾಯಸಂದ್ರ ಗ್ರಾಮದಲ್ಲಿ ಈ ವರ್ಷದಿಂದ ಕೃಷಿ ವಿಜ್ಞಾನ ಕಾಲೇಜು ಆರಂಭವಾಗಿದೆ. ಕಾಲೇಜು ಸ್ಥಾಪನೆಗೆ ಚಲುವರಾಯಸ್ವಾಮಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಜಾನಪದ ಕಲಾವಿದರೊಂದಿಗೆ ಶ್ರೀಮಠ ಅವಿನಾವ ಸಂಬಂಧ ಹೊಂದಿದೆ. ಪ್ರತಿ ವರ್ಷ ನಡೆಯುವ ಜಾನಪದ ಕಲಾ ಮೇಳಕ್ಕೆ ಯಾವುದೇ ಆಹ್ವಾನ ಪತ್ರಿಕೆ ನೀಡದಿದ್ದರೂ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಜನಪದ ಕಲಾವಿದರು ಶ್ರೀ ಮಠಕ್ಕೆ ಬಂದು ತಮ್ಮ ತವರಿಗೆ ಬಂದಷ್ಠೇ ಖುಷಿಯಿಂದ ಹಾಡಿ ನಲಿದು ಭೈರವನ ಕ್ಷೇತ್ರದಲ್ಲಿ ಹೋಗುತ್ತಾರೆ ಎಂದರು.

ಗುರು ಸಂಸ್ಮರಣೋತ್ಸವ:

ವೇದಿಕೆಯಲ್ಲಿ ಶ್ರೀಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಗೆ ಶ್ರೀಗಳು ಮತ್ತು ಗಣ್ಯರು ಪುಷ್ಪಾರ್ಚನೆ ಮಾಡಿ ಮಹಾ ಮಂಗಳಾರತಿ ಮಾಡುವ ಮೂಲಕ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸ ಹಾಗೂ ಶ್ರೀ ಗುರು ಸಂಸ್ಮರಣೋತ್ಸವನ್ನು ನೆರೆವೇರಿಸಲಾಯಿತು.

ವೇದಿಕೆಯಲ್ಲಿ ಜಾನಪದ ಕಲಾವಿದರಿಗೆ ಶ್ರೀಮಠದಿಂದ ವಸ್ತ್ರ, ಬಹುಮಾನ ಪಡೆದ ಕಲಾತಂಡಗಳಿಗೆ ಬಹುಮಾನವನ್ನು ಶ್ರೀಗಳು ವಿತರಿಸಿದರು. ಜಾನಪದ ಕಲಾವಿದರಿಂದ ಜಾನಪದ ಕಲಾ ಪ್ರದರ್ಶನ ನಡೆಯಿತು.ಜಾನಪದ ಕಲಾ ಮೇಳಕ್ಕೆ ತೆರೆ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ರಾಜ್ಯ ಮಟ್ಟದ 45ನೇ ಕಾಲಭೈರವೇಶ್ವರ ಜಾನಪದ ಕಲಾ ಮೇಳಕ್ಕೆ ಬುಧವಾರ ಸಂಜೆ ತೆರೆಬಿದ್ದಿತು.

ಜಾನಪದ ಮೇಳಕ್ಕೆ ರಾಜ್ಯದ ನಾನಾ ಮೂಲೆಗಳಿಂದ 6100 ಕಲಾವಿದರು, 378 ಕಲಾ ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಜಾನಪದ ಜಾತ್ರೆಯಲ್ಲಿ ಎಲ್ಲಿ ನೋಡಿದರಲ್ಲಿ ಕಲಾ ಪ್ರದರ್ಶನ ಮೇಳೈಸಿತು. ಕಲಾವಿದರ ದಂಡೇ ಬೀಡು ಬಿಟ್ಟು, ನಮ್ಮ ಪೂರ್ವಜ್ಜರ ಕಲೆಯನ್ನು ಪ್ರದರ್ಶನ ಮಾಡಿದರು.