ಸಾರಾಂಶ
- ಜಾನಪದ ಸಾಹಿತಿಗಳ ಬದುಕು ಬರಹ ವಿಚಾರ ಸಂಕಿರಣ । ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ
ಕನ್ನಡಪ್ರಭ ವಾರ್ತೆ, ತರೀಕೆರೆ250ಕ್ಕೂ ಹೆಚ್ಚು ಜಾನಪದ ಕಲೆಗಳನ್ನು ರಾಜ್ಯಾದ್ಯಂತ ಉಳಿಸಿ ಬೆಳೆಸಲು ನಮ್ಮ ಜಾನಪದ ಲೋಕ ಶ್ರಮಿಸುತ್ತಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದರು.ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜೀಲ್ಲಾ ಘಟಕ ಮತ್ತು ತರೀಕೆರೆ ತಾಲೂಕು ಆಶ್ರಯದಲ್ಲಿ ತ್ಯಾಗದಬಾಗಿ ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಸಾಹಿತಿಗಳ ಬದುಕು ಬರಹ ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಘಟಕ ಸ್ಥಾಪಿಸಿ ಪ್ರತಿ ತಿಂಗಳು ಜಾನಪದ ಸಮ್ಮೇಳನ, ಜನಪದ ಕಲೆಗಳ ತರಬೇತಿ ಕಾರ್ಯಾಗಾರ, ಜಾನಪದ ಗೋಷ್ಠಿ, ಗೀತ ಗಾಯನ ಸ್ಪರ್ಧೆ, ಭಜನಾ ಸ್ಪರ್ಧೆ ಹೀಗೆ ಹಲವಾರು ವಿವಿಧ ಕಾರ್ಯಕ್ರಮವನ್ನು ಸಕ್ರಿಯವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರ ಮೂಲ ಉದ್ದೇಶ ನಮ್ಮ ಜಾನಪದರು ಕಟ್ಟಿ ಬೆಳೆಸಿದ ಜನಪದ ಸಂಸ್ಕೃತಿ, ಕಲೆ ಸಾಹಿತ್ಯ, ಸಂಗೀತ, ಗಾದೆ ಒಗಟು, ಡೊಳ್ಳು ಕುಣಿತ, ಪಟ ಕುಣಿತ, ಸುಗ್ಗಿ ಕುಣಿತ, ವೀರಗಾಸೆ, ಅಂಟಿಕೆ ಪಿಂಟಿಕೆ, ಕಂಸಾಳೆ, ಕೋಲಾಟ, ಜಾನಪದ ನೃತ್ಯ, ಗೀಗಿ ಪದ, ತತ್ವಪದ, ಹಸೆ ಪದ, ಸೋಬಾನೆ ಪದ, ಪೂಜಾ ಕುಣಿತ, ಕೊಳಲು ನುಡಿಸುವಿಕೆ, ರಂಗೋಲಿ ಬಿಡಿಸುವುದು, ಹಳ್ಳಿ ನಿಶಾನೆ, ಹೀಗೆ ಸುಮಾರು 250ಕ್ಕೂ ಹೆಚ್ಚು ಜಾನಪದ ಕಲೆಗಳನ್ನು ರಾಜ್ಯಾದ್ಯಂತ ಉಳಿಸಿ ಬೆಳೆಸಲು ಜಾನಪದ ಲೋಕ ಶ್ರಮಿಸುತ್ತಿದೆ ಎಂದು ಹೇಳಿದರು. ಇದಕ್ಕೆಲ್ಲ ಇಂದಿನ ಯುವಜನರು, ವಿದ್ಯಾರ್ಥಿಗಳ ಪ್ರೋತ್ಸಾಹ ಅತ್ಯಗತ್ಯ. ಶಾಲಾ ಕಾಲೇಜುಗಳು ಕೂಡ ಹೆಚ್ಚು ಆಸಕ್ತಿ ವಹಿಸಿ ಪಠ್ಯಪುಸ್ತಕಗಳ ಮೂಲಕ ಜಾನಪದ ಕಲೆ ಸಾಹಿತ್ಯ ಸಂಗೀತದ ಅರಿವು ಮೂಡಿಸುತ್ತ ಅದರ ಅತ್ಯಮೂಲ್ಯ ಉಪಯೋಗವನ್ನು ಅರ್ಥಗರ್ಭಿತವಾಗಿ ತಿಳಿಸಬೇಕಿದೆ. ಆಗ ಜನಪದ ಸಾಹಿತ್ಯ ಕಲೆ ಸಂಗೀತ ಸಂಸ್ಕೃತಿ ಮುಂದಿನ ತಲೆಮಾರುಗಳಿಗೆ ಅಡೆತಡೆ ಇಲ್ಲದೆ ಮುಂದುವರಿಯುತ್ತದೆ ಎಂದು ಹೇಳಿದರು. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮಾಳೇನಳ್ಳಿ ಬಸಪ್ಪ ಮಾತನಾಡಿ ಜಾನಪದ ಕಲಾವಿದರು ಪ್ರತಿ ಕುಟುಂಬದಲ್ಲೂ ತಾವು ಕಲಿತಿರುವ ಕಲೆಗಳನ್ನು ತಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ತಿಳಿಸಿಕೊಡಬೇಕು. ಇಂದಿನ ಸರ್ಕಾರ, ಖಾಸಗಿ ಸಂಘ ಸಂಸ್ಥೆಗಳು, ಮಠ ಮಾನ್ಯಗಳು, ಜಾನಪದ ಕಲಾಪೋಷಕರು, ಜಾನಪದ ಸಂಸ್ಕೃತಿ ಕಲೆ ಸಂಗೀತ ಸಾಹಿತ್ಯಕ್ಕೆ ಹೆಚ್ಚು ಹೆಚ್ಚು ವೇದಿಕೆಗಳನ್ನು ನೀಡಿ ಪ್ರೋತ್ಸಾಹಿಸಿ, ಜೀವಮಾನವಿಡಿ ಜಾನಪದ ಕಲೆಗೆ ಶ್ರಮಿಸಿದ ಜಾನಪದ ಕಲಾವಿದರಿಗೆ ಪ್ರತಿ ತಿಂಗಳು ತಪ್ಪದೇ ಜೀವನಕ್ಕೆ ಅವಶ್ಯಕ ಮಾಸಾಶನ ನೀಡಬೇಕೆಂದು ವಿನಂತಿಸಿದರು.
ತರೀಕೆರೆ ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಾದ್ಯಂತ ಜನಪದ ಕಲಾವಿದರನ್ನು ಗುರುತಿಸಿ ಅವರ ಸೂಕ್ತ ಕಲೆ ಪ್ರದರ್ಶಿಸಲು ಅಗತ್ಯ ವೇದಿಕೆ ಕಲ್ಪಿಸಿಕೊಡಲಾಗುವುದು ಮತ್ತು ಈಗಾಗಲೇ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳಿಗೆ ಹೆಚ್ಚು ಒತ್ತನ್ನು ಗ್ರಾಪಂ, ಹೋಬಳಿ ತಾಲೂಕು ಮಟ್ಟದಲ್ಲಿ ಜಾನಪದ ಕಲೆಗಳ ತರಬೇತಿ ಶಿಬಿರ, ಜಾನಪದ ಗೋಷ್ಠಿಗಳನ್ನು, ಗೀತ ಗಾಯನ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಯುವಕ ಯುವತಿಯರಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.ನಂತರ ಜಾನಪದ ಗೀತೆಗಳು, ಲಾವಣಿ, ಗೀಗಿ ಪದ, ಕೋಲಾಟ ಪದ, ಬಜನಾ ಪದಗಳನ್ನು ಹಾಡಲಾಯಿತು. ಪರಿಷತ್ತು ಉಪಾಧ್ಯಕ್ಷ ಜಿಎಸ್ ತಿಪೇಶ್, ಚಿಕ್ಕನಲ್ಲೂರು ಜಯಣ್ಣ, ತರೀಕೆರೆ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜು, ಅಜ್ಜಂಪುರ ತಾಲೂಕು ಪರಿಷತ್ತಿನ ಗೌರವಾಧ್ಯಕ್ಷ ಮುರಳಿ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ, ನಾರಾಯಣಪುರ ರಾಜಣ್ಣ, ಜಿಲ್ಲಾ ಸಂಚಾಲಕ ಪಿ,ದೇವರಾಜು, ಗಿರೀಶ, ಸಂಚಾಲಕಿ ಗಾಯಿತ್ರಮ್ಮ, ತಿಪ್ಪೇಶ, ಮಹಾಂತೇಶ್ ನಾಗೇಂದ್ರಪ್ಪ, ಶಿವಕುಮಾರ್, ಲತಾ, ಯಶೋಧ, ಗ್ರಾಪಂ ಸದಸ್ಯ ಕುಮಾರಸ್ವಾಮಿ, ಗ್ರಾಮಸ್ಥರು ಉಪಸ್ಥಿತರಿದ್ದರು.9ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ತ್ಯಾಗದಬಾಗಿ ಗ್ರಾಮದಲ್ಲಿ ನಡೆದ ಜಾನಪದ ಸಾಹಿತಿಗಳ ಬದುಕು- ಬರಹ ವಿಚಾರ ಸಂಕಿರಣ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ -ಸಮಾರೋಪ ಸಮಾರಂಭದಲ್ಲಿ ಜಾನಪದ ಗೀತೆಗಳು, ಲಾವಣಿ, ಗೀಗಿ ಪದ, ಕೋಲಾಟ ಪದ, ಬಜನಾ ಪದಗಳನ್ನು ಹಾಡಲಾಯಿತು.