ಸಾರಾಂಶ
ಶಿರಸಿ: ಜೀವನದ ಉದ್ದಕ್ಕೂ ಧರ್ಮವನ್ನು ಅನುಸರಿಸಿ ಹೋಗುತ್ತಿರಬೇಕು. ಆಗ ಜೀವನದ ಕೊನೆಯ ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.
ಅವರು ಚಾತುರ್ಮಾಸ್ಯ ವೇಳೆ ಚಿನ್ನಾಪುರ ಸೀಮೆಯ ಶಿಷ್ಯ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.ಧರ್ಮದಲ್ಲಿ ಎಲ್ಲರಿಗೂ ನಿರಂತರ ಆಸಕ್ತಿ ಇರಬೇಕು. ಧರ್ಮವನ್ನು ಅನುಸರಿಸಲು ಎಚ್ಚರಿಕೆ ಬೇಕು. ಧರ್ಮವೇ ಪರಲೋಕದಲ್ಲಿ ಬಂಧು. ಪರಲೋಕದಲ್ಲಿ ಯಾವುದೇ ಬಂಧುಗಳು ನಮ್ಮ ಜೊತೆ ಇರುವುದಿಲ್ಲ. ಧರ್ಮವೇ ಗಟ್ಟಿಯಾದ ಪುರುಷಾರ್ಥ. ಧರ್ಮದ ಸಂಪಾದನೆಗೆ ಅತ್ಯಂತ ಮಹತ್ವ ಕೊಡಬೇಕು. ಇಹ- ಪರಗಳಲ್ಲಿ ನಮ್ಮನ್ನು ರಕ್ಷಿಸುತ್ತದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ಜೀವನದ ಕೊನೆಯ ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಲು ಸಾಧ್ಯ ಎಂದರು.
ಜೀವನದ ಕೊನೆಯ ಪರೀಕ್ಷೆಯಾದ ಮರಣವು ಸರಿಯಾಗಿ ಆಗಬೇಕಾದರೆ ಜೀವನದ ಉದ್ದಕ್ಕೂ ಧರ್ಮದ ಆಚರಣೆ ಮಾಡಿಕೊಂಡಿರಬೇಕು. ಜೀವನದ ಪರೀಕ್ಷೆಯಲ್ಲಿ ಮೊದಲಿಂದಲೂ ಪ್ರಯತ್ನ ಸರಿಯಾಗಿ ಮಾಡಬೇಕು. ಮೊದಲು ಮಾಡಿದ ಸಿದ್ಧತೆಗಳಲ್ಲೆವು ಪರೀಕ್ಷೆಯ ಹೊತ್ತಿಗೆ ಸಿದ್ಧತೆ ಕೊರತೆಯ ಕಾರಣ ಹಿಂದೆ ಮಾಡಿದ ಸಾಧನೆಗಳು ಅರ್ಧ ನಮ್ಮ ಕೈ ಬಿಟ್ಟು ಹೋಗಿ ಬಿಡುತ್ತವೆ ಎಂದರು.ಮರಣದ ಕ್ಷಣ ಬಂದಾಗ ಎಲ್ಲವೂ ದುರ್ಬಲವಾಗುತ್ತದೆ. ಹಾಗೆ ಆಗದಿರಲು ಹೆಚ್ಚಿಗೆ ಸಾಧನೆ ಮಾಡಿಕೊಂಡಿರಬೇಕು. ಶರೀರ ದುರ್ಬಲವಾದ ಸ್ಥಿತಿಯಲ್ಲಿ ಮರಣ ಬರುತ್ತದೆ. ಆ ಸ್ಥಿತಿಯಲ್ಲಿ ಶರೀರ ಮತ್ತು ಮನಸ್ಸು ತುಂಬ ದುರ್ಬಲವಾಗಿ ಬಿಡುತ್ತವೆ. ಹಿಂದೆ ಮಾಡಿದ ಸಾಧನೆಗಳು ಕಮ್ಮಿಯೇ ಆಗುತ್ತವೆ. ಆದರೆ ಭಗವಂತನ ಮಾತಿನಂತೆ ಭಕ್ತಿ ಮತ್ತು ಅಭ್ಯಾಸ ಬಲವನ್ನು ಜೀವನದುದ್ದಕ್ಕೂ ಮಾಡಿದರೆ ಮರಣವೆಂಬ ಪರೀಕ್ಷೆಯನ್ನು ಸರಿಯಾಗಿ ಮಾಡಲು ಸಾಧ್ಯ ಎಂದರು.ಬದುಕಿನ ಗಂಭೀರ ಸಮಸ್ಯೆಗಳನ್ನು ಒಬ್ಬನೇ ಎದುರಿಸುವುದು ಸಹಜ. ಒಬ್ಬನೇ ಎದುರಿಸುವುದನ್ನು ಕಲಿಯಬೇಕು. ಆದರೆ ದೇವರು ಮಾತ್ರ ನಮ್ಮ ಜೊತೆಯಲ್ಲಿ ಇರುತ್ತಾನೆ. ಅವನೇ ನಮಗೆ ಆಧಾರ. ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ದೇವರನ್ನು ಇಟ್ಟುಕೊಂಡು ಸಂಕಷ್ಟಗಳನ್ನು ಒಬ್ಬನೇ ಎದುರಿಸಬೇಕು. ಇದನ್ನು ಅಭ್ಯಾಸ ಮಾಡಬೇಕು. ಜೀವನದ ಉದ್ದಕ್ಕೂ ಆಗಾಗ ಬರುವ ಉತ್ಕಟ ಕ್ಷಣಗಳನ್ನು ಎದುರಿಸಿ ಎದುರಿಸಿ ಅಭ್ಯಾಸ ಮಾಡುತ್ತಾ ದೇವರ ಭಕ್ತಿಯಿಂದ ಶಕ್ತಿ ಬರುತ್ತದೆ. ಆಮೇಲೆ ಮಾಡುತ್ತೇನೆ ಎಂದುಕೊಂಡು ಬಿಡಬಾರದು. ಮೊದಲಿಂದಲೇ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.ಚಿನ್ನಾಪುರ ಸೀಮೆಯ ಎರಡು ಭಾಗದ ಶಿಷ್ಯರು ಗಾಯತ್ರಿ ಜಪ, ಮಾತೆಯರು ಕುಂಕುಮಾರ್ಚನೆ ನಡೆಸಿದರು. ಪ್ರಮುಖರಾದ ನಾರಾಯಣ ಹೆಗಡೆ, ದತ್ತಾತ್ರೇಯ ಹೆಗಡೆ, ಸುಬ್ರಹ್ಮಣ್ಯ ಭಟ್, ರವೀಂದ್ರ ಕೊಮಾರ ಇತರರು ಇದ್ದರು.