ಸುರಕ್ಷತಾ ನಿಯಮ ಕಡ್ಡಾಯವಾಗಿ ಅನುಸರಿಸಿ

| Published : May 29 2025, 12:00 AM IST / Updated: May 29 2025, 12:01 AM IST

ಸಾರಾಂಶ

ಅಪಘಾತಗಳ ತಡೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕಿದೆ.

ಅಪಘಾತ ತಡೆ ಕ್ರಮಗಳ ಕುರಿತ ಅಧಿಕಾರಿಗಳು, ಗಣಿ ಕಂಪನಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ

ಜೂ.೧೦ರ ಒಳಗೆ ಎಲ್ಲಾ ಅದಿರು ಸಾಗಣೆ ಲಾರಿಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕು

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲಿಯೇ ಮೇ ೨೦೨೩ರಿಂದ ಮೇ ೨೦೨೫ರ ಅವಧಿಯಲ್ಲಿ ೪೮೬ ಅಪಘಾತಗಳಾಗಿವೆ. ಈ ಅಪಘಾತಗಳಲ್ಲಿ ೪೦ ಜನರು ಮೃತಪಟ್ಟಿದ್ದಾರೆ. ಈ ಅಪಘಾತಗಳಲ್ಲಿ ಶೇ. ೮೦ರಷ್ಟು ಗಣಿ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿವೆ. ಅಪಘಾತಗಳ ತಡೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲೇಬೇಕಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲ್ಲೂಕಿನಲ್ಲಿ ಅಪಘಾತಗಳನ್ನು ತಡೆಗಟ್ಟುವುದು ಮತ್ತು ಜನರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ನಡೆದ ವಿವಿಧ ಇಲಾಖೆ ಅಧಿಕಾರಿಗಳು, ಟ್ರಾನ್ಸಪೋರ್ಟರ್‌ಗಳು ಹಾಗೂ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಪಘಾತಗಳಿಗೆ ಕಾರಣವಾಗುವ ಅಂಶಗಳನ್ನು ಅವರು ಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಡಿವೈಎಸ್‌ಪಿ ಪ್ರಸಾದ್ ಗೋಖಲೆ ಮಾತನಾಡಿ, ಈ ಭಾಗದಲ್ಲಿ ಅದಿರು ಸಾಗಣೆ ಲಾರಿಗಳಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಹಲವು ಬಾರಿ ಲಾರಿ ಚಾಲಕರು ರಾಕ್ಷಸರು ಬಂದ ಹಾಗೆ ಬರುತ್ತಿರುತ್ತಾರೆ. ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೂ, ಅವುಗಳನ್ನು ಪಕ್ಕಕ್ಕೆ ಸರಿಸಿ ಹೋಗುತ್ತಿರುತ್ತಾರೆ. ತೋರಣಗಲ್ಲಿನ ನಮ್ಮ ಕಚೇರಿ ಮುಂದೆ ಇರುವ ಬ್ಯಾರಿಕೇಡನ್ನು ಸರಿಸಿ ಹೋಗಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಟಿಒ ಶ್ರೀನಿವಾಸ್ ಗಿರಿ ಮಾತನಾಡಿ, ಸ್ಪೀಡ್ ಗವರ್ನರ್ ಇದ್ದರೇನೆ ಫಿಟ್‌ನೆಸ್ ಸರ್ಟಿಫಿಕೇಟ್ ಕೊಡುವುದು. ಎಲ್ಲಾ ವಾಹನಗಳಿಗೂ ಸ್ಪೀಡ್ ಗವರ್ನರ್ ಇವೆ. ಆದರೆ, ಸರ್ಟಿಫಿಕೇಟ್ ನೀಡಿದ ನಂತರ ಅವುಗಳನ್ನು ಟ್ಯಾಂಪರ್ ಮಾಡುತ್ತಾರೆ ಎಂದು ದೂರಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಈರಣ್ಣ ಮತ್ತಿತರ ಪದಾಧಿಕಾರಿಗಳು ಮಾತನಾಡಿ, ಸಂಘದ ವತಿಯಿಂದ ಚಾಲಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಾಹನ ಮತ್ತು ಚಾಲಕರ ದಾಖಲೆಗಳನ್ನು ಪರಿಶೀಲಿಸಿ, ಸರಿಯಾಗಿದ್ದರೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕೊಡಿ. ಸ್ಪೀಡ್ ಗವರ್ನರ್ ಅಳವಡಿಸಲು ಒಂದು ತಿಂಗಳು ಸಮಯಾವಕಾಶ ನೀಡಬೇಕು. ಅನ್‌ಲೋಡಿಂಗ್ ಪಾಯಿಂಟ್ ತಲುಪಲು ಇರುವ ಸಮಯವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಜನಸಂಗ್ರಾಮ ಪರಿಷತ್ ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಟಿ.ಎಂ. ಶಿವಕುಮಾರ ಹಾಗೂ ಮಂಜುನಾಥ್, ಗಣಿ ಲಾರಿ ಸಂಚರಿಸುವ ರಸ್ತೆಗಳಲ್ಲಿ ಎಐ ತಂತ್ರಜ್ಞಾನದ ಸಿಸಿ ಕ್ಯಾಮೆರಾ ಅಳವಡಿಸಬೇಕು. ಅಪಘಾತಗಳಲ್ಲಿ ಜನತೆ ಮೃತಪಟ್ಟರೆ, ಗಣಿ ಕಂಪನಿಗಳವರಿಂದ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ವೇಗದ ಮಿತಿಯನ್ನು ಗಂಟೆಗೆ ೫೦ ಕಿಮೀಗೆ ನಿಗದಿಪಡಿಸುವುದು. ಅರಣ್ಯಾಧಿಕಾರಿಗಳು ಪ್ರತಿದಿನ ಬೆಳಗ್ಗೆ ೬ ಗಂಟೆಯಿಂದಲೇ ಪರ್ಮಿಟ್‌ ನೀಡುವುದು, ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ಹಾಕಿಸುವುದು, ಗಣಿ ಕಂಪನಿಗಳು ಅಧಿಕಾರಿಗಳು ವಾಹನಗಳ ಹಾಗೂ ಚಾಲಕರ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿದ್ದರೆ ಮಾತ್ರ ಅದಿರು ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು.

ದಾಖಲೆ ಪರಿಶೀಲಿಸದೆ, ಅದಿರು ಸಾಗಾಣಿಕೆಗೆ ಅವಕಾಶ ನೀಡಿ ಅಪಘಾತ ಸಂಭವಿಸಿದಲ್ಲಿ ಸಂಬಂಧಿಸಿದ ಗಣಿ ಕಂಪನಿಯ ಅಧಿಕಾರಿಗಳ ಮೇಲೆಯೂ ಕೇಸನ್ನು ದಾಖಲಿಸುವುದು. ಚಾಲಕರಿಗೆ ಜಾಗೃತಿ ಸಭೆಗಳನ್ನು ಏರ್ಪಡಿಸಿ ತಿಳುವಳಿಕೆ ಮೂಡಿಸುವುದು ಮುಂತಾದ ನಿರ್ಧಾರ ಕೈಗೊಳ್ಳಲಾಯಿತು. ಗಣಿ ಕಂಪನಿಗಳು ಆ್ಯಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ತೀರ್ಮಾನಿಸಲಾಯಿತು. ಈ ನಿರ್ಧಾರಗಳಿಗೆ ಸಭೆಯಲ್ಲಿ ಉಪಸ್ಥಿತರಿದ್ದವರು ಒಪ್ಪಿಗೆ ಸೂಚಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ದ್ವಿತಿಯಾ, ಅಧಿಕಾರಿ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ದಾದಾ ಖಲಂದರ್, ವಿವಿಧ ಕಂಪನಿಗಳ ಅಧಿಕಾರಿಗಳು, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.