ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಸಂಡೂರು: ತಾಲೂಕಿನ ಜೋಗ ಗ್ರಾಮದಲ್ಲಿ ಬುಧವಾರ ಗುರು ಪೂರ್ಣಿಮೆಯ ಪ್ರಯುಕ್ತ ಗ್ರಾಮಸ್ಥರಿಂದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ಶಿಕ್ಷಕರನ್ನು ಸನ್ಮಾನಿಸಿ, ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ ವಿಕಸನಗೊಳಿಸಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳಲ್ಲಿನ ಅಜ್ಞಾನವನ್ನು ಹೋಗಲಾಡಿಸಿ ಬದುಕಿನ ಮೌಲ್ಯಗಳನ್ನು ಕಲಿಸಲು ಶ್ರಮಿಸುತ್ತಾರೆ. ಗುರುಗಳು ಬೋಧಿಸುವ ಶಿಸ್ತು, ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ಆದರ್ಶ ವ್ಯಕ್ತಿಗಳಾಗಲು ಸಾಧ್ಯ. ಆಷಾಢ ಮಾಸದ ಹುಣ್ಣಿಮೆಯಂದು ಬರುವ ಈ ಹಬ್ಬವು ಮಹರ್ಷಿ ವೇದ ವ್ಯಾಸರ ಜನ್ಮದಿನ ಹಾಗೂ ಆದಿಯೋಗಿಯಾದ ಶಿವನು ಮೊದಲ ಆದಿ ಗುರು ಜ್ಞಾನ ಬೋಧನೆ ಆರಂಭಿಸಿದ ದಿನವೆಂದು ನಂಬಲಾಗಿದೆ ಎಂದು ತಿಳಿಸಿದರು.ಮುಖ್ಯಶಿಕ್ಷಕ ಭೈರಪ್ಪನವರು ಶಿಕ್ಷಣದ ಅಭಿವೃದ್ಧಿಗೆ ಪಾಲಕರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಶಿಕ್ಷಕರಾದ ಭೈರಲಿಂಗಪ್ಪ, ಶಶಿಧರ, ಪ್ರತಿಭಾ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಹುಲುಗಪ್ಪ, ಎಸ್ಡಿಎಂಸಿ ಸದಸ್ಯರಾದ ಕೆ. ರಾಜ, ಎ. ಯಲ್ಲಪ್ಪ, ಉಮಾಪತಿ, ಗ್ರಾಮಸ್ಥರಾದ ರೇವಾಳು ಮಂಜುನಾಥ, ಹೊನ್ನರಪ್ಪ, ಶಾಂತಲಾ, ತೇಜಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ಜೋಗ ಗ್ರಾಮದಲ್ಲಿ ಬುಧವಾರ ಗುರು ಪೂರ್ಣಿಮೆಯ ಪ್ರಯುಕ್ತ ಗ್ರಾಮಸ್ಥರಿಂದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.