ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಕೂಟದಲ್ಲಿ ವಿವಿಧ ಬಗೆಯ ಸ್ವಾದಿಷ್ಟ ತಿಂಡಿ, ತಿನಿಸುಗಳು ಎಲ್ಲರ ಬಾಯಲ್ಲಿ ನೀರೂರಿಸಿದವು. ಕೂಟದಲ್ಲಿ 54 ತಿಂಡಿ, ತಿನಿಸುಗಳು ಪ್ರದರ್ಶನಕ್ಕೆ ಇದ್ದವು.

ಕನ್ನಡಪ್ರಭ ವಾರ್ತೆ ಬೀದರ್

ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತ ಇಲ್ಲಿಯ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಕೂಟದಲ್ಲಿ ವಿವಿಧ ಬಗೆಯ ಸ್ವಾದಿಷ್ಟ ತಿಂಡಿ, ತಿನಿಸುಗಳು ಎಲ್ಲರ ಬಾಯಲ್ಲಿ ನೀರೂರಿಸಿದವು. ಕೂಟದಲ್ಲಿ 54 ತಿಂಡಿ, ತಿನಿಸುಗಳು ಪ್ರದರ್ಶನಕ್ಕೆ ಇದ್ದವು.

ಲಡ್ಡು, ಪುಟಾಣಿ ಉಂಡಿ, ಶೇಂಗಾ ಉಂಡಿ, ರವೆ ಉಂಡಿ, ಕಾಯಿ ಹೋಳಿಗೆ, ಸಜ್ಜೆ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಧಪಾಟಿ, ಕುಟ್ಟಿದ ಗೋಧಿ ಹುಗ್ಗಿ, ಕಾಳುಗಳು, ಹಣ್ಣುಗಳು ಗಮನ ಸೆಳೆದವು. ವಿದ್ಯಾರ್ಥಿಗಳೇ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಮನೆಯಿಂದ ಮಾಡಿಸಿಕೊಂಡು ಬಂದದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ವಚನ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರನ್ನು ರಂಜಿಸಿದರು.

ಋಷಿಕೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ ಸಂಚಾಲಕ ಕುಶಾಲರಾವ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಪರಿಶ್ರಮ ವಹಿಸಿ ಅದನ್ನು ಸಾಕಾರ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜೈ ಗೋಪಾಲ್ ಬಟಾಮೆ ಮಾತನಾಡಿ, ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿ ಗಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಅರಿಯಬೇಕು. ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆ ಆಡಳಿತ ಮಂಡಳಿ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮಣಗೇರೆ ಮಾತನಾಡಿ, ಅರುಣೋದಯ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುತ್ತಿದೆ ಎಂದು ಹೇಳಿದರು.

ಪಟ್ಟಣ ಯೋಜನೆ ಸದಸ್ಯೆ ಶೃತಿ ಅರ್ಥಂ, ಗಜೇಂದ್ರ ಎಸ್.ಕೆ., ಶಾಲೆಯ ಆಡಳಿತಾಧಿಕಾರಿ ಸಂತೋಷ ಕುಮಾರ ಮಂಗಳೂರೆ, ಸಂಗಮೇಶ ಗಂದಗೆ, ಅಲ್ಕಾವತಿ ಹೊಸದೊಡ್ಡೆ, ನೀಲಮ್ಮ ಗಜಲೆ ಇದ್ದರು.