ಕನ್ನಡಪ್ರಭ ವಾರ್ತೆ ಕಾರವಾರ

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹಾಗೂ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರದ ವತಿಯಿಂದ ಆಹಾರ ವಹಿವಾಟುದಾರರಿಗೆ ಮೊದಲ ಹಂತದ ಒಂದು ದಿನದ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವು ಗೋಕರ್ಣದ ವೀರಶೈವ ಮಠ ಸಭಾಭವನದಲ್ಲಿ ನಡೆಯಿತು.ಗೋಕರ್ಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಎ. ಪಟಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಅಳವಡಿಸಿಕೊಳ್ಳಲು ತಿಳಿಸಿದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಿನೇಶ ನಾಯ್ಕ ಮಾತನಾಡಿ, ಆಹಾರೋದ್ಯಮಿಗಳಿಗೆ ಆಹಾರದ ಗುಣಮಟ್ಟದ ಜೊತೆ ಶುಚಿತ್ವ ಹಾಗೂ ಪರಿಸರ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಈ ತರಬೇತಿ ಕಾರ್ಯಕ್ರಮದ ಮಹತ್ವವನ್ನು ತಾಲೂಕಿನ ಎಲ್ಲ ಆಹಾರ ವಹಿವಾಟುದಾರರು ತಮ್ಮಲ್ಲಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಸಲಹೆಗಾರ ಅರುಣ ಕಾಶಿಭಟ್ಟ ಮಾತನಾಡಿ, ಆಹಾರೋದ್ಯಮವನ್ನು ಸಡೆಸಲು ಬೇಕಾದ ಮಾರ್ಗಸೂಚಿಗಳ ಬಗ್ಗೆ ಹಾಗೂ ಶುಚಿತ್ವ ಮತ್ತು ಕಲಬೆರಕೆಗಳ ಕುರಿತು ಮಾಹಿತಿ ನೀಡಿ ಈ ತರಬೇತಿ ಕಡ್ಡಾಯವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಆಹಾರೋದ್ಯಮಿಗಳು ಈ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಸೂಚಿಸಿದರು. ಆರೋಗ್ಯ ನಿರಿಕ್ಷಣಾಧಿಕಾರಿ ಮಹಾಂತೇಶ ಹೂಗಾರ ಮಾತನಾಡಿ, ಜಿಲ್ಲೆಯ ಅತಿ ಹೆಚ್ಚಿನ ಪ್ರವಾಸಿಗರ ತಾಣ ಗೋಕರ್ಣದಲ್ಲಿ ಆಹಾರೋದ್ಯಮಿಗಳು ಉತ್ತಮ ಆಹಾರ ಹಾಗೂ ಪರಿಸರ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.ಉತ್ತರ ಕನ್ನಡ ಜಿಲ್ಲಾ ಸಂಯೋಜಕ ಮನೋಜ ನಾಯಕ ಮಾತನಾಡಿದರು. ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರದ ರಾಜ್ಯಾಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ದೀಪಾ ಶಂಕರಿ, ತರಬೇತಿದಾರರು, ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರ, ಭಾರತ ಸರಕಾರ ಇವರು ಎಲ್ಲಾ ವಹಿವಾಟುದಾರರಿಗೆ ವಹಿವಾಟುಗಳ ನಿರ್ವಹಣೆ, ಸುರಕ್ಷತಾ ಕ್ರಮ, ಶುಚಿತ್ವ, ಕಲಬೆರಕೆ, ಅನಾವಶ್ಯಕ ಖರ್ಚು ನಿಯಂತ್ರಣ ಮತ್ತು ಕಡ್ಡಾಯ ಪ್ರಮಾಣ ಪತ್ರದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಗೋಕರ್ಣ ವಿಭಾಗ ಸಂಯೋಜಕ ಕೃಷ್ಣ್ಣಮೂರ್ತಿ ನಾಯಕ ಅವರನ್ನು ಸನ್ಮಾನಿಸಲಾಯಿತು.