ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಎನ್ನುವುದು ಸೇವೆ. ಈ ಮೂಲಕ ಬದಲಾವಣೆ ಮಾಡುವುದೇ ಮುಖ್ಯ ಧ್ಯೇಯವಾಗಿದೆ. ಇದನ್ನು ನೆನಪಿಸುವುದಕ್ಕಾಗಿ ಪ್ರಶಿಕ್ಷಣ ನಡೆಸಲಾಗುತ್ತಿದೆ. ಇದನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಎನ್ನುವುದು ಸೇವೆ. ಈ ಮೂಲಕ ಬದಲಾವಣೆ ಮಾಡುವುದೇ ಮುಖ್ಯ ಧ್ಯೇಯವಾಗಿದೆ. ಇದನ್ನು ನೆನಪಿಸುವುದಕ್ಕಾಗಿ ಪ್ರಶಿಕ್ಷಣ ನಡೆಸಲಾಗುತ್ತಿದೆ. ಇದನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು. ಇಲ್ಲಿನ ಭೈರಿದೇವರಕೊಪ್ಪದಲ್ಲಿರುವ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಬಿಜೆಪಿ ಕಾರ್ಪೋರೇಟರ್ಗಳ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಎನ್ನುವುದು ಅಹಂಕಾರವಲ್ಲ. ಅಧಿಕಾರ ಚಲಾಯಿಸಲು ಅಲ್ಲ. ದೊರೆತ ಅಧಿಕಾರದ ಅವಕಾಶವನ್ನು ಜನ ಸೇವೆಗೆ ಸಮರ್ಪಿಸವುದು ಮತ್ತು ಬದಲಾವಣೆಗೆ ಬಳಸಿಕೊಳ್ಳಬೇಕು. ಇದನ್ನು ಅಟಲ್ ಬಿಹಾರ ವಾಜಪೇಯಿ, ನರೇಂದ್ರ ಮೋದಿ ಸರ್ಕಾರ ಮಾಡಿ ತೋರಿಸಿದೆ ಎಂದರು. ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದ ಅವಕಾಶ ಸಿಕ್ಕಾಗ ದೇಶದಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆ ಮೂಲಕ ಶಿಕ್ಷಣ ಕ್ರಾಂತಿ, ಮೊಬೈಲ್ ಕ್ರಾಂತಿ ಮಾಡಿದರು. ಹಲವು ಸಣ್ಣ ಪುಟ್ಟ ದೇಶಗಳ ಸಾಲ ತೀರಿಸಿದ ಹೆಗ್ಗಳಿಗೆ ವಾಜಪೇಯಿ ಸರ್ಕಾರದ್ದು. ರಾಜಕಾರಣಿಗಳೇ ದೇಶದ ಪ್ರಧಾನ ಮಂತ್ರಿ ಆಗಬೇಕೆನ್ನುವವರ ಮಧ್ಯೆ ಮೋದಿ ಸರಕಾರ ವಿಜ್ಞಾನಿಯನ್ನು, ಅಕ್ಷರದ ಗಂಧಗಾಳಿ ಗೊತ್ತಿಲ್ಲದವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಈ ಮೂಲಕ ಸಣ್ಣ ಸಣ್ಣ ವಿಷಯಗಳು ದೊಡ್ಡ ಮಟ್ಟದ ಚರ್ಚೆಗ ಕಾರಣವಾಗುತ್ತವೆ ಎಂದರು. ಅವಕಾಶ ಸಿಕ್ಕಾಗ ಒಳ್ಳೆಯ, ಅತ್ಯತ್ತುಮ ಸರಕಾರ ನಡೆಸಿದವರು ನಾವು. ಅವಕಾಶ ಸಿಕ್ಕಾಗ ಅತ್ಯಂತ ಕೆಟ್ಟಆಡಳಿತ ಕೊಟ್ಟವರು ಸಿದ್ದರಾಮಯ್ಯ. ಇವರೆಡನ್ನೂ ತುಲನೆ ಮಾಡಿ ಜನರಿಗೆ ತಿಳಿ ಹೇಳುವ ಕಾರ್ಯವನ್ನು ಪಾಲಿಕೆ ಸದಸ್ಯರು ಮಾಡಬೇಕು ಎಂದು ಸಲಹೆ ಮಾಡಿದರು. ಈ ಮೊದಲು ಸ್ವಾತಂತ್ರ್ಯದ ಮೊದಲು, ನಂತರ ಎಂದು ಕರೆಯಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಭಾರತ 2014ರ ಮುನ್ನ ಮತ್ತು 2014ರ ನಂತರ ಹೇಗೆ ಎನ್ನುವಂತೆ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. 9 ವರ್ಷಗಳಿಂದ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಜಗದ್ಗುರು ಭಾರತ ನಿರ್ಮಿಸುವ ಕನಸು ಬಿಜೆಪಿಯದ್ದು. ಈ ನಿಟ್ಟಿನಲ್ಲಿ ಮೋದಿ ಸರಕಾರ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು. ಶಿಬಿರದಲ್ಲಿ ಮೊದಲನೇ ದಿನ ರಾಜ್ಯದ ವಿವಿಧ ನಗರ ಪಾಲಿಕೆಗಳ 167 ಜನ ಸದಸ್ಯರು ಪಾಲ್ಗೊಂಡಿದ್ದರು. ಮಾಜಿ ಸಚಿವ ಬಿ.ಸಿ. ನಾಗೇಶ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಲಿಂಗರಾಜ ಪಾಟೀಲ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ಶಾಸಕ ನಂದೀಶ ರೆಡ್ಡಿ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು. ದತ್ತಮೂರ್ತಿ ಕುಲಕರ್ಣಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.